ನಾಚಿಕೆಗೇಡು! ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಮಾನತು

ಸ್ವಿಡ್ಜರ್ಲೆಂಡ್ ನ ಲೌಸನ್ನೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕೈಗೊಂಡಿರುವ ಈ ನಿರ್ಣಯದಿಂದ ಭಾರತೀಯ ಕ್ರೀಡಾಪಟುಗಳು ಮುಂಬರುವ ಒಲಿಂಪಿಕ್ಸ್ ನಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ಒಲಿಂಪಿಕ್ಸ್ ಕಾರ್ಯಕಾರಿ ಸಮಿತಿ ನಿಯಮಗಳನ್ನು ಮೀರಿ ಸರ್ಕಾರ ಹಸ್ತಕ್ಷೇಪ ಮಾಡಿದ ಕಾರಣ ಭಾರತೀಯ ಒಲಿಂಪಿಕ್ಸ್ ಸಮಿತಿಯನ್ನು ಅಮಾನತುಗೊಳಿಸುವ ನಿರ್ಣಯವನ್ನು ಕಾರ್ಯಕಾರಿ ಕೈಗೊಂಡಿದೆ.
ಈ ಅಮಾನತು ಮುಂದುವರಿದರೆ ಭಾರತೀಯ ಆಟಗಾರರು ಒಲಿಂಪಿಕ್ಸ್ ನಲ್ಲಿ ಭಾಗವಹಿಸುವಂತಿಲ್ಲ ಮತ್ತು ಐಒಸಿಯಿಂದ ಭಾರತಕ್ಕೆ ಬರುತ್ತಿದ್ದ ಹಣಕಾಸಿನ ನೆರವು ಸ್ಥಗಿತಗೊಳ್ಳಲಿದೆ.
ಒಲಿಂಪಿಕ್ಸ್ ಸಮಿತಿಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಭಾರತದ ಬಾವುಟ ಹಿಡಿದು ಭಾರತದ ಕ್ರೀಡಾಪಟುಗಳು ಮೈದಾನಕ್ಕೆ ಇಳಿಯಲು ಸಾಧ್ಯವಿಲ್ಲ.
ಅಮಾನತು ಬಗ್ಗೆ ನಮಗೆ ತಿಳಿದಿಲ್ಲ. ಐಒಸಿಯಿಂದ ಯಾವುದೇ ಅಧಿಸೂಚನೆ ನಮಗೆ ಸಿಕ್ಕಿಲ್ಲ ಎಂದು ಐಒಎನ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಕುವೈಟ್ ಒಲಿಂಪಿಕ್ಸ್ ಸಮಿತಿ ಅಮಾನತು ಭೀತಿ ಎದುರಿಸಿತ್ತು. ಅದರೆ, ತನ್ನ ರಾಷ್ಟ್ರೀಯ ಕ್ರೀಡಾ ನೀತಿ ಬದಲಾಯಿಸಿಕೊಂಡು ಒಲಿಂಪಿಕ್ಸ್ ಸಮಿತಿಯ ಕೃಪೆಗೆ ಒಳಗಾಗಿತ್ತು.
ಭಾರತದಲ್ಲಿ ನಿಯಮ ಮೀರಿ ಒಲಿಂಪಿಕ್ಸ್ ಸಮಿತಿಗೆ ಚುನಾವಣೆ ನಡೆದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಐಒಸಿ ಎಚ್ಚರಿಸಿತ್ತು. ಆದರೆ, ಐಒಎ ಮೇಲೆ ಸುರೇಶ್ ಕಲ್ಮಾಡಿ ಕರಿನೆರಳು ಬಿದ್ದ ಮೇಲೆ ಹೇಗಾದರೂ ಚುನಾವಣೆ ನಡೆಸಿ ಸಮಿತಿ ಬದಲಾವಣೆ ಮಾಡಲು ಮುಂದಾಗಿತ್ತು.
ಭಾರತೀಯ ಒಲಿಂಪಿಕ್ಸ್ ಸಮಿತಿಯ ಗದ್ದುಗೆಯನ್ನು 16 ವರ್ಷಗಳ ಕಾಲ ಆಳಿದ ಸುರೇಶ್ ಕಲ್ಮಾಡಿ 2010ರ ಕಾಮನ್ ವೆಲ್ತ್ ಕ್ರೀಡೆಯಲ್ಲಿ ಭ್ರಷ್ಟಾಚಾರ ಮಾಡಿ 9 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದು ಈಗ ಇತಿಹಾಸ.
ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಲಲಿತ್ ಬನೋತ್ ಕೂಡಾ ಕಾಮನ್ ವೆಲ್ತ್ ಕ್ರೀಡಾಕೂಟದ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪಗಳು ಕೇಳಿ ಬಂದಿದೆ.
ಭಾರತೀಯ ಒಲಿಂಪಿಕ್ಸ್ ಸಮಿತಿಯ ಭ್ರಷ್ಟಾಚಾರ ಹಾಗೂ ಒಳ ಜಗಳಕ್ಕೆ ಕ್ರೀಡಾ ಪಟುಗಳು ಬಲಿಯಾಗಬೇಕಾದ ಪರಿಸ್ಥಿತಿ ತಲೆದೋರಿದೆ.












Click it and Unblock the Notifications