ಮೂತ್ರ ಕುಡಿಸಿದ ಶಿಕ್ಷಕಿ : ಆಂಗ್ಲ ಶಾಲೆ ಮಾನ್ಯತೆ ರದ್ದು

ಜಿಲ್ಲಾ ಶಿಕ್ಷಣಾಧಿಕಾರಿ ನಡೆಸಿದ ವಿಚಾರಣೆಯ ಆಧಾರದ ಮೇಲೆ ಈ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇಂಥ ಘಟನೆ ಮರುಘಟಿಸಿದರೆ ಯಾವುದೇ ಶಿಕ್ಷಣ ಸಂಸ್ಥೆ, ಮ್ಯಾನೇಜ್ಮೆಂಟ್ ಮತ್ತು ಸಂಬಂಧಿತ ಶಿಕ್ಷಕರ ವಿರುದ್ಧ ಇದೇ ರೀತಿಯ ಶಿಸ್ತುಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.
ಅನಾರ್ಪತಿಯಲ್ಲಿರುವ ಸತ್ಯಭಾಮಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಬುಧವಾರ ನಡೆದ ಈ ಘಟನೆಯ ವಿಚಾರಣೆ ನಡೆಸಿದ ಪೂರ್ವ ಗೋದಾವರಿ ಜಿಲ್ಲೆಯ ಶಿಕ್ಷಣಾಧಿಕಾರಿ ಶ್ರೀನಿವಾಸುಲು ರೆಡ್ಡಿಯವರು ಜಿಲ್ಲಾಧಿಕಾರಿ ನೀತು ಕುಮಾರಿ ಪ್ರಸಾದ್ ಅವರಿಗೆ ವರದಿಯನ್ನು ಕಳಿಸಿ, ಶಾಲೆಯ ಮಾನ್ಯತೆಯನ್ನು ರದ್ದುಪಡಿಸಬೇಕೆಂದು ಶಿಫಾರಸು ಮಾಡಿದ್ದಾರೆ.
ನಾಲ್ಕು ವರ್ಷದ ಎಲ್ಕೆಜಿ ತರಗತಿಯ ವಿದ್ಯಾರ್ಥಿಯೊಬ್ಬ ಅರ್ಜೆಂಟಾಗಿ ಮೂತ್ರ ವಿಸರ್ಜನೆ ಮಾಡಬೇಕಾಗಿ ಬಂದಾಗ, ಶಿಕ್ಷಕಿಯನ್ನು ಕೇಳಲು ಹಿಂಜರಿದು ತನ್ನ ಬಳಿಯಿದ್ದ ಪ್ಲಾಸ್ಟಿಕ್ ಬಾಟಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ. ಇದನ್ನು ನೋಡಿದ ಗೌರಿ ಎಂಬ ಅನಾಗರಿಕ ಶಿಕ್ಷಕಿ ಆ ಮೂತ್ರವನ್ನು ಕುಡಿಯುವಂತೆ ಬಾಲಕನನ್ನು ಬಲವಂತ ಮಾಡಿದ್ದಳು.
ಇದರಿಂದ ತೀವ್ರ ಮುಜುಗರಕ್ಕೆ ಮತ್ತು ಆಘಾತಕ್ಕೀಡಾದ ಬಾಲಕ ತನ್ನ ಪಾಲಕರಿಗೆ ಈ ವಿಷಯವನ್ನು ತಿಳಿಸಿದ್ದ. ಕೂಡಲೆ ಅನಾರ್ಪತಿ ಪೊಲೀಸ್ ಠಾಣೆಗೆ ಧಾವಿಸಿದ್ದ ಬಾಲಕನ ಪಾಲಕರು ಶಿಕ್ಷಕಿಯ ವಿರುದ್ಧ ದೂರು ದಾಖಲಿಸಿದ್ದರು. ಈ ಘಟನೆಯ ಬಗ್ಗೆ ವಿಚಾರಣೆ ನಡೆಸಿ ವಿಸ್ತೃತ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಶಿಕ್ಷಣಾಧಿಕಾರಿಗೆ ಗುರುವಾರ ಆದೇಶ ನೀಡಿದ್ದರು.












Click it and Unblock the Notifications