ಮೈಸೂರು ಸೆಷನ್ಸ್ ಕೋರ್ಟ್ನಿಂದ ಕಾಮುಕನಿಗೆ ಗಲ್ಲು

ಮೈಸೂರು ತಾಲೂಕಿನ ಜಯಪುರ ಹೋಬಳಿಯ ಯಡಹಳ್ಳಿ ಗ್ರಾಮದ ನಂಜಪ್ಪ, ಸರಿಯಾಗಿ ಎರಡು ವರ್ಷಗಳ ಹಿಂದೆ 2011ರ ಫೆಬ್ರವರಿ 24ರಂದು ಅಜ್ಜಿಯ ಮನೆಗೆ ಬಂದಿದ್ದ ರಂಜಿತಾ ಐಶ್ವರ್ಯ ಎಂಬ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೊಂದು ಶಾಲೆಯ ಹಿಂಭಾಗದಲ್ಲಿ ಬಿಸಾಕಿದ್ದ.
ಈ ಪ್ರಕರಣದ ವಿಚಾರಣೆ ನಡೆಸಿದ್ದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರುದ್ರಮುನಿ ಅವರು, ನಂಜಪ್ಪ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದರು. ಶಿಕ್ಷೆಯ ಪ್ರಮಾಣ ತಿಳಿಸಲು ಶನಿವಾರ ದಿನ ನಿಗದಿಪಡಿಸಿದ್ದರು. ಅದರಂತೆ, ಪುಟ್ಟ ಬಾಲಕಿಯನ್ನು ಭೀಕರವಾಗಿ ಹತ್ಯೆಗೈದಿದ್ದ ನಂಜಪ್ಪನಿಗೆ ನ್ಯಾ. ರುದ್ರಮುನಿ ಅವರು, ವಿರಳಾತಿ ವಿರಳ ಪ್ರಕರಣಗಳಲ್ಲಿ ಕೊಡುವ ಮರಣದಂಡನೆ ಶಿಕ್ಷೆಯನ್ನು ವಿಧಿಸಿದ್ದಾರೆ.
ಪ್ರಕರಣದ ವಿವರ : ಮೈಸೂರು ತಾಲೂಕಿನ ಹಳ್ಳಿಕೆರೆಹುಂಡಿಯ ನಿವಾಸಿಯಾಗಿರುವ ಮೂರ್ತಿ ಮತ್ತು ಸುಕನ್ಯಾ ಎಂಬವರ ಮಗಳು ರಂಜಿತಾ ಐಶ್ವರ್ಯ ಅಜ್ಜಿ ದೇವಮ್ಮನ ಮನೆಯಲ್ಲಿ ಉಳಿದುಕೊಂಡಿದ್ದಳು. ಆಗ ಇದ್ದಕ್ಕಿದ್ದಂತೆ ಐಶ್ವರ್ಯ ಕಾಣೆಯಾಗಿದ್ದಳು. ಸಾಕಷ್ಟು ಹುಡುಕಲಾಗಿ ಯಡಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಹಿಂಬದಿಯಲ್ಲಿ ಆಕೆಯ ಶವ ಸಿಕ್ಕಿತ್ತು.
ಆಕೆಯ ಮುಖವನ್ನು ಕಲ್ಲಿನಿಂದ ಜಜ್ಜಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಸಾಬೀತಾಗಿತ್ತು. ಅಜ್ಜಿಯ ಸಂಬಂಧಿಕನೇ ಆಗಿದ್ದ ನಂಜಪ್ಪ, ಆಗಾಗ ಐಶ್ವರ್ಯ ಬಗ್ಗೆ ವಿಚಾರಿಸುತ್ತಿದ್ದ. ಆತನ ನಡತೆಯೇ ಅನುಮಾನಾಸ್ಪದವಾಗಿ ಕಂಡಾಗ ಅಜ್ಜಿ ದೇವಮ್ಮ ಯಡಹಳ್ಳಿ ಪೊಲೀಸ್ ಠಾಣೆಯಲ್ಲಿ ನಂಜಪ್ಪನ ವಿರುದ್ಧ ಕೇಸು ದಾಖಲಿಸಿದ್ದರು. ವಿಚಾರಣೆ ನಡೆಸಿದಾಗ ಐಶ್ವರ್ಯಳ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದನ್ನು ನಂಜಪ್ಪ ಒಪ್ಪಿಕೊಂಡಿದ್ದ.
ಆರೋಪಿಯಿಂದ ಆರೋಪ ನಿರಾಕರಣೆ : ಮರಣದಂಡನೆ ಶಿಕ್ಷೆ ವಿಧಿಸಿದ ನಂತರ ಮಾಧ್ಯಮದವರೊಡನೆ ಮಾತನಾಡಿ, ತನ್ನ ಮೇಲಿನ ದ್ವೇಷದಿಂದ ಸುಳ್ಳು ಆರೋಪವನ್ನು ತನ್ನ ಮೇಲೆ ಹೊರಿಸಲಾಗಿದೆ. ತಾನು ಯಾವುದೇ ಅಪರಾಧ ಎಸಗಿಲ್ಲ, ತಾನು ನಿರಪರಾಧಿ ಎಂದು ಹೇಳಿದ್ದಾನೆ. ತನ್ನ ಮೇಲಿನ ವೈಷಮ್ಯದಿಂದ ತಮ್ಮ ಮೇಲೆ ಸಲ್ಲದ ಆರೋಪ ಹೊರಿಸಿ ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ಆತ ನುಡಿದಿದ್ದಾನೆ.












Click it and Unblock the Notifications