ಈಶ್ವರಪ್ಪ ಮೆಣಸಿನಕಾಯಿ ತಿಂದ ಮಂಗ : ಬಸವರಾಜ್

ಬಿಜೆಪಿಯಿಂದ ಅಮಾನತು ಮಾಡಿದ್ದಕ್ಕೆ ಪ್ರತಿಕ್ರಿಯಿಸಿರುವ ತುಮಕೂರಿನ ಸಂಸದ ಜಿ.ಎಸ್. ಬಸವರಾಜ್ ಅವರು, ಅಮಾನತು ಮಾಡುವ ಮೊದಲು ನನಗೆ ಯಾವುದೇ ನೋಟೀಸ್ ನೀಡಿಲ್ಲ. ಅಮಾನತನ್ನು ನಾನು ಸ್ವಾಗತ ಮಾಡುತ್ತೇನೆ. ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಮೆಣಸಿನಕಾಯಿ ತಿಂದ ಮಂಗನಂತೆ ಆಡುತ್ತಿದ್ದಾರೆ. ಹಾವೇರಿಗೆ ಹೋಗಲು ಯಾವ ದೊಣ್ಣೆನಾಯಕನ ಅಪ್ಪಣೆ ಬೇಕಾಗಿಲ್ಲ ಎಂದು ಖಾರವಾಗಿ ನುಡಿದಿದ್ದಾರೆ.
ಹಾವೇರಿಗೆ ಹೋಗುವ ಮುನ್ನ ಬೆಳಗಾವಿಯಿಂದ ಪ್ರತಿಕ್ರಿಯೆ ನೀಡಿರುವ ಪುಟ್ಟಸ್ವಾಮಿ ಅವರು, ಹೀಗೆ ಮಾಡಿರುವ ಕ್ರಮ ಸರಿಯಲ್ಲ. ರಾಜೀನಾಮೆ ನೀಡಿ ಎಂದು ಶೆಟ್ಟರ್ ಕೇಳಿದ್ದರೆ ನಾನೇ ಕೊಡುತ್ತಿದ್ದೆ. ನಾನು ಹಿಂದುಳಿದ ಜಾತಿಯ ನಾಯಕ, ನನ್ನ ಬಳಿ ಹಣ, ಜನ ಬಲವಿಲ್ಲ ಎಂದು ಹೀಗೆ ಮಾಡಿದ್ದಾರೆ. ನನಗೆ ತುಂಬಾ ಬೇಸರವಾಗಿದೆ. ಆದರೆ, ಯಡಿಯೂರಪ್ಪನವರೇ ನನ್ನ ನಾಯಕರು, ಅವರ ಹಿಂದೆಯೇ ನಾನು ಸಾಗುತ್ತೇನೆ ಎಂದು ಅವರು ಹೇಳಿದ್ದಾರೆ. ಅವರು ಸಂಪುಟದಿಂದ ಕೈಬಿಡುತ್ತಿದ್ದಂತೆ ಅವರಿಗೆ ನೀಡಲಾಗಿದ್ದ ಕಾರನ್ನು ಅಧಿಕಾರಿಗಳು ಕಿತ್ತುಕೊಂಡಿದ್ದರಿಂದ ಖಾಸಗಿ ಕಾರಿನಲ್ಲಿ ಹಾವೇರಿಗೆ ಸಾಗಬೇಕಾಯಿತು.
ಯಡಿಯೂರಪ್ಪ ಬೆಂಬಲಿಸುತ್ತಿರುವ ಮತ್ತೊಬ್ಬ ಹಾವೇರಿ ಶಾಸಕ ನೆಹರೂ ಓಲೆಕಾರ್ ಅವರು, ಕೋರ್ ಕಮಿಟಿ ಬೆದರಿಕೆ ತಂತ್ರವನ್ನು ಅನುಸರಿಸುತ್ತಿದೆ. ಬೆದರಿಕೆ ಒಡ್ಡುವುದರಿಂದ ಯಾರೂ ಬೆದರುವುದಿಲ್ಲ. ಯಾರ್ಯಾರು ಭಾಗವಹಿಸಬೇಕೆಂದು ಅಂದುಕೊಂಡಿದ್ದಾರೋ ಅವರೆಲ್ಲರೂ ಭಾಗವಹಿಸುತ್ತಾರೆ. ರಾಜ್ಯ ನಾಯಕರ ಕ್ರಮಕ್ಕೆ ಯಾರೂ ಬಗ್ಗುವುದಿಲ್ಲ, ಐತಿಹಾಸಿಕ ಹಾವೇರಿ ಕಾರ್ಯಕ್ರಮ ಸುಸೂತ್ರವಾಗಿ ಜರುಗುತ್ತದೆ. ಯಡಿಯೂರಪ್ಪನವರನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಪುಟ್ಟಸ್ವಾಮಿ ವಿರುದ್ಧದ ಕ್ರಮ ರಾಜ್ಯಪಾಲರಿಂದ ಅಂಗೀಕಾರ : ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿಯವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ದೆಹಲಿಯಿಂದ ಶಿಫಾರಸು ಮಾಡಿದ್ದನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅಂಗೀಕರಿಸಿ ಆದೇಶ ಹೊರಡಿಸಿದ್ದಾರೆ.
ಹಾವೇರಿಯಲ್ಲಿ ಕಾವೇರಿದ ಯಡಿಯೂರಪ್ಪ : ತುಮಕೂರು ಸಂಸದ ಬಸವರಾಜ್ ಅವರನ್ನು ಅಮಾನತು ಮಾಡಿದ್ದು ಮತ್ತು ಅತ್ಯಾಪ್ತರಲ್ಲಿ ಅತ್ಯಾಪ್ತರಾಗಿರುವ ಬಿಜೆ ಪುಟ್ಟಸ್ವಾಮಿಯನ್ನು ಸಂಪುಟದಿಂದ ಕೈಬಿಟ್ಟಿದ್ದು ಯಡಿಯೂರಪ್ಪನವರನ್ನು ಭಾರೀ ಕೆರಳಿಸಿದೆ. ಈ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಅವರು ಧೈರ್ಯವಿದ್ದರೆ ಬಿಜೆಪಿ ನಾಯಕರು ವಿಧಾನಸಭೆಯನ್ನು ಅಮಾನತು ಮಾಡಲಿ ಎಂದು ಗುಡುಗಿದ್ದಾರೆ. ಕೆಲ ದಿನಗಳ ಹಿಂದೆ, ತಮ್ಮ ಆಪ್ತರ ಕೂದಲು ಕೊಂಕಿಸಿದರೂ ಸುಮ್ಮನಿರುವುದಿಲ್ಲ, 24 ಗಂಟೆಗಳಲ್ಲಿ ಸರಕಾರ ಬೀಳಿಸುತ್ತೇನೆ ಎಂದು ಹೂಂಕಸಿರಿದ್ದರು. ಈಗ ಅವರು ಏನು ಮಾಡುತ್ತಾರೆ?
ಕೆಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಎಂ.ಡಿ. ಲಕ್ಷ್ಮಿನಾರಾಯಣ, ಯಡಿಯೂರಪ್ಪ ಇರುವವರೆಗೆ ಶಿಸ್ತುಪಕ್ಷವಾಗಿತ್ತು. ಅವರು ಹೊರಬಂದ ಮೇಲೆ ಶಿಸ್ತಿನ ಪಕ್ಷವಾಗಿ ಉಳಿದಿಲ್ಲ. ಬಳ್ಳಾರಿ ಚುನಾವಣೆಯಿಂದ ಹಿಡಿದು ಅನೇಕ ವಿಷಯಗಳನ್ನು ಹೇಳಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರ ಉಳಿಸಿಕೊಳ್ಳಬೇಕೆಂದು ಕ್ರಮ ಜರುಗಿಸಿಲ್ಲ. ಸಮಾವೇಶ ಕೆಡಿಸಬೇಕು ಎಂಬ ದೃಷ್ಟಿಯಿಂದ ಸೇಡಿನ ರಾಜಕಾರಣವಾಗಿ ಒಬ್ಬ ಸಂಸದ, ಒಬ್ಬ ವಿಧಾನಪರಿಷತ್ ಸದಸ್ಯನ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಇದು ಬಿಜೆಪಿ ಎಷ್ಟು ದುರ್ಬಲವಾಗಿದೆ ಎಂದು ಗೊತ್ತಾಗುತ್ತದೆ ಎಂದಿದ್ದಾರೆ.












Click it and Unblock the Notifications