ನೋಡಲು ಸಖತ್ತಾಗಿದ್ದಾಳಾ, ಯಾತಕ್ಕೂ ಹುಷಾರು ಕಣ್ಲಾ!
ಥತ್, ಆಕೆ ಒಬ್ಬ ಕೊಲೆಪಾತಕಿ ಎಂದು ನಂಬಲೇ ಸಾಧ್ಯವಿಲ್ಲ. ಆಕೆ ಕೊಲೆ ಮಾಡಲು ತನ್ನ ಪ್ರಿಯತಮನನ್ನು ಪ್ರೇರೇಪಿಸಿದ್ದರೂ ಹೇಗೆ? ಇಂಥ ಅದ್ಭುತ ಸೌಂದರ್ಯವಿರುವ ಯುವತಿ ಹಂತಕಿ ಆಗಲು ಹೇಗೆ ಸಾಧ್ಯ? ಅಥವಾ ಆಕೆಯ ಸೌಂದರ್ಯ ಹಿಂದೆ ಇಂಥದೊಂದು ಮನೋವಿಕೃತಿ ಅಡಗಿ ಕುಳಿತಿದೆಯಾ? ಹೌದು ಅಂತಾರೆ ವಿಜ್ಞಾನಿಗಳು.
ಅಮೆರಿಕಾದ ಸೇಂಟ್ ಲೂಯಿನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಈ ವಿದ್ಯಮಾನದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಯಾರು ಅತ್ಯದ್ಭುತವಾಗಿ ಕಾಣ್ತಾರೋ ಅವರು ಸೈಕೋಗಳಾಗಿರುವ ಸಾಧ್ಯತೆಯೂ ಉಂಟು ಎಂದಿದ್ದಾರೆ. ಆದ್ದರಿಂದ ನೋಡಿದ ಕೂಡಲೆ ಆಕರ್ಷಣೆಗೆ ಒಳಗಾಗಬೇಡಿ, ಗುಣಾವಗುಣಗಳನ್ನು ತಿಳಿದುಕೊಂಡು ಮುಂದಿನ ಅಡಿಯಿಡಿ ಎಂದು ಹೇಳಿದ್ದಾರೆ.
ಮಟ್ಟಸವಾಗಿ ದಿರಿಸು ಧರಿಸಿ, ವಿಶಿಷ್ಟಬಗೆಯ ಮಾದಕತೆಯಿಂದ, ಸಖತ್ ಆಗಿರುವಂಥ ಕೇಶವಿನ್ಯಾಸ ತೋರುತ್ತ, ಮಾತುಗಳಿಂದಲೇ ಮರಳು ಮಾಡುವಂತಹ ವಿಶಿಷ್ಟ ಗುಣ ಹೊಂದುತ್ತಲೇ ಮನೋವಿಕೃತಿಯನ್ನು ಹೊಂದಿರುತ್ತಾರೆ ಎಂಬ ವಿಷಯವನ್ನು ಅಧ್ಯಯನ ನಡೆಸುವ ಮುಖಾಂತರ ನಿಕೋಲಾಸ್ ಹೋಲ್ಜಮನ್ ಮತ್ತು ಮೈಕಲ್ ಸ್ಟ್ರುಬ್ ಎಂಬುವವರು ಬಹಿರಂಗಪಡಿಸಿದ್ದಾರೆ.
ಹಾಗೆಂದು, ಅತ್ಯುತ್ತಮವಾಗಿ ಬಟ್ಟೆ ಹಾಕಿಕೊಳ್ಳುವವರು, ತಮ್ಮ ಮುಗ್ಧ ನಗೆಯಿಂದಲೇ ಮರಳು ಮಾಡುವವರು, ನಯವಾದ ಮಾತುಗಳಿಂದ ಆಕರ್ಷಿಸುವವರು, ಸಹಜವಾದ ಸೌಂದರ್ಯ ಹೊಂದಿರುವವರೆಲ್ಲ ಸೈಕೋಗಳಾಗಿರುವುದಿಲ್ಲ. ಆದರೆ, ಗಂಡನ್ನಾಗಲಿ, ಹೆಣ್ಣನ್ನಾಗಲಿ ಆಕರ್ಷಿಸಲು ತಮ್ಮಲ್ಲಿರುವ ವಿಶಿಷ್ಟ ಗುಣಗಳನ್ನು ಬಳಸುವವರ ಬಗ್ಗೆ ಕೊಂಚ ಎಚ್ಚರಿಕೆಯಿಂದ ಇರಬೇಕು ಎಂಬ ಕಿವಿಮಾತು ಹೇಳಿದ್ದಾರೆ.
ಇಂಥ ಮನುಷ್ಯರಲ್ಲಿ ಹೆದರಿಕೆ, ಮಾನವೀಯತೆ, ತಪ್ಪಿತಸ್ಥ ಭಾವನೆ ಎಂಬುದೇ ಇರುವುದಿಲ್ಲ. ಆದರೆ ವಿಪರೀತ ಅಹಂಕಾರಿಗಳಾಗಿರುತ್ತಾರೆ. ತನಗಿಂತ ಬೇರೊಬ್ಬರಿಲ್ಲ ಎಂಬ ದುರಂಕಾರ ಅವರಲ್ಲಿ ಮನೆಮಾಡಿರುತ್ತದೆ. ಬೇಕಿದ್ದನ್ನು ಪಡೆಯಲು ಯಾವುದೇ ಹಂತಕ್ಕೂ ಹೋಗಲು ಅವರು ಸಿದ್ಧರಿರುತ್ತಾರೆ ಮತ್ತು ಎಂಥದೇ ಒತ್ತಡವನ್ನು ಭರಿಸುವಂತಹ ಮನೋಬಲವುಳ್ಳವರಾಗಿರುತ್ತಾರೆ. ಆದರೆ, ಮನದ ಮೂಲೆಯಲ್ಲಿ ಮನೋವಿಕೃತಿ ಮನೆಮಾಡಿರುತ್ತದೆ.
ಲೈಂಗಿಕ ಕ್ರಿಯೆ ನಡೆಸುವಾಗ ಗಂಡ ತನಗಿಂತ ಮೊದಲೇ ತೃಪ್ತಿಹೊಂದಿದ ಎಂಬ ಕಾರಣಕ್ಕೆ ಹೆಂಡತಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ವರದಿಯಾಗಿದೆ. ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಸುಂದರಿಯೊಬ್ಬಳು ಮಾದಕವಸ್ತು ಮಾರಾಟ ಜಾಲದಲ್ಲಿ ಭಾಗಿಯಾಗಿ ಹತ್ಯೆಯಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಇನ್ನು ಬೆಂಗಳೂರಿನ ಸುಂದರಿ ಶುಭಾ ಮೂರ್ತಿ ತಾನು ಮದುವೆಯಾಗಬೇಕಿದ್ದ ಹುಡುಗನ್ನು ಯಾಮಾರಿಸಿ ಹತ್ಯೆಗೈದ ಘಟನೆ ಇನ್ನೂ ನಮ್ಮ ಕಣ್ಣ ಮುಂದೆಯೇ ಇದೆ.
ಸುಂದರವಾಗಿರಬೇಕು, ಎಲ್ಲರ ನಡುವೆ ಎದ್ದು ಕಾಣುವಂತೆ ದಿರಿಸು ಧರಿಸಬೇಕು, ನಮ್ಮನ್ನು ನೋಡಿ ಎಲ್ಲರೂ ಇಷ್ಟಪಡಬೇಕು ಎಂದು ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಈ ಸೌಂದರ್ಯದಿಂದಲೇ ಮರಳು ಮಾಡಿ ಮೋಸ ಮಾಡಲು, ಕಾಮ ತೃಷೆಯನ್ನು ತೀರಿಸಿಕೊಳ್ಳಲು, ತಮ್ಮ ವಶಮಾಡಿ ಬುಗುರಿಯಂತೆ ಆಡಿಸಲು ಯತ್ನಿಸುತ್ತಿರುತ್ತಾರೆ ಎಂಬ ಅರಿವು ಜನರಲ್ಲಿ ಇರಬೇಕು ಎಂಬುದು ವಿಜ್ಞಾನಿಗಳ ಅಂಬೋಣ. ಈ ಅಧ್ಯಯವನ್ನು ನಂಬುವುದು ಬಿಡುವುದು ಓದುಗರಿಗೆ ಬಿಟ್ಟಿದ್ದು.