ಭೂ ಅಕ್ರಮದಲ್ಲಿ ಸುಳಿಯಲ್ಲಿ ಸಚಿವ ಸೊಗಡು ಶಿವಣ್ಣ?
ಸಚಿವ ಸೊಗಡು ಶಿವಣ್ಣ ಅವರು ನಿಯಮಗಳನ್ನು ಗಾಳಿಗೆ ತೂರಿ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕೋಟ್ಯಂತರ ರು ಮೌಲ್ಯದ ಭೂಮಿಯನ್ನು ಅಕ್ರಮವಾಗಿ ತಮ್ಮ ಪತ್ನಿಯ ಹೆಸರಿಗೆ ಮಂಜೂರು ಮಾಡಿಸಿಕೊಂಡಿಸಿದ್ದಾರೆ ಎಂದು ದಿನೇಶ್ ಕಲ್ಲಳ್ಳಿ ಎಂಬುವರು ಆರೋಪಿಸಿದ್ದಾರೆ.
ಪೀಣ್ಯ ಎರಡನೇ ಹಂತದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಗೆ ಸೇರಿದ 5800 ಚದರ ಅಡಿ ಜಾಗವನ್ನು ಕೇವಲ 56 ಲಕ್ಷ ರು ನೀಡಿ ಶಿವಣ್ಣ ಅವರು ಪಡೆದಿದ್ದಾರೆ.
ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ಪಡೆದಿದ್ದರೂ ಕಡಿಮೆ ಬೆಲೆಗೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆ ಮೂಲಕ ಪಡೆದ ದಾಖಲೆಗಳನ್ನು ದಿನೇಶ್ ಕಲ್ಲಳ್ಳಿ ಅವರು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸೇರಿದ ಸುಮಾರು 6 ಕೋಟಿ ರು ಮೌಲ್ಯದ ಸಿಎ ನಿವೇಶನವನ್ನು ಅಕ್ರಮವಾಗಿ ಸಚಿವ ಶಿವಣ್ಣ ಅವರ ಪತ್ನಿಗೆ ಮಂಜೂರು ಮಾಡಲಾಗಿದೆ.
ಕೈಗಾರಿಕಾ ಇಲಾಖೆ, ಕೈಗರಿಕಾ ಸಚಿವ ಮುರುಗೇಶ್ ನಿರಾಣಿ, ಕೆಐಎಡಿಬಿ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. 2008ರ ಜೂನ್ 26ರಂದು ಸೊಗಡು ಶಿವಣ್ಣ ಅವರ ಪತ್ನಿ ನಾಗರತ್ನ ಅವರು ನಿವೇಶನಕ್ಕಾಗಿ ಅರ್ಜಿ ಹಾಕಿದ್ದಾರೆ.
ಮರುದಿನವೇ ಅವರನ್ನು ಸಂದರ್ಶನಕ್ಕೆ ಕರೆದು ಭೂ ಮಂಜೂರಾತಿ ಹಣವನ್ನು ಪಾವತಿ ಮಾಡಿಸಿಕೊಳ್ಳಲಾಗಿದೆ. 2009ರ ಜೂನ್ 2 ರಂದು ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ದಿನೇಶ್ ಆರೋಪಿಸಿದ್ದಾರೆ.
ಸಿಎ ನಿವೇಶನ ಮಂಜೂರು ಮಾಡುವಲ್ಲಿ ನಿಯಮ ಉಲ್ಲಂಘನೆಯಾಗಿದೆ. ಸಿಎ ನಿವೇಶನ ಮಂಜೂರು ಮಾಡುವಾಗ ಕೆಐಎಡಿಬಿ ಸದಸ್ಯರ ಸಭೆ ಕರೆದು ಅಧಿಕೃತ ಸಮಿತಿಯ ಮುಂದೆ ವಿಷಯ ಮಂಡಿಸಿ ಒಪ್ಪಿಗೆ ಪಡೆಯಬೇಕಾಗುತ್ತದೆ.
ಆದರೆ, ಸದರಿ ಭೂಮಿ ಮಂಜೂರಾತಿಯಲ್ಲಿ ಸಭೆ ನಡೆಸದೆ ಮಾರನೆ ಅರ್ಜಿ ಹಾಕಿದ ಮಾರನೇ ದಿನವೇ ಪ್ರಕ್ರಿಯೆ ಆರಂಭಿಸಲಾಗಿದೆ. ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಸಚಿವ ಶಿವಣ್ಣ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ದಿನೇಶ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.