ಕಾಂಗ್ರೆಸ್ ನಲ್ಲಿ ಇದ್ದಿದ್ರೆ ಕೆಪಿಸಿಸಿ ಅಧ್ಯಕ್ಷ ಆಗಿರುತ್ತಿದ್ದೆ! : ಸೋಮಣ್ಣ
ಬೆಂಗಳೂರು, ಅ.19: ವೀರಶೈವ ಸಮುದಾಯದ ಹಿರಿಯ ನಾಯಕ, ವಸತಿ ಸಚಿವ ವಿ. ಸೋಮಣ್ಣ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಿಹಿ ಸಂಬಂಧ ಕೊನೆಗೊಳ್ಳುವ ಲಕ್ಷಣಗಳು ಬಹುತೇಕ ನಿಚ್ಚಳವಾಗಿದೆ. ಸೋಮಣ್ಣ ಅವರು ಬಹುತೇಕ ಬಿಜೆಪಿ ತೊರೆಯುವ ಹಂತದಲ್ಲಿದ್ದಾರೆ. ಯಡಿಯೂರಪ್ಪ, ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ಯಾರು ಹಿತವರು ನನಗೆ ಈ ಮೂವರೊಳಗೆ ಎಂದು ಸೋಮಣ್ಣ ಹಾಡುತ್ತಿದ್ದಾರೆ.
ಸೋಮಣ್ಣ ಹಾಗೂ ಯಡಿಯೂರಪ್ಪ ನಡುವೆ ಭಿನ್ನಾಭಿಪ್ರಾಯ ತಲೆದೋರಿದ್ದು, ಬಹುತೇಕ ಅವರು ಬಿಜೆಪಿ ತೊರೆಯುವ ಸನ್ನಾಹದಲ್ಲಿದ್ದಾರೆ ಎಂದು ಕಳೆದ್ಪ ಒಂದು ತಿಂಗಳಿನಿಂದ ಹಾಸನ ಜಿಲ್ಲೆ ಸುದ್ದಿ ಗಿರಕಿ ಹೊಡೆಯುತ್ತಲೇ ಇದೆ.

ಮುಂಬರುವ ಚುನಾವಣೆ ವೇಳೆಗೆ ಸೋಮಣ್ಣ ಜೆಡಿಎಸ್ ಸೇರುವುದು ಖಚಿತ ಎನ್ನಲಾಗಿದೆ. ಆದರೆ ಯಡಿಯೂರಪ್ಪ ಸ್ಧಾಪಿಸುತ್ತಿರುವ ನೂತನ ಪಕ್ಷ ಸೇರುವ ಸಾಧ್ಯತೆಗಳಿಲ್ಲ. ಬಿಜೆಪಿ ನಾಯಕರ ವರ್ತನೆಯಿಂದ ಸೋಮಣ್ಣ ಬೇಸತ್ತಿದ್ದು, ಇದನ್ನು ತಮ್ಮ ಆಪ್ತರಲ್ಲೂ ಹೇಳಿಕೊಂಡಿದ್ದಾರೆ.
ಯಾಕಾಗಿ ಬಿಜೆಪಿಗೆ ಸೇರಿದೆನೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಿದ್ದರೆ ಈ ವೇಳೆಗೆ ನಾನು ಕೆ.ಪಿ.ಸಿ.ಸಿ ಅಧ್ಯಕ್ಷ ಸ್ಧಾನ ಪಡೆಯುತ್ತಿದೆ.ನನ್ನ ಸಾಮರ್ಥ್ಯ ನೋಡಿ ಕಾಂಗ್ರೆಸ್ ವರಿಷ್ಠರು ನನಗೆ ಉತ್ತಮ ಸ್ಧಾನ ನೀಡುತ್ತಿದ್ದರು ಎಂದು ಹಲುಬಿದ್ದಾರೆ.
ಯಡಿಯೂರಪ್ಪ ಅವರ ಮುಖ ನೋಡಿ ಬಿಜೆಪಿ ಸೇರಿದೆ. ಆದರೆ ಇತ್ತೀಚಿನ ಬೆಳವಣಿಗೆಗಳಿಂದ ನೊಂದಿದ್ದೇನೆ. ಮುಂದಿನ ಚುನಾವಣೆ ವೇಳೆಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಆಪ್ತರ ಬಳಿ ಸೋಮಣ್ಣ ಹೇಳಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆ ಎದುರಿಸಿ ಮತ್ತೊಮ್ಮೆ ಜಯಭೇರಿ ಬಾರಿಸುವ ಕನಸು ಕಾಣುವುದನ್ನು ಕೈ ಬಿಟ್ಟಿರುವ ಸೋಮಣ್ಣ, ಭೂ ಹಗರಣದಿಂದ ಬಚಾವಾದರೆ ಸಾಕಪ್ಪ ಎನ್ನುವ ಸ್ಥಿತಿ ತಲುಪಿದ್ದಾರೆ.
ಈಗಾಗಲೇ ಒಮ್ಮೆ ಜೆಡಿಎಸ್ನೊಂದಿಗೆ ಸಂಧಾನಕಾರರ ಮೂಲಕ ಈ ಕುರಿತು ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಯಿದೆ. ಸೋಮಣ್ಣ ಸೇರಿಸಿಕೊಳ್ಳಲು ದೇವೇಗೌಡರು ಸಹ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮುಚ್ಚಿದ ಕಾಂಗ್ರೆಸ್ ಬಾಗಿಲು; ಇದಕ್ಕೂ ಮುನ್ನ ಸೋಮಣ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಪ್ರಯತ್ನ ನಡೆಸಿದ್ದರು. ಆದರೆ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಾ ಕೃಷ್ಣ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಸೋಮಣ್ಣ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡರೆ ನಾವು ಪಕ್ಷ ತೊರೆಯುತ್ತೇವೆ. ಬೇರೆ ಪಕ್ಷ(ಜೆಡಿಎಸ್?)ದ ಆಫರ್ ಎಂದು ಅಪ್ಪ ಮಗ ಹೇಳಿದ್ದೆ ತಡ ಕಾಂಗ್ರೆಸ್ ತನ್ನ ತಿಜೋರಿ ಮುಟ್ಟಿ ನೋಡಿ ಕೊಂಡು ಸೋಮಣ್ಣ ನಿಗಿಂತ ಅಪ್ಪಮಗನೇ ಪಕ್ಷದ ಆಧಾರ ಎಂದೆನಿಸಿ, ಸೋಮಣ್ಣ ಅವರ ಮನವಿಯನ್ನು ಕ.ಬು ಗೆ ಎಸೆದಿದೆ.
ಕಾಂಗ್ರೆಸ್ ಪಕ್ಷದ ದಿಡ್ಡಿ ಬಾಗಿಲು ಮುಚ್ಚುತ್ತಿದ್ದಂತೆ ಸೋಮಣ್ಣ ಮತ್ತೊಮ್ಮೆ ದೊಡ್ಡ ಗೌಡರ ಬಳಿ ಸಾಗಿ ನೀವು ಬೆಳೆಸಿದ ಜೀವ ಇದು ಕಾಪಾಡಿ ಎಂದಿದ್ದಾರೆ.
ಇನ್ನು ಸೋಮಣ್ಣ ತಮ್ಮ ನಾಯಕ ಯಡಿಯೂರಪ್ಪ ಅವರ ಪಕ್ಷ ಸೇರಲು ಇಚ್ಛಿಸುತ್ತಿಲ್ಲ. ನೂತನ ಪಕ್ಷ ರಾಜಕೀಯವಾಗಿ ಟೆಕ್ ಆಫ್ ಆಗುವುದು ಕಷ್ಟ. ಹೀಗಾಗಿ ಯಡಿಯೂರಪ್ಪ ಅವರಿಂದ ದೂರು ಉಳಿದಿದ್ದಾರೆ. ಯಡಿಯೂರಪ್ಪ ಅವರ ವಕ್ತಾರಿಕೆ ಕೆಲಸ, ಸಭೆ ಸಮಾರಂಭದಲ್ಲಿ ಅವರ ಜೊತೆ ಒಡನಾಟ ಕೊನೆ ಪಕ್ಷ ಅವರೊಂದಿಗೆ ಭೇಟಿ ಕಾರ್ಯಕ್ರಮವನ್ನು ಸೋಮಣ್ಣ ರದ್ದುಗೊಳಿಸಿದ್ದಾರೆ.
ಯಡಿಯೂರಪ್ಪ ಬಿಜೆಪಿ ತೊರೆದ ಮೇಲೆ ಸೋಮಣ್ಣ ಸೇರಿದಂತೆ ಹಲವಾರು ನಾಯಕರು ಬಿಜೆಪಿಯಲ್ಲಿ ಉಳಿಯುವ ಭರವಸೆ ಕೊಡಲು ಯಾರು ಸಿದ್ಧರಿಲ್ಲದ ಕಾರಣ ಸೋಮಣ್ಣ ಅವರಂತೆ ಹಲವಾರು ಅಪರೇಷನ್ ಕಮಲದಿಂದ ಹುಟ್ಟಿದ ನಾಯಕರು ಅತಂತ್ರರಾಗುವುದು ಖಂಡಿತ.












Click it and Unblock the Notifications