ಬಿಎಸ್ಆರ್ ಕಾಂಗ್ರೆಸ್ಸಿಗೆ 164 ಸ್ಥಾನ ಖಚಿತ: ಶ್ರೀರಾಮುಲು

'ಗಮನಾರ್ಹವೆಂದರೆ ಯಾವೊಂದು ಪಕ್ಷವೂ ಇದುವರೆಗೂ ಇಷ್ಟೊಂದು ಭಾರಿ ಸಂಖ್ಯೆಯಲ್ಲಿ ಗೆದ್ದು ಬರುವ ಮಾತನ್ನು ಹೇಳಿಲ್ಲ. ಜತೆಗೆ, ಕರ್ನಾಟಕದ ವಿಧಾನಸಭೆಯ ಇತಿಹಾಸದಲ್ಲಿ ಇದುವರೆಗೆ ಯಾವುದೇ ಪಕ್ಷ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಆರಿಸಿ ಬಂದಿಲ್ಲ.
ಅಥವಾ ಸಂಖ್ಯಾಶಾಸ್ತ್ರದ ನಂಬಿಕೆಯ ಮೇಲೆ ರಾಮುಲು ಹೀಗೇನಾದರೂ ಹೇಳಿದ್ದಾರಾ?' ಎಂದು ಜನ ಕುತೂಹಲದಿಂದ ಕೇಳುವಂತಾಗಿದೆ. ಹಳೆಯ ನೆನಪಿನ ಪ್ರಕಾರ ಕಾಂಗ್ರೆಸ್ ಪಕ್ಷವು ಗರಿಷ್ಠ ಸಂಖ್ಯೆಯಲ್ಲಿ 1999ನಲ್ಲಿ 132 ಸ್ಥಾನಗಳನ್ನು ಗೆದ್ದಿತ್ತು.
ಬಳ್ಳಾರಿಯಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಶ್ರೀರಾಮುಲು, ತಾವು ಬಿಜೆಪಿ ಸೇರುವ ಸುದ್ದಿ ಕೇವಲ ವದಂತಿಯಷ್ಟೇ. ಯಾವುದೇ ಕಾರಣಕ್ಕೂ ಇನ್ನು ಬಿಜೆಪಿ ಸಹವಾಸ ಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
'ಬಿಎಸ್ಆರ್ ಕಾಂಗ್ರೆಸ್ ಯೋಜನಾಬದ್ಧವಾಗಿ ತಳಮಟ್ಟದಿಂದ ಬೆಳೆಯುತ್ತಿದೆ. ಅದನ್ನು ಮತ್ತಷ್ಟು ದೃಢವಾಗಿ ಕಟ್ಟಿ ಬೆಳೆಸುವ ಜವಾಬ್ದಾರಿ ನನ್ನ ಹೆಗಲಮೇಲಿದೆ. ಜತೆಗೆ ಬಿಜೆಪಿಯಿಂದ ಬಹುದೂರ ಸಾಗಿಬಂದಿದ್ದೇನೆ. ಆದ್ದರಿಂದ ಇನ್ನು ಬಿಜೆಪಿಯತ್ತ ಮುಖ ಮಾಡುವುದಿಲ್ಲ' ಎಂದು ಶ್ರೀರಾಮುಲು ಹೇಳಿದರು.
'ಶ್ರೀರಾಮುಲು ಸೇರಿದಂತೆ ಬಿಎಸ್ ಯಡಿಯೂರಪ್ಪ ಮತ್ತಿತರು ಮತ್ತೆ ಬಿಜೆಪಿಗೆ ಮರಳುತ್ತಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರನ್ನು ಉಲ್ಲೇಖಿಸಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗೆ ಯಾವುದೇ ಆಧಾರವಿಲ್ಲ. ತಾವಂತೂ ಇನ್ನು ಬಿಜೆಪಿ ಸಖ್ಯ ಮಾಡುವುದಿಲ್ಲ' ಎಂದು ರಾಮುಲು ತಿಳಿಸಿದರು.
'ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಆದರೆ ಯಾವ ಕ್ಷೇತ್ರದಿಂದ ಎಂಬುದು ಇನ್ನೂ ಆಖೈರಾಗಿಲ್ಲ' ಎಂದೂ ಶ್ರೀರಾಮುಲು ಇದೇ ವೇಳೆ ಪುನರುಚ್ಚರಿಸಿದರು. ಮುಂದಿನ ಚುನಾವಣೆಯಲ್ಲಿ ಎಲ್ಲ 224 ಸ್ಥಾನಗಳಿಗೂ ಸ್ಪರ್ಧಿಸಲಿದೆ ಎಂದು ಹೇಳುವ ಮೂಲಕ ಬಿಎಸ್ಆರ್ ಕಾಂಗ್ರೆಸ್ ಯಾವುದೇ ಪಕ್ಷದ ಜತೆ ಕೈಜೋಡಿಸುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.












Click it and Unblock the Notifications