ಕೆಜೆಪಿ ಚಟುವಟಿಕೆ: BSY ಬೆಳಗಾವಿಗೆ ಹೊರಟು ನಿಂತರು

ಬೆಳಗಾವಿ ಭೇಟಿಯಲ್ಲಿ ಅವರ ಉದ್ದೇಶ ಸ್ಪಷ್ಟವಾಗಿದೆ: ಹೇಗೂ ಅಧಿವೇಶನಕ್ಕೆಂದು ಎಲ್ಲಾ ಶಾಸಕ/ಸಚಿವ/ಮತ್ತಿತರರು ಅಲ್ಲಿ ಸೇರಿರುತ್ತಾರೆ. ಸೋ, ಅಲ್ಲಿಗೇ ತೆರಳಿ ಖುದ್ದಾಗಿ ಭೇಟಿಯಾಗಿ 'ಡಿ.9ಕ್ಕೆ ಹಾವೇರಿ ಕಡೆ ಬನ್ನಿ' ಎಂದು ಹೇಳುವುದು ಅವರ ಮನದಿಂಗಿತವಾಗಿದೆ. ರಾಜಕೀಯ ಲೆಕ್ಕಾಚಾರ, ಗುಣಾಕಾರ, ಭಾಗಾಕಾರಗಳಿಗೆ ಸ್ಪಷ್ಟ ಆಕಾರ ನೀಡಲಿದ್ದಾರೆ.
ಅದಕ್ಕೆಂದೇ ಬೆಳಗಾವಿಯಲ್ಲಿ ಖಾಸಗಿ ಹೋಟೆಲ್ ಬುಕ್ ಮಾಡಿಸಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು ನಾಳೆಯಿಡೀ ತಮ್ಮ ಪರ ಒಲವಿರುವ ನಾಯಕನ್ನು ಹೋಟೆಲಿನಲ್ಲಿ ಮುಖಾಮುಖಿಯಾಗಿ, ಹಾವೇರಿ ಸಮಾವೇಶಕ್ಕೆ ಆಹ್ವಾನ ನೀಡುವ ಕಾರ್ಯಕ್ರಮವಿಟ್ಟುಕೊಂಡಿದ್ದಾರೆ.
ಹಾಗೆ ನೋಡಿದರೆ, ಕನಿಷ್ಠ ಪಕ್ಷ ಶಾಸಕರಾಗಿಯಾದರೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸುವರ್ಣ ವಿಧಾನಸೌಧದ ವೈಭೋಗವನ್ನು ನೋಡಬೇಕಿತ್ತು. ಏಕೆಂದರೆ 2009ರ ಜನವರಿಯಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಸುವರ್ಣ ವಿಧಾನಸೌಧದ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಇಂದು ಅಲ್ಲಿ ಮೊದಲ ಅಧಿವೇಶನ ನಡೆಯುತ್ತಿರುವಾಗ ಅತ್ತ ಸುಳಿಯುವ ಭಾಗ್ಯದಿಂದ ಅವರು ವಂಚಿತರಾಗಿದ್ದಾರೆ.
ಆದರೇನಂತೆ ಅದರ ವ್ಯಾಪ್ತಿ ಪ್ರದೇಶದಲ್ಲೇ ಸುಳಿದಾಡುತ್ತಾ ಮುಂದೆ ಬೆಂಗಳೂರಿನಲ್ಲಿರುವ ವಿಧಾನಸೌಧದ ಮೂರನೇ ಮಹಡಿಯಲ್ಲಿ ಆಸೀನರಾಗುವ ಉದ್ದೇಶದಿಂದ ಬೆಳಗಾವಿಯಲ್ಲಿ ನಾಳೆ ಕಾರ್ಯಾಚರಣೆ ಶುರುವಿಟ್ಟುಕೊಳ್ಳಲಿದ್ದಾರೆ. All the best BSY!












Click it and Unblock the Notifications