ಕೆಜೆಪಿಯದ್ದೇ ಮುಂದಿನ ಸರ್ಕಾರ, ಬಿಎಸ್ ವೈ ಶಪಥ

ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿಯಾಗಿ ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಜನತಾ ಪಕ್ಷ ಕೂಡಾ ತನ್ನ ಪ್ರಚಾರ ಕಾರ್ಯ ಆರಂಭಿಸಿದೆ. ಶುಕ್ರವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಅಧಿಕೃತವಾಗಿ ಚುನಾವಣಾ ಪ್ರಚಾರ ಕಚೇರಿಯನ್ನು ಯಡಿಯೂರಪ್ಪ ಉದ್ಘಾಟಿಸಿದರು.
ಕಚೇರಿಯಲ್ಲಿ ಚಂಡಿಕಾ ಹೋಮ, ಸುದರ್ಶನ ಹೋಮ, ಗಣಪತಿ ಹೋಮ ಮುಂತಾದ ಹೋಮ ಹವನ ನಡೆಸಲಾಯಿತು. ವಿಶೇಷ ಪೂಜೆ ಪುನಸ್ಕಾರದ ನಂತರ ಮಾತನಾಡಿದ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಕೆಜೆಪಿ ಸ್ವಂತ ಬಲದಿಂದ ಮೇಲಕ್ಕೆ ಬರಲಿದೆ ಎಂದರು.
ಕರ್ನಾಟಕವನ್ನು ಕಲ್ಯಾಣ ರಾಜ್ಯ ಮಾಡುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಅವರು ಇದೇ ಸಂದರ್ಭದಲ್ಲಿ ಶಪಥ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಲಕ್ಷ್ಮಿ ನಾರಾಯಣ, ಬಿ.ಆರ್ ಪಾಟೀಲ್, ಬಿ.ಜಿ ಬಣಕಾರ್, ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.
ಬಿಜೆಪಿಯಲ್ಲಿದ್ದಾಗ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಣ ತೊಟ್ಟೆ. ಅದರಂತೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ಕೆಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದು ಯಡಿಯೂರಪ್ಪ ಹೇಳಿದರು.
ಸರ್ಕಾರ ಉರುಳುತ್ತಾ?: ಜ.23ರ ನಂತರ ಜಗದೀಶ್ ಶೆಟ್ಟರ್ ಸರ್ಕಾರ ಉರುಳುತ್ತೆ. ರಾಜೀನಾಮೆ ಪರ್ವ ಆರಂಭವಾಗಲಿದೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಆ ರೀತಿ ಏನೂ ಆಗುವುದಿಲ್ಲ ಎಂದರು.
ಹಾವೇರಿ ಶಾಸಕ ನೆಹರೂ ಓಲೇಕಾರ್ ಅವರು 20 ಶಾಸಕರು ಹಾಗೂ 4 ಸಚಿವರು ಜ.23ಕ್ಕೆ ಬಿಜೆಪಿಗೆ ರಾಜೀನಾಮೆ ನೀಡಿ, ಕೆಜೆಪಿ ಸೇರಲಿದ್ದಾರೆ ಎಂದಿದ್ದಾರಲ್ಲ ಇದಕ್ಕೆ ಏನು ಹೇಳುತ್ತೀರಾ? ಎಂದು ಪ್ರಶ್ನಿಸಿದಾಗ, ನನಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಉತ್ತರಿಸದೆ ಯಡಿಯೂರಪ್ಪ ನುಣಚಿಕೊಂಡರು.
ಕೆಜೆಪಿಗೆ ಬರಲು ಇಷ್ಟವಿರುವವರು ಸಂತೋಷದಿಂದ ಬಂದು ಸೇರಲಿ. ನಾನು ಯಾರಿಗೂ ಬಲವಂತ ಮಾಡುವುದಿಲ್ಲ. ನಾನು ಯಾವ ಶಾಸಕ, ಸಚಿವರುಗಳಿಗೂ ಡೆಡ್ ಲೈನ್ ನೀಡಿಲ್ಲ. ಬಿಜೆಪಿಯಲ್ಲೇ ಸುರಕ್ಷಿತವಾಗಿದ್ದೇವೆ ಎಂದೆನಿಸಿದರೆ ಅಲ್ಲೇ ಉಳಿಯಲಿ ಎಂದು ಯಡಿಯೂರಪ್ಪ ಹೇಳಿದರು.(ಪಿಟಿಐ)












Click it and Unblock the Notifications