ಕಾವೇರಿಗಾಗಿ ಮತ್ತೊಮ್ಮೆ ಕಣ್ಣೀರಿಟ್ಟ ದೇವೇಗೌಡರು

ತಕ್ಷಣ ಕಾವೇರಿ ಉಸ್ತುವಾರಿ ಸಮಿತಿಯನ್ನು ಜಲಾಶಯ ಪರಿಶೀಲನೆಗೆ ಕಳಿಸಿ ವರದಿಗೆ ಒತ್ತಾಯಿಸಬೇಕು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಆಗ್ರಹಿಸಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ನಡೆಸುತ್ತಾ ರೈತರ ಹಿತ ಕಾಯುವಲ್ಲಿ ಸೋತಿರುವುದು ದುಃಖ ತಂದಿದೆ ಎಂದರು.
ನಮ್ಮ ರೈತರಿಗೆ ನೀರಿಲ್ಲದಿರುವಾಗ ಬೇರೆ ರಾಜ್ಯಕ್ಕೆ ನೀರು ನೀಡುವುದಾದರೂ ಹೇಗೆ ಎಂಬುದನ್ನು ಸುಪ್ರೀಂಕೋರ್ಟಿಗೆ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಡಿ, ನಮ್ಮ ರೈತರು ಒಂದು ಬೆಳೆ ಬೆಳೆಯಲು ಭಿಕ್ಷೆ ಬೇಡಬೇಕು, ಆದರೆ, ನೆರೆಯ ರೈತರು ಮುರ್ನಾಲ್ಕು ಬೆಳೆಗಳಿಗೆ ನಮ್ಮ ರೈತರ ಹಿತ ಬಲಿ ಕೊಟ್ಟು ನೀರು ಬಿಡಬೇಕೆ ಎಂದು ಪ್ರಶ್ನಿಸಿದರು.
ಕೆಲವು ರಾಷ್ಟ್ರೀಯ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳು ಕರ್ನಾಟಕವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂಥ ಕಾರ್ಯ ಮಾಡುತ್ತಿವೆ. ನಾವು ಎಂದಿಗೂ ವಿತಂಡವಾದ ಮಾಡಿಲ್ಲ. ಸಮಸ್ಯೆಯನ್ನು ಬಗೆಹರಿಸಲು ಮುಕ್ತಮನಸ್ಸು ಅಗತ್ಯ. ಕಾವೇರಿ ಸಮಸ್ಯೆ ನಿಭಾಯಿಸಲು ಜಗದೀಶ್ ಶೆಟ್ಟರ್ ಸಂಪೂರ್ಣ ಸೋತಿದ್ದಾರೆ. ಅವರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾಟ ಸಹಿಸುವುದೇ ಕಷ್ಟವಾಗಿದೆ ಎಂದು ದೇವೇಗೌಡ ನಗೆಯಾಡಿದರು.
ಕಾವೇರಿ ನೀರು ಬಿಡಬೇಕು ಎಂದು ನಾನು ಹೇಳಿಲ್ಲ. ಕೆಲವು ಮಾಧ್ಯಮಗಳು ದೇವೇಗೌಡರು ನೀರು ಬಿಡಬೇಕು ಎಂದು ಹೇಳಿದ್ದಾರೆ ಎಂದು ಕೆಲ ಮಾಧ್ಯಮಗಳು ಅಪಪ್ರಚಾರ ಮಾಡುತ್ತಿದೆ ಎಂದು ಗುಡುಗಿದರು..
ಕಳೆದ 20 ವರ್ಷಗಳಲ್ಲಿ ತಮಿಳುನಾಡಿಗೆ ಸಿಗಬೇಕಾದ ನೀರನ್ನು ನ್ಯಾಯಯುತವಾಗಿ ಬಿಟ್ಟಿದ್ದೇವೆ. ಅದರೆ, ಕೇವಲ ನಾಲ್ಕು ವರ್ಷ ಬರದ ಕಾರಣ ತೊಂದರೆಯಾಗಿದೆ. ಅದರೆ, ತಮಿಳುನಾಡಿನಿಂದ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ ಎಂದರು.
ಲೋಕಸಭೆಯಲ್ಲಿ ಕಾವೇರಿ: ಕಾವೇರಿ ವಿವಾದ ಕುರಿತಂತೆ ಲೋಕಸಭೆಯಲ್ಲಿ ಚರ್ಚೆ ಮಾಡಲು ಸೋಮವಾರ(ಡಿ.10) ಅವಕಾಶ ಕೋರುತ್ತೇನೆ. ಅಲ್ಲಿ ರಾಜ್ಯಕ್ಕೆ ಆದ ಅನ್ಯಾಯವನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತೇನೆ. ಚರ್ಚೆಗೆ ಅವಕಾಶ ನೀಡದೆ ಹೋದರೆ ಸುಮ್ಮನಿರುವುದಿಲ್ಲ. ಕೇಂದ್ರದ ಧೋರಣೆ ಖಂಡಿಸಿ ಬೆಂಗಳೂರಿನ ಗಾಂಧಿ ಪ್ರತಿಮೆ ಮುಂಭಾಗ ಉಪವಾಸ ಕೂರುತ್ತೇನೆ ಎಂದು ದೇವೇಗೌಡರು ಬೆದರಿಕೆ ಒಡ್ಡಿದರು. [ಗಳಗಳನೆ ಅಳುವ ಕರ್ನಾಟಕದ 5 ಮುಖ್ಯಮಂತ್ರಿಗಳು]












Click it and Unblock the Notifications