ಹಳೆ ದ್ವೇಷ: ಆಟೋ ಚಾಲಕನ ಭೀಕರ ಕೊಲೆ

ಹಳೆ ದ್ವೇಷಕ್ಕೆ ಆಟೋಚಾಲಕನನ್ನು ಕೊಲೆ ಮಾಡಿರುವ ಘಟನೆ ಕಾಟನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಡ್ಯ ಮೂಲದ 26 ವರ್ಷ ವಯಸ್ಸಿನ ನವೀನ್ಕುಮಾರ್ ಕೊಲೆಯಾದ ಆಟೋ ಚಾಲಕ. ಈತ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಸುಂಕದಕಟ್ಟೆಯಲ್ಲಿ ಬಾಡಿಗೆಮನೆಯಲ್ಲಿ ವಾಸವಿದ್ದ ನವೀನ್ ಶನಿವಾರ ತಡ ರಾತ್ರಿ ಮನೆಗೆ ತೆರಳುವಾಗ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಶಾಂತಲಾ ಸಿಲ್ಕ್ ಶೋ ರೂಮ್ ಹತ್ತಿರ ನಾಲ್ವರು ಅಡ್ಡಗಟ್ಟಿದ್ದಾರೆ.
ಪ್ರಾಣ ಭೀತಿಯಿಂದ ಓಡಲು ಯತ್ನಿಸಿದ ನವೀನ್ ಕುಮಾರ್ ನನ್ನು ತಡೆದ ನಾಲ್ವರು ಆತನ ಎದೆ ಹಾಗೂ ಹೊಟ್ಟೆಗೆ ಅನೇಕ ಬಾರಿ ಚಾಕುವಿನಿಂದ ಚುಚ್ಚಿದ್ದಾರೆ. ಬಾಡಿಗೆ ವಿಚಾರದಲ್ಲಿ ಜಗಳ ತೆಗೆದು ಹಳೆ ದ್ವೇಷದಿಂದ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ತೀವ್ರ ರಕ್ತಸ್ರಾವದಿಂದ ಬಳಲಿದ ನವೀನ್ ಅವರನ್ನು ಸ್ಥಳೀಯರು ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ನೀಡುವ ಮೊದಲೇ ನವೀನ್ ಪ್ರಾಣಪಕ್ಷಿ ಹಾರಿ ಹೋಗಿತ್ತು. ಕೂಗಳತೆ ದೂರದಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆ ಹಾಗೂ ಉಪ್ಪಾರಪೇಟೆ ಪೊಲೀಸ್ ಠಾಣೆ ಇದ್ದರೂ ಈ ರೀತಿ ರಸ್ತೆ ಮಧ್ಯೆ ಕೊಲೆಯಾಗಿರುವುದು ಆತಂಕಕಾರಿಯಾಗಿದೆ.
ಕೆಲವು ದಿನಗಳ ಹಿಂದೆ ನವೀನ್ಕುಮಾರ್ ಮೆಜೆಸ್ಟಿಕ್ನಿಂದ ಪ್ರಯಾಣಿಕರೊಬ್ಬರನ್ನುಕರೆದೊಯ್ದಿದ್ದ ವಿಚಾರದಲ್ಲಿ ಆನಂದ್, ರಘು ಸೇರಿದಂತೆ ನಾಲ್ವರು ನವೀನ್ ಜತೆಜಗಳವಾಡಿದ್ದರು.
ಇದೇ ದ್ವೇಷದಲ್ಲಿ ನಾಲ್ವರು ಅಡ್ಡಗಟ್ಟಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಕಾಟನ್ಪೇಟೆ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.
ಕೊಲೆಗೈದವರು ಯಾರು?: ಆರೋಪಿಗಳಲ್ಲಿ ಪ್ರಮುಖನಾದ ರಘು ಕೂಡಾ ಮಂಡ್ಯ ಜಿಲ್ಲೆಯವನಾಗಿದ್ದಾನೆ. ಈ ಹಿಂದೆ ಅಪರಾಧ ಪ್ರಕರಣವೊಂಡರಲ್ಲಿ ಭಾಗಿಯಾಗಿದ್ದು, ಇತ್ತೀಚೆಗೆ ಜೈಲಿಗೆ ಹೋಗಿ ಬಂದಿದ್ದ ಎಂದು ತಿಳಿದು ಬಂದಿದೆ.
ನವೀನ್ ಕುಮಾರ್ ಗೆ ಆಗಾಗ ಹಣಕಾಸಿನ ನೆರವು ನೀಡುತ್ತಿದ್ದ ರಘು, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರಯಾಣಿಕರ ಬಾಡಿಗೆ ವಿಚಾರದಲ್ಲೂ ತಗಾದೆ ತೆಗೆದಿದ್ದಾನೆ. ಸ್ನೇಹಿತನಿಗೆ ಕಷ್ಟ ಸಮಯದಲ್ಲಿ ನೆರವು ನೀಡುತ್ತಿದ್ದ ರಘು ಇದ್ದಕ್ಕಿದ್ದಂತೆ ಕ್ಷುಲ್ಲಕ ಕಾರಣಕ್ಕೆ ಜಗಳ ಕಾಯ್ದು ಕೊಲೆ ಮಾಡುವ ನಿರೀಕ್ಷೆ ಇರದ ನವೀನ್, ಹಠಾತ್ ದಾಳಿಗೆ ತತ್ತರಿಸಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.












Click it and Unblock the Notifications