ವೃದ್ಧ ಮಹಿಳೆಯ ಕತ್ತು ಕೊಯ್ದು ಬರ್ಬರ ಹತ್ಯೆ

ಕೇರಳದ ಪಾಲ್ಘಾಟ್ ನೆಮ್ಮಾರದ ದಿವಂಗತ ಕೃಷ್ಣವಳ್ಳರ್ರವರ ಪತ್ನಿ ಗೌರಮ್ಮ(68) ಎಂಬುವವರೇ ಕೊಲೆಯಾದ ಮಹಿಳೆ. ಚಿನ್ನ ಮತ್ತು ಹಣಕ್ಕಾಗಿ ದಂಡುಪಾಳ್ಯ ಸಿನಿಮಾದ ರೀತಿಯಲ್ಲಿಯೇ ಈ ಕೃತ್ಯವನ್ನು ಪರಿಚಿತ ವ್ಯಕ್ತಿಯೇ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗೌರಮ್ಮ ಕಳೆದ 35 ವರ್ಷಗಳಿಂದ ಡಾ. ನಾರಾಯಣ್ಭಟ್ ಹಾಗೂ ಸವಿತಾದೇವಿ ಎಂಬ ವೈದ್ಯರ ಮನೆಯಲ್ಲಿ ವಾಸವಾಗಿದ್ದರು.
ಘಟನೆ ವಿವರ: ಶುಕ್ರವಾರ ಮಧ್ಯಾಹ್ನ 2.30ರ ಸಮಯದಲ್ಲಿ ಡಾ. ನಾರಾಯಣ್ಭಟ್ ಹಾಗೂ ಡಾ. ಸವಿತಾದೇವಿ ಊಟ ಮಾಡಿದ ನಂತರ ಡಾ. ಸವಿತಾ ರೋಗಿಗಳನ್ನು ನೋಡಲು ಹಾಗೂ ಡಾ. ನಾರಾಯಣ್ ಭಟ್ ಬೆಳಕವಾಡಿ ಸಮೀಪದ ಹೊಸಹಳ್ಳಿಯಲ್ಲಿರುವ ತಮ್ಮ ಜಮೀನನ್ನು ನೋಡಲು ಹೋಗುತ್ತಿದ್ದರು. ಭಾರತೀನಗರ ಸಮೀಪದ ಮಣಿಗೆರೆಗೆ ಹೋಗುವಷ್ಟರಲ್ಲಿಯೇ 10 ನಿಮಿಷದೊಳಗೆ ಕೊಲೆಯಾದ ಸುದ್ದಿ ತಿಳಿಯಿತು ಎಂದು ಭಟ್ ಪೊಲೀಸರಿಗೆ ಹೇಳಿದ್ದಾರೆ.
ಮನೆಯ ವಠಾರದಲ್ಲಿ 6 ರೂಮುಗಳನ್ನು ವಿದ್ಯಾರ್ಥಿಗಳಿಗೆ ಹಾಗೂ 2 ಮನೆಗಳನ್ನು ಕುಟುಂಬದವರಿಗೆ ಬಾಡಿಗೆಗೆ ಕೊಡಲಾಗಿದೆ. ಮಧ್ಯಾಹ್ನದ ಸಮಯದಲ್ಲಿ ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದ್ದರೂ ಕೂಡ ಈ ಕೊಲೆ ನಡೆದಿರುವುದು ಸಾರ್ವಜನಿಕರನ್ನು ಭಯಭೀತರನ್ನಾಗಿಸಿದೆ. ಗೌರಮ್ಮ ಮಧ್ಯಾಹ್ನ ಬರುವಂತಹ ಧಾರಾವಾಹಿಗಳನ್ನು ನೋಡುತ್ತಿದ್ದಾಗ ವ್ಯಕ್ತಿಯೋರ್ವ ಒಳಹೊಕ್ಕು ಈ ಕೃತ್ಯ ನಡೆಸಿದ್ದಾನೆ. ಹಣ ಮತ್ತು ಒಡವೆಯನ್ನು ದೋಚಲು ಯತ್ನಿಸಲು ವಿಫಲನಾದ ಮೇಲೆ ಆಕೆಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಮಂಡ್ಯದಿಂದ ಭಾರತೀನಗರಕ್ಕೆ ಅರ್ಧಗಂಟೆಯಲ್ಲಿ ಬರಬಹುದಾದರೂ, ಕೊಲೆ ನಡೆದು 2 ಗಂಟೆ ಕಳೆದರೂ ಕೂಡ ಶ್ವಾನದಳ ಹಾಗೂ ಬೆರಳಚ್ಚು ತನಿಖಾ ತಂಡ ಸ್ಥಳಕ್ಕೆ ಆಗಮಿಸದಿರುವುದಕ್ಕೆ ಸಾರ್ವಜನಿಕರು ತೀವ್ರ ಅಕ್ರೋಶ ವ್ಯಕ್ತಪಡಿಸಿದರು. ಕೊಲೆಯಾಗಿರುವ ಸುದ್ದಿ ತಿಳಿದ ನಂತರ ಎಎಸ್ಪಿ ರಾಜಣ್ಣ, ಡಿವೈಎಸ್ಪಿ ಜಿ.ಹನುಮಂತರೆಡ್ಡಿ, ಹಾಗೂ ಅಪರ ವೃತ್ತ ಆರಕ್ಷಕ ನಿರೀಕ್ಷಕ ಎ.ಕೆ.ರಾಜೇಶ್, ಪಿಎಸ್ಐ ಜಗದೀಶ್, ಅಂಜು(ಶ್ವಾನದಳ) ಹಾಗೂ ಬೆರಳಚ್ಚುದಾರರು ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಭಾರತೀನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.












Click it and Unblock the Notifications