ಹೆಲಿಕಾಪ್ಟರ್ ಹಗರಣ ಫಿಕ್ಸಾಗಿದ್ದು ಏರೋ ಇಂಡಿಯಾದಲ್ಲಿ!
ಬೆಂಗಳೂರು, ಫೆ.14: ನಮಗೇನು ಯಲಹಂಕದಲ್ಲಿ 'ಏರೋ ಇಂಡಿಯಾ' ಷೋಗೆ ಹೋಗ್ತೀವಿ. ಅಲ್ಲಿ ಉಕ್ಕಿನ ಹಕ್ಕಿಗಳ ಹಾರಾಟವನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತೇವೆ. ಆದರೆ ಅಲ್ಲಿ ಭ್ರಷ್ಟ ತಗಡು ಹಕ್ಕಿಗಳೂ ಹಾರಾಡುತ್ತಿರುತ್ತವೆ. ಅವು ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಆದರೆ ಅದೆಲ್ಲಾ ಬಯಲಾಗುವಷ್ಟೊತ್ತಿಗೆ ದೇಶದ ಅರ್ಥ ವ್ಯವಸ್ಥೆ ಹಾಗಿರಲಿ, ರಕ್ಷಣಾ ವ್ಯವಸ್ಥೆಯನ್ನೂ ಹಳ್ಳಹಿಡಿಸಿರುತ್ತಾರೆ, ಈ ನಮಕ್ ಹರಾಮ್ ಜನ.
ಮೊನ್ನೆಯಷ್ಟೇ ಬಯಲಿಗೆ ಬಿದ್ದ 3,600 ಕೋಟಿ ರೂ ಹೆಲಿಕಾಪ್ಟರ್ ಖರೀದಿ ಹಗರಣದ ಬಗ್ಗೆ ಕೇಳಿದ್ದೀರಲ್ಲಾ, ಅದು Fix ಆಗಿದ್ದು ನಮ್ಮ ಯಲಹಂಕದಲ್ಲಂತೆ! ನಾವು ಅತ್ತ ಆಗಸದತ್ತ ಮುಖ ಮಾಡಿರುವಾಗ ತಗಡು ಜನ ಈ ಅಕ್ರಮಕ್ಕೆ ಕೈಹಾಕಿದ್ದರಂತೆ.

ಹಗರಣದ ರೂವಾರಿಯಾಗಿ ಮಾಜಿ ವಾಯುಸೇನೆ ಮುಖ್ಯಸ್ಥ ಎಸ್ ಪಿ ತ್ಯಾಗಿ ಸಾಹೇಬರು ನಾನು ಸಾಚಾ ಎಂದು roof topನಿಂದ ಕೂಗುತ್ತಿದ್ದರೂ ಎಲ್ಲರ ಕಣ್ಣು ತ್ಯಾಗಿಯತ್ತಲೇ ನೆಟ್ಟಿವೆ. ಈ ಮನುಷ್ಯನನ್ನು ಹಗರಣದಲ್ಲಿ fix ಮಾಡಲು ಇಟಲಿಯವರು ಮಧ್ಯವರ್ತಿಗಳ ಜತೆಗೆ ಹಣ, ಹೆಣ್ಣು ಎರಡನ್ನೂ ಯಥೇಚ್ಚವಾಗಿ ಬಳಸಿದ್ದಾರೆ ಎಂಬ ಆಘಾತಕಾರಿ ಸುದ್ದಿಯೂ ಸಿಕ್ಕಿದೆ.
'ತ್ಯಾಗಿಯನ್ನು ತಲುಪಲು ಎಲ್ಲ ದುರ್ಮಾರ್ಗಗಳನ್ನೂ ಬಳಸಲಾಗಿದೆ' ಎನ್ನುತ್ತಾರೆ ಇಟಲಿಯ ತನಿಖಾಧಿಕಾರಿಗಳು. ಪ್ರಧಾನ ದಲ್ಲಾಳಿಯೊಬ್ಬ ತನಿಖಾಧಿಕಾರಿಗಳಿಗೆ ತಿಳಿಸಿರುವಂತೆ ಸಮವಸ್ತ್ರದಲ್ಲಿದ್ದ ತ್ಯಾಗಿಯನ್ನು ಆರೇಳು ಬಾರಿ ಭೇಟಿಯಾಗಿದ್ದನಂತೆ. ಅದೂ ತ್ಯಾಗಿ ಇನ್ನೂ ಅಧಿಕಾರದಲ್ಲಿದ್ದಾಗ... ಬೆಂಗಳೂರಿನಲ್ಲಿ ನಡೆಯುವ 'ಏರೋ ಇಂಡಿಯಾ' ಪ್ರದರ್ಶನದ ವೇಳೆ (2005 ಮತ್ತು 2007ರಲ್ಲಿ) ಎಂದು ಹೇಳಿದ್ದಾನೆ. ತ್ಯಾಗಿಯ ಸಂಬಂಧಿಕರು (ಜೂಲಿ, ದೋಸ್ಕಾ ಮತ್ತು ಸಂದೀಪ್) ಈ ಅಕ್ರಮಕ್ಕೆ ಸೇತುವೆಗಳಾಗಿ ಕೆಲಸ ಮಾಡಿದ್ದಾರೆ.
ಮೊನ್ನೆ ಹಗರಣ ಬಯಲಿಗೆ ಬಿದ್ದಾಗ ಹಾವು ತುಳಿದವರಂತೆ ಮಾತನಾಡಿದ್ದ ತ್ಯಾಗಿ ಸಾಹೇಬರು 'ನಾನವನಲ್ಲ, ನಾನವನಲ್ಲ!' ಎಂದು ಬೊಬ್ಬಿಟ್ಟಿದ್ದರು. ಆಮೇಲೆ ಸಾವರಿಸಿಕೊಂಡು 'ಇಲ್ಲಾ, ಮಧ್ಯವರ್ತಿಯನ್ನು ಕೇವಲ ಒಂದೇ ಒಂದು ಬಾರಿ ಭೇಟಿ ಮಾಡಿದ್ದೆ. ಅದೂ ನಿವೃತ್ತಿಯನಂತರ' ಎಂದಿದ್ದರು.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications