ಬೆಂಗಳೂರಲ್ಲಿ ಭಾರೀ ಬೆಂಕಿ : ಸುಟ್ಟು ಕರಕಲಾದ ಕಟ್ಟಡ
ಬೆಂಗಳೂರು, ನ.8: ಹೊಸೂರು ರಸ್ತೆ ಬೊಮ್ಮನಹಳ್ಳಿ ಬಳಿಯ ಬರ್ಜರ್ ಪೈಂಟ್ಸ್ ಗೋದಾಮಿಗೆ ಗುರುವಾರ(ನ.8) ಬೆಂಕಿ ಬಿದ್ದಿದೆ. ಗಾರ್ವೇಬಾವಿ ಪಾಳ್ಯದಲ್ಲಿರುವ ಈ ಗೋದಾಮಿನಲ್ಲಿ ಭಾರಿ ಪ್ರಮಾಣದ ಪೈಂಟ್ ಶೇಖರಿಸಲಾಗಿತ್ತು ಎಂದು ತಿಳಿದು ಬಂದಿದೆ.
ಗುರುವಾರ ಬೆಳಗ್ಗೆ 9.45 ರ ಸುಮಾರಿಗೆ ಗೋದಾಮಿನ ಮೊದಲ ಮಹಡಿಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದು ನಂತರ ಉಳಿದ ಭಾಗಗಳಿಗೂ ವ್ಯಾಪ್ತಿಸಿದೆ. ಸುಮಾರು 24 ಕ್ಕೂ ಅಧಿಕ ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.
ಲಕ್ಷಾಂತರ ರು.ಮೌಲ್ಯದ ಪೈಂಟ್ ಬೆಂಕಿಗೆ ಆಹುತಿಯಾಗಿದೆ. ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಹೊಸೂರು ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಬೆಂಕಿಯ ಕೆನ್ನಾಲಗೆ ಅಕ್ಕ ಪಕ್ಕದ ಗಾರ್ಮೆಂಟ್ಸ್ ಕಾರ್ಖನೆಗಳತ್ತ ಚಾಚುತ್ತಿದ್ದು, ಅಗ್ನಿ ಶಾಮಕದಳದ ಸಿಬ್ಬಂದಿ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುತ್ತಿದ್ದಾರೆ.
ಕಿರಿದಾದ ರಸ್ತೆಗಳಿರುವುದರಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ವಿಘ್ನ ಉಂಟಾಗುತ್ತಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಗ್ನಿಶಾಮಕದಳದ ಸಿಬ್ಬಂದಿ ಹೇಳಿದ್ದಾರೆ.
ಪೈಂಟ್ಸ್ ಸ್ಫೋಟ ಭಯ: ಗೋದಾಮಿನಲ್ಲಿರುವ ಅಪಾರ ಪ್ರಮಾಣದ ಪೈಂಟ್ ಡಬ್ಬಗಳು ಬೆಂಕಿಗೆ ಸಿಲುಕಿ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿದೆ. ಪೈಂಟ್ ಡಬ್ಬ ಸ್ಫೋಟಗೊಂಡರೆ ಸುಮಾರು 50 ರಿಂದ 100 ಮೀ ತನಕ ಸಿಡಿಯುವ ಸಂಭವವಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸುಮಾರು 3 ಗಂಟೆಗಳ ಸತತವಾಗಿ ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದ್ದು, ಕಟ್ಟಡ ಸೆಂಟ್ರಿಂಗ್ ಕುಸಿದಿದೆ. ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.
ಬೆಂಕಿ ನಿಯಂತ್ರಣಕ್ಕೆ ಬಂದ ನಂತರ ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಮೊದಲು ಸಾರ್ವಜನಿಕರ ಸುರಕ್ಷತೆ ಮುಖ್ಯ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದ್ದಾರೆ.
ನೂರಾರು ಸಂಖ್ಯೆಯಲ್ಲಿ ಬೆಂಕಿ ಅನಾಹುತ ನೋಡಲು ಜನರು ಆಗಮಿಸಿದ ಕಾರಣ ಹೊಸೂರು ರಸ್ತೆ ಟ್ರಾಫಿಕ್ ಜಾಮ್ ಗೆ ಸಿಲುಕಿ ಒದ್ದಾಡಬೇಕಾಯಿತು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ಒಟ್ಟಾರೆ, ಬೊಮ್ಮನಹಳ್ಳಿ, ಗಾರ್ವೇಬಾವಿ ಪಾಳ್ಯ, ಹೊಸ ರೋಡ್, ಕೂಡ್ಲುಗೇಟ್ ತನಕ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ಸಂಜೆ ವೇಳೆಗೆ ಪೀಣ್ಯ ಕೈಗಾರಿಕಾ ವಲಯದ ಬಳಿಯ ಹೆಗ್ಗನಹಳ್ಳಿಯಲ್ಲಿರುವ ಸ್ನೇಹಾ ಪ್ಲಾಸಿಕ್ಟ್ ಕಂಪನಿಗೆ ಬೆಂಕಿ ಬಿದ್ದ ಸುದ್ದಿ ಬಂದಿದೆ. ಅಪಾರ ಪ್ರಮಾಣದ ಪ್ಲಾಸ್ಟಿಕ್ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.












Click it and Unblock the Notifications