ಯಡಿಯೂರಪ್ಪ ಉಳಿಸಿಕೊಳ್ಳೋ ಕಾಲ ಮೀರುತ್ತಿದೆ

ಇದೇ ವೇಳೆ ಯಡಿಯೂರಪ್ಪ ಅವರು ಬಿಜೆಪಿ ಬಿಡಬಾರದು ಎಂದು ನ್ಯಾ.ಮೂರ್ತಿ ಡಾ. ರಾಮಾ ಜೋಯಿಸ್ ಕಿವಿಮಾತು ಹೇಳಿದ್ದಾರೆ.
ಕಳೆದ ವಾರ ಯಡಿಯೂರಪ್ಪನವರು ನಾನು ಎರಡು ತಪ್ಪು ಮಾಡಿದ್ದೇನೆ ಎಂದು ಹೇಳಿದ್ದಾರೆ. ಮೊದಲನೆಯದು: ವರಿಷ್ಠರ ಮಾತು ಕೇಳಿ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟಿದ್ದು. ಎರಡನೆಯದು ಆಗಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಬೇಕಿತ್ತು ಎಂದಿದ್ದಾರೆ.
ಮೊದಲನೇ ತಪ್ಪು ಸತ್ಯಸಂಗತಿ ಎರಡನೇಯದು ಆ ಕಾಲದ ಅನಿಸಿಕೆಯಲ್ಲಿ ತಪ್ಪೇನಿಲ್ಲ. ಆದರೆ, ಈಗ ಅವರಿಗೆ ಅವೆರಡು ತಪ್ಪು ಮಾಡಿದೆ ಎನ್ನಿಸುತ್ತಿರುವುದೇ ತಪ್ಪು.
ಆದ್ದರಿಂದ ಭಾರತೀಯ ಜನತಾ ಪಾರ್ಟಿಯನ್ನು ಬಿಟ್ಟು ಹೊಸ ಪಕ್ಷವನ್ನು ಕಟ್ಟಲು ಮುಂದುವರೆಯುತ್ತಿರುವುದು ಮೊದಲನೇ ತಪ್ಪು. ಈ ತಪ್ಪಿಗಾಗಿ ಅವರು ಮುಂದೆ ಪಶ್ಚಾತಾಪಡಬೇಕಾಗುತ್ತದೆ. ಜೊತೆಗೆ ಯಡಿಯೂರಪ್ಪ ಅವರನ್ನು ಉಳಿಸಿಕೊಳ್ಳಲಾಗದೆ ಬಿಜೆಪಿ ಕೂಡಾ ತೊಂದರೆ ಅನುಭವಿಸುವ ಸಾಧ್ಯತೆಯಿದೆ.
ಈವರೆಗೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಹೇಳಿದ್ದನ್ನೇ ಮಾಡಿದೆ. ಅವರು ಹೇಳಿದಂತೆ, ಸದಾನಂದ ಗೌಡರನ್ನು ಸಿಎಂಯಾಗಿ ಮಾಡಿದರು. 11 ತಿಂಗಳ ನಂತರ ಅವರು ಹೇಳಿದಂತೆ ಶೆಟ್ಟರ್ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು.
ಹೀಗಿರುವಾಗ ಜೀವನಪೂರ್ತಿ ಪಕ್ಷಬಿಡುವ ಪ್ರಶ್ನೆಯೇ ಇಲ್ಲ ಎಂದು ಅನೇಕ ಬಾರಿ ಹೇಳಿದ್ದ ಅವರು ಮತ್ತೊಮ್ಮೆ ವಿಚಾರಮಾಡಿ, ಮತ್ತೊಮ್ಮೆ ತಪ್ಪು ನಿರ್ಧಾರ ಕೈಗೊಳ್ಳದಿರಲಿ ಎಂದು ರಾಮಾ ಜೋಯಿಸ್ ಹೇಳಿದ್ದಾರೆ.
ಅತಂತ್ರ ಸ್ಥಿತಿಯಲ್ಲಿ ನಿರಾಣಿ : ಸದಾ ಕಾಲ ಯಡಿಯೂರಪ್ಪ ಅವರ ನೆರಳಾಗಿ ಕಾಣಿಸಿಕೊಳ್ಳುತ್ತಿದ್ದ ಸಚಿವ ಮುರುಗೇಶ್ ನಿರಾಣಿ ಅವರು ಈಗ ಯಾಕೋ ವರಸೆ ಬದಲಾಯಿಸಿದ್ದಾರೆ. ಅಥವಾ ಸರಿ ನಿರ್ಣಯ ಕೈಗೊಳ್ಳಲಾಗದೆ ತಲೆ ಕೆಡಿಸಿಕೊಂಡಿದ್ದಾರೆ.
ಡಿ.9 ರಂದು ನಿಗದಿಯಾಗಿರುವ ಹಾವೇರಿ ಕೆಜಿಪಿ ಸಮಾವೇಶಕ್ಕೆ ಹೋಗುವ ಅಥವಾ ಬಿಡುವ ನಿರ್ಧಾರ ಮಾಡಿಲ್ಲ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ಸದ್ಯಕ್ಕಂತೂ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿದ್ದೇನೆ.
ರಾಜ್ಯ ಸರ್ಕಾರ ತನ್ನ ಐದು ವರ್ಷದ ಆಡಳಿತವನ್ನು ಪೂರ್ಣಗೊಳಿಸುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ವಿಸರ್ಜನೆಯಾಗುವುದಿಲ್ಲ ಎಂದು ಕೈಗಾರಿಕಾ ಸಚಿವ ನಿರಾಣಿ ಹೇಳಿದ್ದಾರೆ.
ಅಡ್ವಾಣಿ ವಿರುದ್ಧ ಬಿಎಸ್ವೈ ಹೇಳಿಕೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ, ಅಡ್ವಾಣಿ, ಅನಂತಕುಮಾರ, ಯಡಿಯೂರಪ್ಪ ದೊಡ್ಡ ನಾಯಕರು. ಅವರ ಬಗ್ಗೆ ಮಾತನಾಡುವಷ್ಟ ದೊಡ್ಡವನಲ್ಲ ಎಂದು ಹೇಳಿದರು.












Click it and Unblock the Notifications