ಕರ್ನಾಟಕ ನಾಟಕ : ಬುಧವಾರದ ಸಮಗ್ರ ದೃಶ್ಯ

ಶೆಟ್ಟರ್ ಸರಕಾರವನ್ನು ಚಿವುಟುವುದು ಮತ್ತು ತೂಗುವ ಆಟವಾಡುತ್ತಿದ್ದ ಯಡಿಯೂರಪ್ಪ ಮತ್ತು ಅವರ ಬೆಂಬಲಿಗ ಶಾಸಕರು, ಸಚಿವರು ಇಂದು ಕೊನೆಗೂ ಒಂದು ನಿರ್ಧಾರಕ್ಕೆ ಬಂದರು. ಡೆಡ್ ಲೈನುಗಳನ್ನು ಕೊಡುವ ಚಾಳಿಗೆ ಗುಡ್ ಬೈ ಹೇಳಿ ಸರಕಾರವನ್ನು ಕೆಡವುವ ಸಾಹಸಕ್ಕೆ ಪಿಕಾಸಿ ಗುದ್ದಲಿ ಇಟ್ಟುಕೊಂಡು ವಿಧಾನಸೌಧಕ್ಕೆ ಬೆಳ್ಳಂಬೆಳಿಗ್ಗೆ ಧಾವಿಸಿದರು. ಇಡೀ ದಿನ ನಡೆದ ಈ ಕೆಡವುವ ಆಟದ ಬಾಲ್ ಬೈ ಬಾಲ್ ವಿವರಗಳು ಈ ಕೆಳಕಂಡಂತಿವೆ.
* ಬೆಳಿಗ್ಗೆ 9 ಗಂಟೆಗೆ ಶೋಭಾ ಮತ್ತು ಉದಾಸಿ ರಾಜೀನಾಮೆ.
* ರಾಜೀನಾಮೆ ಸಲ್ಲಿಸಿದ್ದು ಮುಖ್ಯಮಂತ್ರಿ ಶೆಟ್ಟರ್ ಅವರಿಗೆ.
* ರಾಜೀನಾಮೆ ಪತ್ರಗಳನ್ನು ಪರಾಂಬರಿಸುವುದಾಗಿ ಶೆಟ್ಟರ್ ಹೇಳಿಕೆ.
* 13 ಶಾಸಕರಿಂದ ನೇರವಾಗಿ ಸಭಾಧ್ಯಕ್ಷರ ಕೊಠಡಿಗೆ ಭೇಟಿ.
* ಎಲ್ಲರ ಕೈಯಲ್ಲೂ ಹಸ್ತಲಿಖಿತ ರಾಜೀನಾಮೆ ಪತ್ರಗಳು.
* ರಾಜೀನಾಮೆ ಪತ್ರಗಳನ್ನು ಸ್ವೀಕರಿಸುವವರು ಗತಿಯಿಲ್ಲ.
* ಮಾನ್ಯ ಸಭಾಧ್ಯಕ್ಷ ಕೆಜಿ ಬೋಪಯ್ಯ ಕಚೇರಿಗೆ ಬಂದಿರಲಿಲ್ಲ.
* ಅವರ ಗೈರು ಹಾಜರಿಯಲ್ಲಿ ಪತ್ರ ನೋಡುವ ಕಾರ್ಯದರ್ಶಿ ದೇಶದಲ್ಲಿಲ್ಲ.
* ಶಾಸಕರಿಂದ ಶೆಟ್ಟರ್ ಮತ್ತು ಸಭಾಧ್ಯಕ್ಷರ ಗೈರುಹಾಜರಿ ಬಗ್ಗೆ ಛೀಮಾರಿ.
* ಮುಖ್ಯಮಂತ್ರಿ ಉತ್ತರ ಕರ್ನಾಟಕ ಪ್ರವಾಸದಲ್ಲಿ ಮಗ್ನ, ಪಕ್ಷದ ಅಧ್ಯಕ್ಷ ಈಶ್ವರಪ್ಪ ಅವರಿಗೆ ಉಡುಪಿಯಲ್ಲಿ ಅದೇನೋ ಕೆಲಸ.
* ರಾಜೀನಾಮೆ ಕೊಡಲು ಮುಂದಾದ 13 ಶಾಸಕರನ್ನು ಪ್ರಜಾಪ್ರಭುತ್ವದ ರೀತಿನೀತಿಗನುಗುಣವಾಗಿ ಕ್ಯಾರೆ ಅನ್ನುವವರಿಲ್ಲ.
* ಇಂಥ ಹೀನಾಯ ಪರಿಸ್ಥಿತಿ ವಿರುದ್ಧ ಕೆಂಡಕಾರಿದ ಯಡಿಯೂರಪ್ಪ, ಶೆಟ್ಟರ್ ಅವರಿಗೆ ಏಕವಚನದಲ್ಲಿ ನಿಂದನೆ.
* ಆನಂತರ ಶಾಸಕರ ತಂಡ ಸೀದಾ ರಾಜಭವನಕ್ಕೆ ಭೇಟಿ, ಅಳಲು ತೋಡಿಕೆ.
* ಇಡೀ ದಿನ ಜನತೆಯನ್ನು ಕಾಡಿದ ಪ್ರಶ್ನೆಯೆಂದರೆ ಬೋಪಯ್ಯ ಎಲ್ಲಿ?
* ಸಭಾಧ್ಯಕ್ಷರು ಊರಲ್ಲಿದ್ದಾರಾ, ಆಸ್ಪತ್ರೆಲಿದ್ದಾರಾ, ಬೇರೆ ರಾಜ್ಯಕ್ಕೆ ಹೋಗಿದ್ದಾರಾ, ವಿದೇಶಕ್ಕೆ ಹಾರಿದ್ದಾರಾ?
* ನೇಪಾಳಕ್ಕೆ ಬೋಪಯ್ಯ ಪ್ರಯಾಣ ಮಾಡಿದ್ದಾರೆ ಎಂಬ ವದಂತಿ, ಇಲ್ಲೇ ಎಲ್ಲೋ ಪರಾರಿಯಾಗಿದ್ದಾರೆ ಎನ್ನುವುದು ಇನ್ನೊಂದು.
* ಸಂಜೆಯಾಗುತ್ತಿದ್ದಂತೆ ಸ್ಪೀಕರ್ ನಾಪತ್ತೆ ಪ್ರಕರಣದ ಬಗ್ಗೆ ತೀವ್ರ ಅಸಮಾಧಾನ. ಕ್ರಮ ಕೈಗೊಳ್ಳುವಂತೆ ಯಡಿಯೂರಪ್ಪ ಆಕ್ರೋಶ.
* ಅತ್ತ, ತಮ್ಮ ಸರಕಾರಕ್ಕೆ ಯಾವುದೇ ಕಂಟಕ ಇಲ್ಲ ಎಂದು ಶೆಟ್ಟರ್ ಗುಲಬರ್ಗದಲ್ಲಿ ಹೇಳಿಕೆ.
* ಬಿಜೆಪಿ ಆನೆ ಇದ್ದಂತೆ, ಕೆಜೆಪಿ ಇರುವೆ ಇದ್ದಂತೆ ಎಂದು ಈಶ್ವರಪ್ಪ ಉಡುಪಿಯಲ್ಲಿ ಕುಹಕ.
* ಸರಕಾರ ಸುಭದ್ರ, ಫೆ.8ರಂದು ಮುಂಗಡ ಪತ್ರ ಮಂಡಿಸುವುದು ಗ್ಯಾರಂಟಿ - ಮಂಗಳೂರಿನಲ್ಲಿ ಹೊಸಪೇಟೆ ಶಾಸಕ ಆನಂದ್ ಸಿಂಗ್.
* ಸಭಾಧ್ಯಕ್ಷ ಬೋಪಯ್ಯ ಎಲ್ಲಿ ಎಂಬುದರ ಬಗ್ಗೆ ಶೋಭಾ ಕರಂದ್ಲಾಜೆ ಅವರಿಂದ ಕ್ಲೂ.
* ಸಚಿವರೊಬ್ಬರು ಬೋಪಯ್ಯ ಅವರನ್ನು ರಾತ್ರೋರಾತ್ರಿ ಕರೆದುಕೊಂಡು ಬೆಂಗಳೂರು ಏರ್ಪೋರ್ಟಿನಲ್ಲಿ ಬಿಟ್ಟುಬಂದಿದ್ದಾರೆ.
* ಬೋಪಯ್ಯ ವಿಮಾನ ನಿಲ್ದಾಣದಿಂದ ಎಲ್ಲಿಗೆ ಹೋದರು ಎಂಬುದು ನಿಗೂಢ.
* ಈ ಬಗ್ಗೆ ಸಮಗ್ರ ತನಿಖೆಯಾಗಬೇಕು, ಚರ್ಚೆಯಾಗಬೇಕು, ಕರ್ನಾಟಕ ಜನತೆಗೆ ಉತ್ತರ ಬೇಕಾಗಿದೆ ಎಂದು ಶೋಭಾ.
* ಶಾಸಕರ ರಾಜೀನಾಮೆಗಳು ಮಕ್ಕಳ ಆಟದಂತಿದೆ. ಜನ ನೋಡುತ್ತಿದ್ದಾರೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿಕೆ.
* ಶಾಸಕರು ಮತ್ತು ಸಚಿವರ ರಾಜೀನಾಮೆ ಬಗ್ಗೆ ನನಗೇನೂ ಗೊತ್ತಿಲ್ಲ. ಕಾನೂನು ತೊಡಕಾದರೆ ಎಚ್ಚರಿಕೆ ವಹಿಸುವೆ ಎಂದು ರಾಜ್ಯಪಾಲ.
* ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಬಿಜೆಪಿ ಹೈಕಮಾಂಡಿನಿಂದ ಏನೂ ಪ್ರತಿಕ್ರಿಯೆಯಿಲ್ಲ. ಅವರ ತಲೆಬಿಸಿಗಳು ಬೇಕಾದಷ್ಟಿವೆ.
ತಾತ್ಪರ್ಯ
* ಕೆಜೆಪಿಗೆ ಮುಖಭಂಗ
* ಬಿಜೆಪಿಗೂ ಮುಖಭಂಗ
* ಕರ್ನಾಟಕದ ಮಾನಭಂಗ












Click it and Unblock the Notifications