ಡಾ ರಾಜ್ ಅಪಹರಣ: ಮತ್ತುಲಕ್ಷ್ಮಿ ವೀರಪ್ಪನ್ ಖುಲಾಸೆ
ಈರೋಡ್, ಅ.30: ಕನ್ನಡದ ಮೇರುನಟ, ದಿವಂಗತ ಡಾ ರಾಜ್ ಕುಮಾರ್ ಅಪಹರಣ ಪ್ರಕರಣದಲ್ಲಿ ಕಾಡುಗಳ್ಳ ವೀರಪ್ಪನ್ ನ ಧರ್ಮಪತ್ನಿ ಮುತ್ತುಲಕ್ಷ್ಮಿಯನ್ನು ಖುಲಾಸೆಗೊಳಿಸಲಾಗಿದೆ. ಸಾಕ್ಷ್ಯ ಕೊರತೆಯ ಸಮ್ಮುಖದಲ್ಲಿ ಮುತ್ತುಲಕ್ಷ್ಮಿ ಸೇರಿದಂತೆ 10 ಆರೋಪಿಗಳನ್ನು ಇಲ್ಲಿನ ಕೋರ್ಟ್ ಆರೋಪಮುಕ್ತಗೊಳಿಸಿದೆ.
ಆದರೆ ಪ್ರಕರಣದ ಸಂಬಂಧ ಇತರೆ 13 ಮಂದಿಯನ್ನು 1 ವರ್ಷದ ಕಠಿಣ ಶಿಕ್ಷೆಗೆ ಗುರಿಪಡಿಸಿ ಇಲ್ಲಿನ ಕೋರ್ಟ್ ಮ್ಯಾಜಿಸ್ಟ್ರೇಟ್ ಕೃಷ್ಣನ್ ಅವರು ಸೋಮವಾರ ಸಂಜೆ ತೀರ್ಪು ನೀಡಿದೆ. 108 ದಿನಗಳ ಕಾಲ ಡಾ ರಾಜ್ ರನ್ನು ತನ್ನ ಕಪಿಮುಷ್ಟಿಯಲ್ಲಿರಿಸಿಕೊಂಡಿದ್ದ ಮುತ್ತುಲಕ್ಷ್ಮಿಯ ಪತಿ ವೀರಪ್ಪನ್ ನವೆಂಬರ್ 15, 2000 ದಂದು ಬಿಡುಗಡೆ ಮಾಡಿದ್ದ.
ಶ್ರೀಗಂಧ ಚೋರ, ದಂತ ಚೋರ, ಪೊಲೀಸರೂ ಸೇರಿದಂತೆ ಒಟ್ಟು 130 ಮಂದಿಯನ್ನು ಆಹುತಿ ತೆಗೆದುಕೊಂಡಿದ್ದ ವೀರಪ್ಪನ್ ನನ್ನು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ 2004ರಲ್ಲಿ ಗುಂಡಿಟ್ಟು ಸಾಯಿಸಿದ್ದರು. ಅದರಿಂದ ವೀರಪ್ಪನ್ ನ 2 ದಶಕಗಳ ಅಟ್ಟಹಾಸ ಕೊನೆಗೊಂಡಿತ್ತು.
13 ಮಂದಿಗೆ ಶಿಕ್ಷೆ ಏನಪ್ಪಾ ಅಂದರೆ: ಡಕಾಯಿತಿ ಸೇರಿದಂತೆ ಭಾರತೀಯ ದಂಡ ಸಂಹಿತೆ ನಾನಾ ಸೆಕ್ಷನ್ ಗಳಡಿ 13 ಮಂದಿಗೆ ಶಿಕ್ಷೆ ಒದಗಿಸುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿಯಾಗಿದೆ. ಶಿಕ್ಷೆ ಏನಪ್ಪಾ ಅಂದರೆ 1 ವರ್ಷದ ಕಠಿಣ ಶಿಕ್ಷೆಯ ಜತೆಗೆ ತಲಾ 150 ರೂಪಾಯಿ ದಂಡ.
2000 ಜುಲೈ 30ರ ಅಮಾವಾಸ್ಯೆಯಂದು ಈರೋಡ್ ಜಿಲ್ಲೆಯ ದೊಡ್ಡಗಾಜನೂರಿನಲ್ಲಿ ತೋಡದ ಮನೆಯಲ್ಲಿದ್ದ ಹಿರಿಯ ನಟ ಡಾ. ರಾಜ್ ಕುಮಾರ್ ಅವರನ್ನು ವೀರಪ್ಪನ್ ಮತ್ತು ಅವನ ತಂಡ ಒತ್ತೆ ಹಣಕ್ಕಾಗಿ ಅಪಹರಿಸಿದ್ದ ಎಂಬುದು ಪ್ರಕರಣದ ತಿರುಳಾಗಿತ್ತು. ಪ್ರಕರಣದ ಸಂಬಂಧ ಒಟ್ಟು 26 ಮಂದಿಯನ್ನು ಬಂಧಿಸಲಾಗಿತ್ತು. ಅದರಲ್ಲಿ ಇಬ್ಬರು ವಿಚಾರಣೆಯ ಹಂತದಲ್ಲಿ ಸಾವನ್ನಪ್ಪಿದ್ದರು. [ರಾಜ್ ಅಪಹರಣ ಆಗಿದ್ದು ಹೀಗೆ...]