ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕೇಸು: ಆ ಈಶ್ವರನಿಗೇ ಪ್ರೀತಿ

ಈಶ್ವರಪ್ಪ ಜತೆಗೆ ಅವರ ಪುತ್ರ ಕಾಂತೇಶ ಹಾಗೂ ಸೊಸೆ ಶಾಲಿನಿ ವಿರುದ್ಧವೂ ತನಿಖೆ ಶುರುವಾಗಿದೆ. ಗಮನಾರ್ಹವೆಂದರೆ, ಉಪ ಮುಖ್ಯಮಂತ್ರಿ ಸ್ಥಾನದಲ್ಲಿರುವ ಪ್ರಮುಖ ಆರೋಪಿಯನ್ನು ಪೊಲೀಸರು ಯಾವ ರೀತಿ ವಿಚಾರಣೆಗೆ ಗುರಿ ಪಡಿಸಲಿದ್ದಾರೆ ಎಂಬುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದೇ ವೇಳೆ, FIR ದಾಖಲಾಗಿರುವುದರಿಂದ ಮೊದಲು ಈಶ್ವರಪ್ಪ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು ಎಂಬ ಬೇಡಿಕೆ ಎಲ್ಲೆಡೆ ಕೇಳಿಬಂದಿದೆ.
ಇನ್ನು ಇದೇ ಜಿಲ್ಲೆಯವರಾದ, ಈಶ್ವರಪ್ಪನವರ ಅತ್ಯಾತ್ಮೀಯ ಗೆಳೆಯರೂ ಆಗಿದ್ದ, ಈಶ್ವರಪ್ಪ ಜತೆಗೂಡಿ ಜಂಟಿಯಾಗಿ ಅಪಾರ ಆಸ್ತಿ ಲೇವಾದೇವಿ ನಡೆಸಿರುವ ಹಾಗೂ ಈಗಾಗಲೇ ಬೆಂಗಳೂರು ಲೋಕಾಯುಕ್ತ ಕೋರ್ಟಿನಲ್ಲಿ ಪ್ರಕರಣ ಎದುರಿಸುತ್ತಿರುವ ಯಡಿಯೂರಪ್ಪ ಅವರು ಈಶ್ವರಪ್ಪ ವಿರುದ್ಧ ಕೆಂಡಕಾರಿದ್ದಾರೆ.
'ಈಶ್ವರಪ್ಪ ಬಹಳ ದೊಡ್ಡವರು. ದೊಡ್ಡವರು ತಪ್ಪು ಮಾಡಿದರೆ ಕ್ರಮ ಕೈಗೊಳ್ಳುವ ಪರಿಪಾಠ ಬಿಜೆಪಿಯಲ್ಲಿ ಇಲ್ಲ. ಅಲ್ಲೇನಿದ್ದರೂ ನನ್ನಂಥ ಸಾಮಾನ್ಯರ ವಿರುದ್ಧ ಮಾತ್ರ' ಎಂದು ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷರೂ ಆದ ಯಡಿಯೂರಪ್ಪ ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
ಆ ಈಶ್ವರನಿಗೇ ಪ್ರೀತಿ: ಕುತೂಹಲದ ಸಂಗತಿಯೆಂದರೆ ಈಶ್ವರಪ್ಪ ಒಂದೇ ದಿನದಲ್ಲಿ ಒಟ್ಟು 9 ಆಸ್ತಿಗಳನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ! ಸಾಮಾನ್ಯ ಜನ ಇಡೀ ಜೀವಿತಾವಧಿಯಲ್ಲಿ ಗಳಿಸಿದ್ದನ್ನೆಲ್ಲ ಕ್ರೋಢೀಕರಿಸಿ, ಒಂದೇ ಒಂದು ಆಸ್ತಿ ನೋಂಧಾಯಿಸಿಕೊಳ್ಳಬೇಕು ಅಂದರೆ ಒಂದು ದಿನದಲ್ಲಿ ಹಾಗಿರಲಿ 9 ತಿಂಗಳುಗಳೇ ಹಿಡಿಸುತ್ತದೆ. ಅವರು ಪಡುವ ಪಾಡು ಈಶ್ವರನಿಗೇ ಪ್ರೀತಿ. ಪರಿಸ್ಥಿತಿ ಅಷ್ಟು ಕ್ರೂರವಾಗಿರುವಾಗ ಅಧಿಕಾರಸ್ಥ ಜನನಾಯಕರು...
ಅದೇ ಉಡಾಫೆ ಉತ್ತರ: ಇನ್ನು ಭಂಡ ಈಶ್ವರಪ್ಪಗೆ 'ಏನಾಯ್ತು ನಿಮ್ಮ ಆಸ್ತಿ ವಿಚಾರ? ಮೊದಲು ಶಿವಮೊಗ್ಗದ ಬೀದಿ ಬೀದಿಗೂ ಗೊತ್ತಿತ್ತು. ಈಗ ಇಡೀ 'ಲೋಕ' ಮಾತನಾಢಿಕೊಳ್ಳುತ್ತಿದೆ. ನಿಮ್ಮ ಬುಡಕ್ಕೂ ನೀರು ಬಂದಿದೆಯಲ್ಲಾ?' ಎಂದು ಕೇಳಿದ್ದಕ್ಕೆ
'ನಾನೇನೂ ಕದ್ದುಮುಚ್ಚಿ ಆಸ್ತಿ ಮಾಡಿಲ್ಲ. 3 ವರ್ಷದ ಹಿಂದೆಯೇ ನನ್ನ ವಿರುದ್ಧ ದೂರು ನೀಡಲು ಕೆಲವರು ಯತ್ನಿಸಿದ್ದ ವಿಷಯ ತಿಳಿದುಬಂದಿತ್ತು. ನನ್ನ ಆಸ್ತಿ ವಿವರ ಕೇಳಿ ಸರಕಾರಿ ಕಚೇರಿಗೆ ಅಲೆಯುತ್ತಿರುವುದೂ ಗೊತ್ತಾಗಿತ್ತು' ಎಂದು ತಮ್ಮ ಎಂದಿನ ಉಡಾಫೆ ಉತ್ತರ ನೀಡಿದ್ದಾರೆ.
ಏನಿದು ಪ್ರಕರಣ: ಇದೇ 13 ರಂದು ವಕೀಲ ಬಿ ವಿನೋದ್ ಇಲ್ಲಿನ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯಕ್ಕೆ ಅವರು ಖಾಸಗಿ ದೂರನ್ನು ದಾಖಲೆ ಸಮೇತ ಸಲ್ಲಿಸಿದ್ದರು. ಅಂದು ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಆರ್ ಎಂ ಶೆಟ್ಟರ್ ಅವರು ಶಿವಮೊಗ್ಗ ಲೋಕಾಯುಕ್ತ ಡಿವೈ.ಎಸ್ಪಿಗೆ ತನಿಖೆಯ ಜವಾಬ್ದಾರಿ ವಹಿಸಿದ್ದಾರೆ. ಮುಂದಿನ ಫೆಬ್ರವರಿ 4ರೊಳಗೆ ತನಿಖಾ ವರದಿ ಸಲ್ಲಿಸುವಂತೆಯೂ ಸೂಚಿಸಿದ್ದಾರೆ.
ಅದರಂತೆ ಲೋಕಾಯುಕ್ತ ಡಿವೈ.ಎಸ್ಪಿ ಶಿವಕುಮಾರ್ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 13 (1) (ಡಿ) (ಇ), 120 (ಬಿ) ಹಾಗೂ ಐಪಿಸಿ ಕಲಂ 420ರ ಅಡಿ ಈಶ್ವರಪ್ಪ ಕುಟುಂಬದ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಸಾಲು ಸಾಲು ಆಸ್ತಿ ಖರೀದಿ: 2006ರಿಂದ 2011ರ ಅವಧಿಯಲ್ಲಿ ಈಶ್ವರಪ್ಪ 3 ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆಗ ಬಿಜೆಪಿಯ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಈ ವೇಳೆ ಅವರು ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲು ಅಕ್ರಮವಾಗಿ ಸಂಪತ್ತು ಖರೀದಿಸಿದ್ದಾರೆ. 4,39,898 ಚದರಡಿ ಆಸ್ತಿ ಖರೀದಿಸಿದ್ದು ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ಕೋಟ್ಯಂತರ ರೂಪಾಯಿಯದ್ದಾಗಿದೆ ಎಂದು ವಿನೋದ್ ಆರೋಪಿಸಿದ್ದಾರೆ.
ಒಟ್ಟಾರೆ 25 ಆಸ್ತಿ ಖರೀದಿ ಪ್ರಕರಣದ ಕುರಿತು ವಿನೋದ್ ಮಾಹಿತಿ ನೀಡಿದ್ದಾರೆ. ಇದರಲ್ಲಿ ಈಶ್ವರಪ್ಪ-ಕಾಂತೇಶ್ ಜಂಟಿ ಖಾತೆಯಲ್ಲಿ 1, ಈಶ್ವರಪ್ಪ-ಪತ್ನಿ ಜಯಲಕ್ಷ್ಮೀ ಜಂಟಿ ಖಾತೆಯಲ್ಲಿ 1, ಕಾಂತೇಶ್ ಹೆಸರಿನಲ್ಲಿ 16, ಶಾಲಿನಿ ಹೆಸರಿನಲ್ಲಿ 6 ಹಾಗೂ ಕಾಂತೇಶ್-ಶಾಲಿನಿ ಜಂಟಿ ಖಾತೆಯಲ್ಲಿ ಆಸ್ತಿಯನ್ನು ಖರೀದಿಸಿ ನೋಂದಣಿ ಮಾಡಲಾಗಿದೆ.












Click it and Unblock the Notifications