ಸರ್ಕಾರ ಬೀಳಿಸೋದಾದ್ರೆ 20 ಶಾಸಕರನ್ನ ನಿಲ್ಲಿಸ್ತಿದ್ದೆ
ಬೆಂಗಳೂರು, ಜ.28: ಕೆಜೆಪಿ ಬೆಂಬಲಿತ ಶಾಸಕರನ್ನು ಛೂ ಬಿಟ್ಟು ಬಿಜೆಪಿ ನಾಯಕರ ತಲೆಯಲ್ಲಿ ಹುಳ ಬಿಡಲು ಯತ್ನಿಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ. ಶೆಟ್ಟರ್ ಅವರ ಸರ್ಕಾರ ಸದ್ಯಕ್ಕೆ ನಿರಾಂತಕವಾಗಿ ಬಜೆಟ್ ಅಧಿವೇಶನಕ್ಕೆ ಭರ್ಜರಿ ತಯಾರಿ ನಡೆಸುತ್ತಿದೆ.
ಬಜೆಟ್ ಪೂರ್ವ ಮಾತುಕತೆ ನಡೆಸಲು ಸುಮಾರು 15ಕ್ಕೂ ಅಧಿಕ ಮಠಗಳ 60 ಸ್ವಾಮೀಜಿಗಳ ಜೊತೆ ಸಿಎಂ ಜಗದೀಶ್ ಶೆಟ್ಟರ್ ಅವರು ಸಮಾಲೋಚನೆ ನಡೆಸಿದ್ದರ ಬಗ್ಗೆ ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮಾತ್ರ ತಣ್ಣನೆ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರ ಬೀಳಸಲ್ಲ: ಸರ್ಕಾರ ಬೀಳಿಸುವ ಇಚ್ಛೆ ಇದ್ದರೆ 13 ಶಾಸಕರ ಬದಲಿಗೆ 20 ಶಾಸಕರನ್ನು ಕಳಿಸಿ ಅಂದೇ ಸರ್ಕಾರ ಕೆಳಗಿಳಿಸುತ್ತಿದ್ದೆ. ಈ ಹಿಂದೆ ಡಿ.9 ರಂದೆ ಎಲ್ಲಾ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ, ನಾವೇ ಸಿಎಂ ಪಟ್ಟದ ಮೇಲೆ ಕೂರಿಸಿ ಈಗ ಅಲ್ಲಿಂದ ದಬ್ಬುವುದು ಸರಿಯಲ್ಲ.
ಕೆಜೆಪಿ ಸ್ಥಾಪನೆ ಉದ್ದೇಶ ಶೆಟ್ಟರ್ ಸರ್ಕಾರ ಬೀಳಿಸುವುದಲ್ಲ. ಜಗದೀಶ್ ಶೆಟ್ಟರ್ ಅವರು ಬಜೆಟ್ ಮಂಡನೆ ಮಾಡಲು ನಾವು ಅಡ್ಡಿಪಡಿಸುವುದಿಲ್ಲ. ಇನ್ನು ಯಾವೊಬ್ಬ ಶಾಸಕರು ನಮ್ಮ ಕಡೆಯಿಂದ ರಾಜೀನಾಮೆ ನೀಡುವುದಿಲ್ಲ ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಇದಕ್ಕೂ ಮುನ್ನ ರಾಜೀನಾಮೆ ಪತ್ರ ಹಿಡಿದು ನಿಂತ ಯಡಿಯೂರಪ್ಪ ಬೆಂಬಲಿತ 12 ಶಾಸಕರ ವಿರುದ್ಧ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ನೆಲಮಂಗಲ ಶಾಸಕ ನಾಗರಾಜ್ ಅವರು ಸ್ಪೀಕರ್ ಕಾರ್ಯದರ್ಶಿ ಓಂ ಪ್ರಕಾಶ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಸರ್ಕಾರ ಉಳಿಸಿಕೊಳ್ಳುವುದಕ್ಕಾಗಿ ವಾಮಮಾರ್ಗದಲ್ಲಿ ನಡೆಯುವುದಿಲ್ಲ. ಶಾಸಕರ ಖರೀದಿಯಂತಹ ಕುದುರೆ ವ್ಯಾಪಾರಕ್ಕೆ ಕೈ ಹಾಕುವುದಿಲ್ಲ. ಬಿಜೆಪಿಯ ಘನತೆ-ಗೌರವಕ್ಕೆ ಕಿಂಚಿತ್ತೂ ಚ್ಯುತಿ ಬಾರದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದು ಶೆಟ್ಟರ್ ಹೇಳಿದರು.
ರಾಜ್ಯದ 60ಕ್ಕೂ ಹೆಚ್ಚು ಮಠಾಧೀಶರು ನಾಡಿಗೆ ಉತ್ತಮ ಬಜೆಟ್ ನೀಡುವಂತೆ ಸಲಹೆ ನೀಡಿದ್ದು, ಬಿಜೆಪಿ ಸರ್ಕಾರ ಅಧಿಕಾರಾವಧಿ ಪೂರ್ಣಗೊಳಿಸಬೇಕು ಎಂದು ಬಯಸಿದ್ದಾರೆ.
224 ರಲ್ಲಿ 117 ಬಿಜೆಪಿ ಸದಸ್ಯರಿದ್ದಾರೆ. 71 ಮಂದಿ ಕಾಂಗ್ರೆಸ್ಸಿಗರಿದ್ದಾರೆ ಹಾಗೂ ಜೆಡಿಎಸ್ 26 ಶಾಸಕರನ್ನು ಹೊಂದಿದೆ. ಇದಲ್ಲದೆ 7 ಮಂದಿ ಪಕ್ಷೇತರರು, 1 ನಾಮ ನಿರ್ದೇಶಿತ ಸದಸ್ಯರಿದ್ದಾರೆ. ಯಡಿಯೂರಪ್ಪ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ತೊರೆದ ಪರಿಣಾಮ 2 ಸ್ಥಾನಗಳು ಖಾಲಿ ಉಳಿದಿದೆ.












Click it and Unblock the Notifications