ವಿಕ್ಟೋರಿಯಾ ಆಸ್ಪತ್ರೆ ಬಳಿ ಇನ್ನೂ ಒಂದು ಟಿಪ್ಪು ಫಿರಂಗಿ
ಬೆಂಗಳೂರು, ನ.23: ಪುರಾತನ ಕಾಲದ ಫಿರಂಗಿಗಳು ಸಿಕ್ಕಿದ್ದಕ್ಕೆ ಮೆಟ್ರೋ ಕಾಮಗಾರಿಯನ್ನು ಅನಿರೀಕ್ಷಿತವಾಗಿ, ಅನಿವಾರ್ಯವಾಗಿ, ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು BMRCL ಸಂಸ್ಥೆ ತಿಳಿಸಿದೆ.
ಬೆಳಗಿನ ಸುದ್ದಿ: ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಗುರುವಾರ ರಾತ್ರಿ ಇನ್ನೂ ಒಂದು ಕಬ್ಬಿಣದ ಫಿರಂಗಿ ಮತ್ತು ಗುಂಡು ಪತ್ತೆಯಾಗಿದೆ. 'ನಮ್ಮ ಮೆಟ್ರೋ' ರೈಲು ಕಾಮಗಾರಿ ಬೆಂಗಳೂರಿನ ಪಾತಾಳಕ್ಕೆ ಕೈಹಾಕಿದ್ದು, ಕೆಆರ್ ಮಾರುಕಟ್ಟೆಯ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಿನ್ನೆಯಷ್ಟೇ ಒಂದು ಫಿರಂಗಿ ಮತ್ತು ಗುಂಡು ಪತ್ತೆಯಾಗಿತ್ತು.

ಮೆಟ್ರೋ ಕಾಮಗಾರಿ ಸ್ಥಗಿತ?: 'ಸದರಿ ಜಾಗವನ್ನು ಸರಕಾರವು ಮೆಟ್ರೋ ಕಾಮಗಾರಿಗಾಗಿ ಹಸ್ತಾಂತರಿಸಿದೆ. ಆದ್ದರಿಂದ ಈ ಜಾಗದಲ್ಲಿ ಹಳೆಯ ಕಾಲದ ಫಿರಂಗಿ ಸಿಕ್ಕಿತೆಂದು ಇಲ್ಲಿ ಉತ್ಖನನಕ್ಕೆ ಅವಕಾಶ ನೀಡುವುದಿಲ್ಲ' ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿರುವ ಸಂದರ್ಭದಲ್ಲೇ ಮತ್ತೊಂದು ಫಿರಂಗಿ ಗುಂಡು ಪತ್ತೆಯಾಗಿರುವುದು ಗಮನಾರ್ಹವಾಗಿದೆ. ಇದರಿಂದ ಈಗ ಈ ಸ್ಥಳದಲ್ಲಿ ಮೆಟ್ರೋ ಕಾಮಗಾರಿ ಸ್ಥಗಿತಗೊಳಿಸಿ, ಉತ್ಖನನಕ್ಕೆ ಅವಕಾಶ ನೀಡಬೇಕೆ? ಎಂಬ ಜಿಜ್ಞಾಸೆ ಶುರುವಾಗಿದೆ.
ಈ ಫಿರಂಗಿಗಳು 18ನೇ ಶತಮಾನ ಟಿಪ್ಪು ಸುಲ್ತಾನ್ ಕಾಲಕ್ಕೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ. ಈ ಫಿರಂಗಿಗಳು ಟಿಪ್ಪು ಕೋಟೆ ಪ್ರದೇಶ ಮತ್ತು ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯಿಂದ ಕಲ್ಲೆಸೆತದ ದೂರದಲ್ಲಿರುವುದರಿಂದ ಇದು ಟಿಪ್ಪು ಕಾಲಕ್ಕೆ ಸೇರಿದ್ದಾಗಿರಬಹುದು ಎಂಬುದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಉಪ ಅಧೀಕ್ಷಕ ಟಿಎಂ ಕೇಶವ ಅವರೂ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಟಿಪ್ಪು ಸುಲ್ತಾನ್ ಇಲ್ಲಿ ಸ್ಥಾಪಿಸಿರಬಹುದು. ಕಾಲಾನಂತರದಲ್ಲಿ ಫಿರಂಗಿ ಮಣ್ಣಿನಲ್ಲಿ ಮುಚ್ಚಿ ಹೋಗಿದೆ. ಫಿರಂಗಿಯು 1 ಟನ್ ಗಿಂತಲೂ ಹೆಚ್ಚು ತೂಕದ್ದಾಗಿದೆ. ಫಿರಂಗಿ ಗುಂಡು 10 ಕೆಜಿ ತೂಕದ್ದಾಗಿದೆ.
ಫಿರಂಗಿ ದೊರೆತ ಈ ಪ್ರದೇಶವು ಐತಿಹಾಸಿಕ ಕಟ್ಟಡಗಳಿಂದ ಕೂಡಿದೆ. ಟಿಪ್ಪು ಅರಮನೆ, ಕೋಟೆ ವೆಂಕಟೇಶ್ವರಸ್ವಾಮಿ ದೇವಾಲಯ ಮತ್ತು ಬೆಂಗಳೂರು ಕೋಟೆ ಈ ಪ್ರದೇಶದಲ್ಲೇ ಇವೆ. ಐತಿಹಾಸಿಕ ಮಹತ್ವ ಹೊಂದಿರುವ ಫಿರಂಗಿ ಹಾಗೂ ಫಿರಂಗಿ ಗುಂಡುಗಳು ಪತ್ತೆಯಾಗಿರುವುದು ಬೆಂಗಳೂರಿಗರನ್ನು ಕುತೂಹಲದ ಮಡುವಿಗೆ ತಳ್ಳಿದೆ.












Click it and Unblock the Notifications