ಕೆಟ್ಟ ರಾಜಕೀಯಕ್ಕೆ ತಕ್ಕ ಉತ್ತರ ಲೋಕಸತ್ತಾ?
ಬೆಂಗಳೂರು, ಫೆ. 23 : ನೀವು ಯಾವ ಪಕ್ಷಕ್ಕೆ ಈ ಬಾರಿ ಮತ ಹಾಕುತ್ತೀರಿ ಎಂದು ಯಾರನ್ನಾದರೂ ಕೇಳಿ ನೋಡಿ. ಕೇಳುಗರು ಮುಖ ಸಿಂಡರಿಸದಿದ್ದರೆ ಕೇಳಿ. ಎಲ್ಲವೂ ಒಂದೇ, ಎಲ್ಲವೂ ಭ್ರಷ್ಟವೇ, ಎಲ್ಲವೂ ಅಸಮರ್ಥವೇ ಎಂಬ ಅಭಿಪ್ರಾಯ ನೆಲೆಯೂರುವಂತೆ ಎಲ್ಲ ಪಕ್ಷಗಳು ನಡೆದುಕೊಂಡಿವೆ.
ಅಂತಹುದರಲ್ಲಿ, ಸುಧಾರಣೆ, ಅಭಿವೃದ್ಧಿ ಮರೀಚಿಕೆಯಾಗಿರುವ ಈ ಸಂದರ್ಭದಲ್ಲಿ, ಭ್ರಷ್ಟಾಚಾರವನ್ನು ತೊಡೆದುಹಾಕುವ ಉದ್ದೇಶದಿಂದ ಲೋಕಸತ್ತಾ ಪಕ್ಷ ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿದೆ. ವಿಜ್ಞಾನ ಮತ್ತು ತಾಂತ್ರಿಕತೆಯಲ್ಲಿ ಹೆಸರು ಪಡೆದಿರುವ ಕರ್ನಾಟಕ ರಾಜ್ಯಕ್ಕೆ ಗತವೈಭವವನ್ನು ಮರಳಿ ತರುವ ಪಣವನ್ನು ಲೋಕಸತ್ತಾ ತೊಟ್ಟಿದೆ.
ಡಾ. ಜಯಪ್ರಕಾಶ ನಾರಾಯಣ (ಡಾ. ಜೆಪಿ) ಅವರು ಸ್ಥಾಪಿಸಿರುವ ಲೋಕಸತ್ತಾ ಪಕ್ಷ, ಈ ನಿಟ್ಟಿನಲ್ಲಿ ಭ್ರಷ್ಟವಿರೋಧಿ ಯುವಪಡೆಯನ್ನು ಕಟ್ಟುವಲ್ಲಿ ನಿರತವಾಗಿದ್ದು, ಮತವನ್ನು ಭ್ರಷ್ಟನಲ್ಲದ ಅಭ್ಯರ್ಥಿಗೇ ನೀಡಿ ಎಂಬ ಸಂದೇಶವನ್ನು ಎಲ್ಲೆಡೆ ಸಾರುತ್ತಿದೆ. ಇಂತಿರುವ ಲೋಕಸತ್ತಾ ಪಕ್ಷ ಬೆಂಗಳೂರಿನಲ್ಲಿ ಶನಿವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆ ಬರೀ ಭರವಸೆಗಳ ಮೂಟೆಯಲ್ಲ ಎಂದು ಒತ್ತಿ ಹೇಳಿದೆ. ಡಾ. ಅಶ್ವಿನ್ ಮಹೇಶ್ ಅವರು ಕರ್ನಾಟಕ ಲೋಕಸತ್ತಾದ ಜವಾಬ್ದಾರಿ ಹೊತ್ತಿದ್ದಾರೆ.
ಲೋಕಸತ್ತಾ ಪ್ರಣಾಳಿಕೆಯ ಮುಖ್ಯಾಂಶಗಳು ಕೆಳಗಿನಂತಿವೆ
ಲೋಕಸತ್ತಾ ಪ್ರಣಾಳಿಕೆ : ರೈತರಿಗಾಗಿ ಯೋಜನೆ
* ಮಾರುಕಟ್ಟೆಯ ಬೆಲೆ ಏರಿಳಿತ ಹಾಗೂ ಪ್ರಕೃತಿಯ ವೈಪರಿತ್ಯಗಳಿಂದ ರೈತರನ್ನು ಸಂರಕ್ಷಿಸಲು ಸರ್ಕಾರದ ಸಹಯೋಗದೊಂದಿಗೆ ಸಮಗ್ರ ವ್ಯವಸಾಯ ವಿಮೆ.
* ಪ್ರತಿ 3000 ಎಕರೆಗೆ ಒಂದರಂತೆ ವ್ಯವಸಾಯ ಸಂರಕ್ಷಣಾ ಕೇಂದ್ರ ಸ್ಥಾಪನೆ. ಪ್ರತಿಯೊಬ್ಬ ರೈತನಿಗೆ ಸಾವಯವ ವ್ಯವಸಾಯ ಮಾಡಲು ಬೇಕಾದ ಮಾರ್ಗದರ್ಶನ.
* ಕರ್ನಾಟಕದ ಪ್ರತಿ ಹಳ್ಳಿಗೂ ದಿನಕ್ಕೆ 12 ಘಂಟೆಗಳ ಕಾಲ ಲಭ್ಯವಿರುವ 3-ಪೇಸ್ ನಿರಂತರ ವಿದ್ಯುತ್ ಸೌಲಭ್ಯ.
* 10 HP ಸಾಮರ್ಥ್ಯವರೆಗಿನ ಪಂಪ್ ಸೆಟ್ ಹೊಂದಿರುವ ರೈತರಿಗೆ ವಿದ್ಯುತ್ ದರದಲ್ಲಿ ರಿಯಾಯಿತಿ ನೀಡಲಾಗುವದು.
* ನಗರವಾಸಿಗಳಂತೆ, ರೈತರಿಗೂ ಕೂಡ ಸುಲಭದಲ್ಲಿ ಸಾಲ ಪಡೆಯುವ ಅವಕಾಶಗಳ ನಿರ್ಮಾಣ.
ಲೋಕಸತ್ತಾ ಪ್ರಣಾಳಿಕೆ : ಉದ್ಯೋಗಿಗಳಿಗೆ ಆದ್ಯತೆ
* 2 ಮತ್ತು 3ನೇ ವರ್ಗದ ನಗರಗಳಿಗೆ ಸ್ಥಳೀಯ ವಾಣಿಜ್ಯ ಅಭಿವೃದ್ಧಿಪಡಿಸಲು ವಿಶೇಷ ಯೋಜನೆಗಳು.
* ಯೋಜನಾ ಪ್ರಾಧಿಕಾರಗಳಿಂದ ರೈತರ ಜಮೀನು ತೆರವುಗೊಳಿಸುವುದಕ್ಕೆ ಕಡಿವಾಣ.
* ಸ್ವಂತ ಉದ್ಯೋಗ ಮಾಡುತ್ತಿರುವ ಹಾಗೂ ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಬ್ಯಾಂಕ್ ಸಾಲಗಳು.
* ಹೊಸ ಕೌಶಲ್ಯಗಳನ್ನು ಕಲಿಯ ಬಯಸುವ ಪ್ರತಿಯೊಬ್ಬ ವ್ಯಕ್ತಿಗೆ ಕೈಗಾರಿಕಾ ಸಂಸ್ಥೆಗಳ ಸಹಾಯದೊಂದಿಗೆ ಆಯಾ ಉದ್ಯೋಗಕ್ಕೆ ಸಂಬಂಧಿಸಿದ ತರಬೇತಿ.
* ಆಯಾ ವರ್ಗಗಳ ಖರ್ಚು ವೆಚ್ಚಕ್ಕೆ ತಕ್ಕಂತೆ, ಎಲ್ಲಾ ಕೆಲಸಗಳಿಗೆ ಕನಿಷ್ಠ ವೇತನ ನಿಗದಿ. ಕೂಲಿ ನೌಕರರನ್ನು ದುಡಿಸುಕ್ಕೊಳ್ಳುವುದಕ್ಕೆ ಕಡಿವಾಣ.
ಲೋಕಸತ್ತಾ ಪ್ರಣಾಳಿಕೆ : ಮಹಿಳೆಯರಿಗೆ ಮನ್ನಣೆ
* ಪ್ರತಿಯೊಂದು ಪೊಲೀಸ್ ಸ್ಟೇಷನ್ನಲ್ಲಿ ಕಡ್ಡಾಯವಾಗಿ ಓರ್ವ ಮಹಿಳಾ ಪೋಲೀಸ್ ಅಧಿಕಾರಿಣಿಯ ನೇಮಕ.
* ಎಲ್ಲ ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ಸೂಕ್ಷ್ಮವಾದ ದೂರುಗಳನ್ನು ಹೇಗೆ ನೊಂದಾಯಿಸಬೇಕು ಮತ್ತು ನಿಭಾಯಿಸಬೇಕೆಂದು ವಿಶೇಷ ತರಬೇತಿ.
* ಸಾರಿಗೆ ವಾಹನಗಳಲ್ಲಿ ಮಹಿಳೆಯರ ಸಂರಕ್ಷಣೆ, ಅದರ ಬಗ್ಗೆ ಅರಿವು ಮೂಡಿಸುವಿಕೆ.
* ಗ್ರಾಮಗಳಲ್ಲಿರುವ ಎಲ್ಲ ಸ್ತ್ರೀಯರಿಗೆ ಹಾಗೂ ಬಾಲಕಿಯರಿಗೆ ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ಉಚಿತ ಶಿಕ್ಷಣ.
* ಪುರುಷ ಹಾಗೂ ಸ್ತ್ರೀಯರಿಗೆ ವೇತನದಲ್ಲಿ ಸಮಾನತೆ.
* ಎಲ್ಲಾ ಕಾಲೇಜ್ ಹಾಗೂ ವಿಶ್ವವಿದ್ಯಾಲಗಳಲ್ಲಿ ಕನಿಷ್ಠ 30%ರಷ್ಟು ಸ್ಥಾನಗಳು ವಿದ್ಯಾರ್ಥಿನಿಯರಿಗೆ ಮೀಸಲು.
ಲೋಕಸತ್ತಾ ಪ್ರಣಾಳಿಕೆ : ಪ್ರತಿಭಾನ್ವಿತರಿಗೆ ಪುರಸ್ಕಾರ
* ಸರ್ಕಾರದಿಂದ ಗುರುತಿಸಲ್ಪಟ್ಟ ಖಾಸಗಿ ಆರೋಗ್ಯ ಕೇಂದ್ರಗಳ ಸಹಯೋಗದೊಂದಿಗೆ ಬಡವರಿಗೆ ಸಮಗ್ರ ಆರೋಗ್ಯ ವಿಮಾ ಯೋಜನೆ.
* ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ದುರ್ಬಲರಾದ ಗ್ರಾಮಾಂತರ ಪದವೀಧರರಿಗೆ ವಿಶೇಷ ಸ್ಕಾಲರ್ ಷಿಪ್ ಕಾರ್ಯಕ್ರಮ.
* ಎಲ್ಲ ಮಕ್ಕಳಿಗೆ ಅವರ ಅಥವಾ ಅವರ ಪಾಲಕರಿಗೆ ಇಷ್ಟವಾದ ಶಾಲೆಗೆ ಸೇರಲು ವಿಶೇಷ ಸ್ಕಾಲರ್ ಷಿಪ್.
* ಸರ್ಕಾರಿ ಶಾಲೆಗಳಲ್ಲಿಯೇ 9ನೇ ತರಗತಿ ಮೇಲ್ಪಟ್ಟವರಿಗೆ ವಿಶೇಷ ತರಬೇತಿ ಶಿಬಿರಗಳು
ಲೋಕಸತ್ತಾ ಪ್ರಣಾಳಿಕೆ : ಕನ್ನಡ ಸಂಸ್ಕೃತಿ ರಕ್ಷಣೆ
* ಕರ್ನಾಟಕದ ಸಾಂಸ್ಕೃತಿಕ ಹಿನ್ನೆಲೆಯನ್ನು ಬೆಳೆಸಲು ಮತ್ತು ಪ್ರಸಿದ್ಧ ಪ್ರದೇಶಗಳನ್ನು ಉಳಿಸಲು ವಿಶೇಷ ಆಯೋಗದ ರಚನೆ.
* ಸರ್ಕಾರಿ ಶಾಲೆಗಳಲ್ಲಿ ಕಲೆಯನ್ನು ಪ್ರೋತ್ಸಾಹಿಸಲು 'ಮಕ್ಕಳ ಕಲೆ ಮತ್ತು ನಾಟಕ'ಗಳಿಗೆಂದೇ ವಿಶೇಷ ಆರ್ಥಿಕ ಯೋಜನೆ.
* ಕನ್ನಡೇತರರು ಸುಲಭವಾಗಿ ಕನ್ನಡ ಮಾತನಾಡಲು ಅನುಕೂಲವಾಗುವಂತೆ, ವಿಶೇಷ ಕನ್ನಡ ಭಾಷಾ ಕಲಿಕೆ ಕೇಂದ್ರಗಳ ಸ್ಥಾಪನೆ.
* ಕರ್ನಾಟಕ ರಾಜ್ಯಾದ್ಯಂತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುವ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ಬೆಂಬಲಿಸಲು ಕರ್ನಾಟಕ ಕ್ರೀಡಾ ಸ್ಪರ್ಧಾ ಆಯೋಗದ ನೇಮಕ.
ಲೋಕಸತ್ತಾ ಪ್ರಣಾಳಿಕೆ : ಅಭಿವೃದ್ಧಿ ಮಂತ್ರ
* ರಾಜ್ಯ ಬೊಕ್ಕಸದಿಂದ ರಾಜ್ಯದ ಎಲ್ಲ ಗ್ರಾಮಾಂತರ ಹಾಗೂ ಪುರಸಭಾ ಸಂಸ್ಥೆಗಳಿಗೆ ಖಚಿತವಾದ ಹಣ ಪ್ರತಿ ವರ್ಷ ವರ್ಗಾವಣೆ.
* ಪ್ರತಿ ಗ್ರಾಮದಲ್ಲೂ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳಿಂದ ನಡೆಸಲ್ಪಡುವ ನ್ಯಾಯ ಬೆಲೆ ಅಂಗಡಿಗಳ ಸ್ಥಾಪನೆ.
* ಕರ್ನಾಟಕದ ಎಲ್ಲ ಇಲಾಖೆಗಳ ಮಾಹಿತಿ ಮತ್ತು ಕಾಗದ ಪತ್ರಗಳನ್ನು ಸುಲಭವಾಗಿ ಸಿಗುವ ಹಾಗೆ ಅಂತರ್ಜಾಲದಲ್ಲಿಡಲು ಒಂದು ಸಮಗ್ರ ಆನ್ ಲೈನ್ ಕಾರ್ಯಕ್ರಮ.
* ಎಲ್ಲ ಮಾಹಿತಿ ಮತ್ತು ಕಾಗದ ಪತ್ರಗಳ ಸೇವೆಗಳಿಗೆ ಕಡ್ಡಾಯವಾಗಿ 'ಸಕಾಲ'ದ ಎಲ್ಲ ನಿಯಮಗಳನ್ನು ಅನ್ವಯಿಸಲಾಗುವದು.
ಲೋಕಸತ್ತಾ ಪ್ರಣಾಳಿಕೆ : ಭ್ರಷ್ಟಾಚಾರದ ವಿರುದ್ಧ ಯುದ್ಧ
* ಲೋಕಾಯುಕ್ತರ ಹುದ್ದೆ ಯಾವಾಗಲೂ ಭರ್ತಿಯಾಗಿರುವಂತೆ ನೋಡಿಕೊಳ್ಳುವದು ಮತ್ತು ಲೋಕಾಯುಕ್ತರಿಗೆ ಪೂರ್ಣ ಪ್ರಮಾಣದ ಅಧಿಕಾರವಿರುವಂತೆ ಕಾನೂನು ಜಾರಿ.
* ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಮದ್ಯವರ್ತಿಗಳ ಪ್ರವೇಶ ನಿಷಿದ್ಧ. ಎಲ್ಲ ಸರ್ಕಾರಿ ಸೇವೆಗಳಿಗಾಗಿ ಸರಕಾರದಿಂದ ನೇಮಿಸಲ್ಪಟ್ಟ 'ಸಹಾಯಕ ಅಧಿಕಾರಿಗಳು ಅಲ್ಲಿರುತ್ತಾರೆ.
* ಇಂಟರ್ನೆಟ್ ಹಾಗೂ ದೂರವಾಣಿಗಳ ಮೂಲಕ FIRಗಳ ನೊಂದಣಿ.
ಲೋಕಸತ್ತಾ ಪ್ರಣಾಳಿಕೆ : ಮೂಲಭೂತ ಸೌಕರ್ಯ
* ಆಡಳಿತಕ್ಕಾಗಿ ಯೋಜನೆ, ನಗರ ನಿರ್ಮಾಣ ಯೋಜನೆ, ಸಾಮಾಜಿಕ ಯೋಜನೆಗಳು, ವಾಣಿಜ್ಯ ಯೋಜನೆಗಳಿಗೆ ಆಯೋಗ.
* ಎಲ್ಲ ಕೊಳವೆ ಬಾವಿಗಳನ್ನು ನೊಂದಾಯಿಸಲಾಗುವದು ಮತ್ತು ನಿಯಮಿತ- ಗೊಳಿಸಲಾಗುವದು. ಕಠಿಣ ಪರೀಕ್ಷೆ ಮತ್ತು ವಿಧಾನಗಳ ಮೂಲಕ ಕಡಿಮೆ ಆಳದಲ್ಲಿ ನೀರು ಸಿಗುವಂತೆ ಮಾಡುವುದು.
* ಡಂಪಿಂಗ್ ಸಾಕು - ಬೆಂಗಳೂರು ಮತ್ತಿತರ ಪ್ರಮುಖ ನಗರಗಳಲ್ಲಿ ಪುರಸಭೆಯ ಮಟ್ಟದಲ್ಲಿ ಸ್ಥಳೀಯವಾಗಿ ಕಸವನ್ನು ವಿಲೇವಾರಿ ಮಾಡಲು ಕಾನೂನಿನಲ್ಲಿ ಬದಲಾವಣೆ.
* ಪ್ರತಿ ಕೆರೆಯನ್ನು ಶುದ್ಧಿಕರಿಸಿ ಅದನ್ನು ಕಾಪಾಡಿಕೊಂಡು ಹೋಗಲು ಸ್ಥಳೀಯ ಸಂಘಟನೆಗಳಿಗೆ ಒಪ್ಪಿಸಲಾಗುವದು.
* 60- ಅಡಿ ರಸ್ತೆಯಲ್ಲಿ ಖಡ್ಡಾಯವಾಗಿ 3 ಮೀಟರ್ ಅಗಲದ ಪಾದಚಾರಿ ರಸ್ತೆ ನಿರ್ಮಾಣ (ಅವಶ್ಯವಿದ್ದರೆ ವಾಹನ ಸಂಚಾರಿ ಭಾಗವನ್ನು ಕಡಿಮೆ ಮಾಡಲಾಗುವದು)