ಸಿದ್ದರಾಮಯ್ಯ ತಾಕತ್ತಿಗೆ ಸವಾಲು ಹಾಕಿದ ಕುಮಾರಸ್ವಾಮಿ

ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ದ, ನಿಮಗೆ ತಾಕತ್ತಿದ್ದರೆ ನನ್ನ ಸವಾಲನ್ನು ಸ್ವೀಕರಿಸಿ ಚರ್ಚೆಗೆ ಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಸವಾಲೆಸೆದಿದ್ದಾರೆ.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ನಾನಾಗಲಿ ನನ್ನ ಪಕ್ಷವಾಗಲಿ ಜಾತಿ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಜಾತಿ ಜಾತಿಯೆಂದು ರಾಜಕಾರಣ ಮಾಡಿಕೊಂಡು ಬಂದ ನೀವು ನಿಮ್ಮ ಸಮುದಾಯದ ಅಭಿವೃದ್ದಿಗೆ ಮಾಡಿದ ಕೆಲಸವೇನಾದರೂ ಇದೆಯಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಮ್ಮದು ಅಪ್ಪ ಮಕ್ಕಳ ಪಕ್ಷ ಎಂದು ಹೋದಲೆಲ್ಲಾ ನಮ್ಮ ತೇಜೋವಧೆ ಮಾಡಿಕೊಂಡು ಬಂದಿದ್ದೀರಾ, ರಾಜ್ಯದ ಜನತೆ ಜಾಣರಿದ್ದಾರೆ. ನಿಮ್ಮ ಪಕ್ಷದ ಬಣ್ಣ ಈ ಬಾರಿಯ ಚುನಾವಣೆಯಲ್ಲಿ ಬಯಲಾಗಲಿದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಯಾವ ಕಾರಣಕ್ಕಾಗಿ ನೀವು ಅಂದು ಜೆಡಿಎಸ್ ಪಕ್ಷ ತೊರೆದಿರಿ? ನಿಮಗೆ ಮುಖ್ಯಮಂತ್ರಿ ಪದವಿ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಅಲ್ಲವೇ? ದೇವೇಗೌಡರು ನಿಮ್ಮನ್ನು ಶಾಸಕರನ್ನಾಗಿ ಮಾಡಿದರು, ಮಂತ್ರಿಯನ್ನಾಗಿ ಮಾಡಿದರು.
ನಂತರ ಉಪಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದರು. ಈಗ ನಮ್ಮನ್ನೇ ದೂರುತ್ತಿದ್ದೀರಾ. ಮನುಷ್ಯನಿಗೆ ನಿಯತ್ತು ಬಹಳ ಮುಖ್ಯ ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನು ರಾಜಕೀಯಕ್ಕೆ ಬರುವ ಮೊದಲು ಸಿನಿಮಾ ನಿರ್ಮಾಪಕನಾಗಿದ್ದೆ, ವಿತರಕಾನಾಗಿದ್ದೆ. ಅಲ್ಲಿ ಸಂಪಾದಿಸಿದ ದುಡ್ಡನ್ನೆಲ್ಲಾ ನಿಮಗೆ ಸುರಿದೆ. ನೀವು ನಮಗೆ ವಿಶ್ವಾಸದ್ರೋಹದ ಕೆಲಸ ಮಾಡಿ ಪಕ್ಷ ತೊರೆದಿರಿ ಎಂದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು.
ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಟ್ಟು ನೋಡಿ. ಕ್ಷೇತ್ರದ ಅಭಿವೃದ್ದಿಯನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿ ತೋರಿಸುತ್ತೇನೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇನೆ ಎಂದು ಟಿ ನರಸೀಪುರದ ಜನತೆಗೆ ಕುಮಾರಸ್ವಾಮಿ ಆಶ್ವಾಸನೆ ನೀಡಿದರು.
ಕಾವೇರಿ ಐತೀರ್ಪಿನ ಹೆಸರಿನಲ್ಲಿ ಯಡಿಯೂರಪ್ಪ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಇದಕ್ಕೆ ಜನರು ಮರಳಾಗುವುದಿಲ್ಲ, ನಾಟಕ ಸಾಕು ಮಾಡಿ ಎಂದು ಯಡಿಯೂರಪ್ಪ ಪಾದಯಾತ್ರೆಗೆ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.











Click it and Unblock the Notifications