ತಿಮ್ಮಪ್ಪನ ಪತ್ನಿಗೆ ಸಂಸದನ ವಿಶೇಷ ಬರ್ತ್ ಡೆ ಗಿಫ್ಟ್!
ತಿರುಪತಿ, ನ.20: ವಿಶ್ವಖ್ಯಾತ ತಿಮ್ಮಪ್ಪನಿಗೇನೂ ಕೊಡುಗೆಗಳ ಮಹಾಪೂರ ಹರಿದುಬರುವುದು ಸಹಜ. ಆದರೆ ಆತನ ಪತ್ನಿ, ತಿರುಮಲದ ಶ್ರೀ ವೇಂಕಟೇಶ್ವರ ಪದ್ಮಾವತಿ ದೇವಿಗೆ?
ಆಕೆಯೂ ಯಾರಿಗೇನೂ ಕಮ್ಮಿಯಿಲ್ಲ ಎಂಬಂತೆ ಜನಪ್ರತಿನಿಧಿಯೊಬ್ಬರು ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಸೀರೆ ಮತ್ತು ರವಿಕೆಯನ್ನು ದೇವಿಗೆ ಅರ್ಪಿಸಿದ್ದಾರೆ. ಇದುವರೆಗೆ ದೇವಿಗೆ ಸಮರ್ಪಿಸಲಾದ ಅತ್ಯಂತ ಬೆಲೆಬಾಳುವ ಕೊಡುಗೆ ಇದಾಗಿದೆ.

ಗುಂಟೂರಿನ ಕಾಂಗ್ರೆಸ್ ಸಂಸದ ರಾಯಪತಿ ಸಾಂಬಶಿವ ರಾವ್ ಒಡೆತನದ ಕಂಪನಿಯು ಮುತ್ತು, ರತ್ನ ಮತ್ತು ಚಿನ್ನದಿಂದ ತಯಾರಿಸಿರುವ ಅಮೂಲ್ಯ ಸೀರೆಯನ್ನು ಕಾಣಿಕೆಯಾಗಿ ನೀಡಿದೆ. ದೇವಿಯ ಹುಟ್ಟಿದ ದಿನವಾದ ಕಾರ್ತಿಕ ಪಂಚಮಿಯ ಭಾನುವಾರದಂದು ದೇವಿಗೆ ಇದೇ ಸೀರೆಯನ್ನು ಉಡಿಸಿ ಅಲಂಕಾರ ಮಾಡಲಾಯಿತು.
ಸುಮಾರು 9.6 ಕೆಜಿ ತೂಕದ ಚಿನ್ನ, ವಜ್ರ ಮತ್ತು ಬೆಲೆ ಬಾಳುವ ರತ್ನಗಳಿಂದ ಈ ಸೀರೆ-ರವಿಕೆಯನ್ನು ತಯಾರಿಸಲಾಗಿದೆ. ಇದರ ಜೊತೆಗೆ 880 ಗ್ರಾಂ. ತೂಕದ ಮಾಣಿಕ್ಯ, ಪಚ್ಚೆ ಹರಳು, ಮುತ್ತುಗಳನ್ನು ಸಹ ಸೀರೆಯಲ್ಲಿ ಅಳವಡಿಸಲಾಗಿದೆ. ಮುಂಬೈನ ಕರಕುಶಲ ತಜ್ಞರು 4 ತಿಂಗಳ ಅವಧಿಯಲ್ಲಿ ಈ ಸೀರೆಯನ್ನು ಸಿದ್ಧಪಡಿಸಿದ್ದಾರೆ.
ಗುಂಟೂರು ಸಂಸದರೂ ಆಗಿರುವ ರಾಯಪತಿ ಸಾಂಬಶಿವರಾವ್ರ ಪರವಾಗಿ ಅವರ ಟ್ರಾನ್ಸ್ ಟ್ರಾಯ್ ಇಂಡಿಯಾ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಚೆರುಕೂರಿ ಸುಧಾಕರ್, ದೇಗುಲದ ಆಡಳಿತ ಮಂಡಳಿಗೆ ಸೀರೆಯನ್ನು ಹಸ್ತಾಂತರಿಸಿದರು.
ಬೃಹತ್ ಕಾಮಗಾರಿ ಯೋಜನೆ ಜತೆ ತಳುಕು: ಕುತೂಹಲದ ಸಂಗತಿಯೆಂದರೆ ಗೋದಾವರಿ ನದಿಯಲ್ಲಿ ಪೊಲವರಂ ಯೋಜನೆಯಡಿ 4,717 ಕೋಟಿ ರೂ. ಮೌಲ್ಯದ ಬೃಹತ್ ನೀರಾವರಿ ಯೋಜನೆಯ ಕಾಮಗಾರಿ ಟ್ರಾನ್ಸ್ ಟ್ರಾಯ್ ಇಂಡಿಯಾ ಕಂಪನಿಗೆ ಕಳೆದ ತಿಂಗಳು ಮಂಜೂರಾಗಿದೆ.
ಮೊನ್ನೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ರಾಯಪತಿ ಸಾಂಬಶಿವರಾವ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಭಾರಿ ಒತ್ತಡವಿತ್ತು. ಕೊನೆ ಗಳಿಗೆಯಲ್ಲಿ ಅವರ ಕೈಬಿಡಲಾಗಿತ್ತು. ಆದರೆ ಈಗ ಬೃಹತ್ ಕಾಮಗಾರಿ ಯೋಜನೆಯನ್ನು ಅವರದೇ ಒಡೆತನದ ಕಂಪನಿಗೆ ನೀಡುವ ಮೂಲಕ ಸಾಂಬಶಿವರಾವ್ ಅವರನ್ನು ಸಮಧಾನಪಡಿಸಲಾಗಿದೆ ಎಂದು ಹೈದರಾಬಾದ್ ಮೂಲಗಳು ತಿಳಿಸಿವೆ.
ಪ್ರಸ್ತುತ ಚಂಚಲಗೂಡ ಜೈಲಿನಲ್ಲಿರುವ ಜನಾರ್ದನ ರೆಡ್ಡಿ 2009ರಲ್ಲಿ 45 ಕೋಟಿ ರೂ. ಮೌಲ್ಯದ ವಜ್ರ ಖಚಿತ ಕಿರೀಟವನ್ನು ತಿರುಪತಿ ತಿಮ್ಮಪ್ಪನಿಗೆ ಕಾಣಿಕೆಯಾಗಿ ಸಲ್ಲಿಸಿದ್ದರು.












Click it and Unblock the Notifications