ಬಿಎಸ್ ವೈ ಪಕ್ಷದ ಜೊತೆ ಪ್ರಾದೇಶಿಕ ಪಕ್ಷಗಳ ವಿಲೀನ!

ನವೆಂಬರ್ 6ರಂದು ತಮ್ಮ ಬೆಂಬಲಿಗರಿಗೆ ಬಿಎಸ್ವೈ ಭೋಜನ ಕೂಟ ಏರ್ಪಡಿಸಿದ್ದಾರೆ. ಇದರ ಜೊತೆಗೆ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಕೆಲ ಪ್ರಾದೇಶಿಕ ಪಕ್ಷಗಳು ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದ ಜೊತೆ ಕೈ ಜೋಡಿಸಲು ಮುಂದಾಗಿರುವ ಸುದ್ದಿ ಬಂದಿದೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಭೋಜನಕೂಟ ನಡೆಯಲಿದೆ. ಯಡಿಯೂರಪ್ಪ ತಮ್ಮ ಆಪ್ತರನ್ನು ಮಾತ್ರ ಆಹ್ವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದು ಅನೌಪಚಾರಿಕ ಭೋಜನಕೂಟ ಎಂದು ಹೇಳಲಾಗಿದ್ದರೂ ಯಡಿಯೂರಪ್ಪ ಅವರ ಬೆಂಬಲಿಗರ ಶಕ್ತಿ ಪ್ರದರ್ಶನಕ್ಕಾಗಿ ಈ ಭೋಜನಕೂಟ ಏರ್ಪಡಿಸಲಾಗಿದೆ ಎನ್ನಲಾಗಿದೆ.
ಒಂದು ಕಡೆ ಬಿಜೆಪಿ ವರಿಷ್ಠರು ಸೇರಿದಂತೆ ಸ್ಥಳೀಯ ನಾಯಕರು ಯಡಿಯುರಪ್ಪ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಳೆದ ಮೂರು ದಿನಗಳಿಂದ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ ಯಾವುದೇ ಬೇಡಿಕೆಗಳಿಗೂ ಜಗ್ಗದ ಯಡಿಯೂರಪ್ಪ ಬಿಜೆಪಿ ತೊರೆಯಲು ದೃಢ ನಿರ್ಧಾರ ಕೈಗೊಂಡಿದ್ದಾರೆ.
ಗಡ್ಕರಿ ವಿರುದ್ಧ ಕಿಡಿ: ನವೆಂಬರ್ 10 ರ ಉದ್ಘಾಟನಾ ಸಮಾರಂಭ ಕಾರ್ಯಕ್ರಮದ ಸಿದ್ಧತೆಯನ್ನು ವೀಕ್ಷಿಸಲು ಹಾವೇರಿಗೆ ಅಗಮಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಕಿಡಿಕಾರಿದರು.
ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ನಿತಿನ್ ಗಡ್ಕರಿ ಅವರು ಕೊಟ್ಟ ಭರವಸೆ ಹುಸಿಯಾಗಿದೆ. ಬಿಜೆಪಿ ವರಿಷ್ಠರು ಮಾಡಿರುವ ನಂಬಿಕೆ ದ್ರೋಹವನ್ನು ಮರೆಯಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ಆವರಿಗೆ ಹೆಚ್ಚಿನ ಶಾಸಕರ, ಸಂಸದರ ಬೆಂಬಲವಿಲ್ಲ ಎಂದು ಬಿಜೆಪಿ ವರಿಷ್ಠರಿಗೆ ಯಾರೋ ಕಿವಿಯೂದಿದ್ದಾರೆ ಎಂಬ ಸಂಗತಿ ಯಡಿಯೂರಪ್ಪ ಅವರ ಕಿವಿಗೆ ಬಿದ್ದಿದೆ.
ಹೀಗಾಗಿ ತಾವು ಅಧಿಕಾರ ಕಳೆದುಕೊಂಡಿದ್ದರೂ ತಮಗೆ ಇನ್ನು ರಾಜ್ಯದಲ್ಲಿ ಜನ ಬೆಂಬಲವಿದೆ. ಇದನ್ನು ವರಿಷ್ಠರಿಗೂ ಬಿಸಿ ಮುಟ್ಟಿಸುವ ಕಾರಣದಿಂದಲೇ ಈ ಭೋಜನಕೂಟ ಏರ್ಪಡಿಸಿದ್ದಾರೆ ಎಂದು ಹೇಳಲಾಗಿದೆ.
ಪಕ್ಷಗಳ ವಿಲೀನ: ವಿಆರ್ ಎಲ್ ಮುಖ್ಯಸ್ಥ ವಿಜಯ ಸಂಕೇಶ್ವರ ಅವರ ಕನ್ನಡ ನಾಡು ಪಕ್ಷ, ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಅವರ ಕನ್ನಡ ಚಳವಳಿ ವಾಟಾಳ್ ಪಕ್ಷ ಹಾಗೂ ಬಿಎಂಐಸಿ ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ಅವರ ಕನ್ನಡ ಮಕ್ಕಳ ಪಕ್ಷಗಳು ಬೂಕನಕೆರೆಯ ಎಸ್ ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದೊಂದಿಗೆ ವಿಲೀನಗೊಳ್ಳಲಿದೆ ಎಂಬ ಸುದ್ದಿ ಇದೆ. ಆದರೆ, ಮುಹೂರ್ತ ಫಿಕ್ಸ್ ಆಗಿಲ್ಲ. ಹಾವೇರಿಯಲ್ಲಿ ಇನ್ನಷ್ಟು ಅಚ್ಚರಿಗಳು ಕಾದಿವೆ ಎನ್ನಲಾಗಿದೆ.
ಸ್ಥಳ ಪರಿಶೀಲನೆ: ಹಾವೇರಿಯ ಕೊಳ್ಳಿ ಕಾಲೇಜು ಮೈದಾನ,ಹಾನಗಲ್ ರಸ್ತೆಯ ಖುಲ್ಲಾ ಜಾಗ ಹಾಗೂ ಜೆ ಎಚ್ ಕಾಲೇಜು ಮೈದಾನವನ್ನು ಬಿಎಸ್ ಯಡಿಯೂರಪ್ಪ ಪರಿಶೀಲಿಸಿದ್ದಾರೆ. ಬಹುತೇಕ ಜೆ.ಎಚ್ ಕಾಲೇಜು ಮೈದಾನದಲ್ಲೇ ಡಿ.10 ರ ಮಹತ್ವದ ಸಮಾವೇಶ ನಡೆಯುವ ಸಾಧ್ಯತೆ ಹೆಚ್ಚಿದೆ.
ಸ್ಥಳೀಯ ಶಾಸಕ ಶಿವರಾಜ್ ಸಜ್ಜನರ, ನೆಹರೂ ಓಲೇಕಾರ ಅವರು ಬಿಎಸ್ ಯಡಿಯೂರಪ್ಪ ಜೊತೆ ನಿಂತಿದ್ದಾರೆ. ಇನ್ನಷ್ಟು ಶಾಸಕರು ಹಂತ ಹಂತವಾಗಿ ಯಡಿಯೂರಪ್ಪ ಬೆನ್ನ ಹಿಂದೆ ನಿಲ್ಲಲಿದ್ದಾರೆ ಎಂಬ ಸುದ್ದಿ ಇದೆ. ಯಾವುದಕ್ಕೂ ಹೊಸ ಪಕ್ಷ 'launch' ಗೆ ಮುನ್ನ ನಡೆಯುವ 'lunch' ಪಾರ್ಟಿ ಎಲ್ಲದ್ದಕ್ಕೂ ಉತ್ತರ ನೀಡಲಿದೆ.












Click it and Unblock the Notifications