ಕಡು ಸಂಕಷ್ಟದಲ್ಲಿ ಕಿಂಗ್ ಫಿಶರ್ ವಿಜಯ್ ಮಲ್ಯ
ಬೆಂಗಳೂರು, ಅ.13: 'ಉದಯವಾಣಿ' ದಿನಪತ್ರಿಕೆಯಲ್ಲಿ ರಾಂಗೋಪಾಲ್ 'ಟೈಂಬಾಂಬ್' ಸಿಡಿಸಿರುವಂತೆ 'ಸಾವಿರಾರು ಜನರನ್ನು ಏರೋಪ್ಲೇನ್ ಹತ್ತಿಸಿದ್ದ ಕಿಂಗ್ ಮಲ್ಯಗೆ ಪೊಲೀಸರೇ 'ಏರೋಪ್ಲೇನ್' ಹತ್ತಿಸುತ್ತಾರಾ? ಅಥವಾ ಅಖಂಡ ನಿಷ್ಠೆಯಿಂದ ಪೂಜೆ ಸಲ್ಲಿಸಿರುವುದರಿಂದ ಕಿಂಗ್ ಮಲ್ಯಗೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ತಥಾಸ್ತು ಅನ್ನಬಹುದಾ? ಕಾದು ನೋಡಬೇಕು.
ಈ ಮಧ್ಯೆ, ಕಿಂಗ್ ಫಿಷರ್ ಒಡೆಯ ವಿಜಯ ಮಲ್ಯಗೆ ಅನೇಕ ಸಂಕಷ್ಟಗಳು ಎದುರಾಗಿವೆ. ಒಂದು ಚೆಕ್ ಬೌನ್ಸ್ ಕೇಸಿನಲ್ಲಿ ಪೊಲೀಸರು ಅವರನ್ನು ಬಂಧಿಸಿ, ನ್ಯಾಯಾಲಯದಲ್ಲಿ ಹಾಜರುಪಡಿಸುವ ತುರ್ತು ಅಗತ್ಯವಿದೆ. ಮತ್ತೊಂದು DGCA ವಿಧಿಸಿರುವ ಅಂತಿಮ ಗಡುವು ಇಂದಿಗೆ ಮುಗಿಯುತ್ತಿದೆ. ಸೋ, DGCA ಸಹ ಕಿಂಗ್ ಫಿಷರ್ ಹಾರಾಟದ ಬಗ್ಗೆ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಿದೆ. ಹಾಗೆಯೇ, ಕಿಂಗ್ ಫಿಷರ್ ಉದ್ಯೋಗಿ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೂ ಕಾಡುತ್ತಿದೆ. ಈ ಮಧ್ಯೆ ಆಕಾಶದೆತ್ತರ ಹಾರಿರುವ ಸಾಲದ ಸುಂಟರಗಾಳಿ.

ಕುತೂಹಲಕಾರಿ ಸಂಗತಿಯೆಂದರೆ DGCA ನೋಟಿಸ್ ಗೆ ಕಿಂಗ್ ಫಿಷರ್ ಏರ್ ಲೈನ್ಸ್ ಗೆ ಉತ್ತರ ನೀಡುವ ಚೈತನ್ಯವೂ ಇಲ್ಲ. ಕಿಂಗ್ ಫಿಷರ್ ಏರ್ ಲೈನ್ಸ್ ವಿಮಾನಗಳು ಹಾರಾಟ ಸ್ಥಗಿತಗೊಳಿಸಿದೆ. ಸಿಬ್ಬಂದಿಗೆ ಸಂಬಳವನ್ನೇ ನೀಡುತ್ತಿಲ್ಲ. ಏಳು ತಿಂಗಳಿಂದ ಇಂಜಿನಿಯರುಗಳಿಗೆ ಸಂಬಳವನ್ನೇ ನೀಡಿಲ್ಲ. ಜತೆಗೆ ಇಡೀ ಜಗತ್ತಿಗೆ ತಿಳಿದಿರುವಂತೆ ಕಿಂಗ್ ಫಿಷರ್ ಏರ್ ಲೈನ್ಸ್ ಸಾಲಗಳು ಆಗಸದೆತ್ತರ ಇದೆ. ಪರಿಸ್ಥಿತಿ ಹೀಗಿರುವಾಗ ನಿಮ್ಮ ಹಾರಾಟವನ್ನು ನಿಲ್ಲಿಸಬಾರದೇಕೆ ಎಂದು ಪ್ರಶ್ನಿಸಿ ನಾಗರೀಕ ವಿಮಾನಯಾನ ಮಹಾ ನಿರ್ದೇಶನಾಲಯ ನೋಟಿಸ್ ನೀಡಿದೆ.
ಆದರೆ ಮಲ್ಯ ಸಾಹೇಬರು ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಅಕ್ಟೋಬರ್ 21ರ ನಂತರ ಕಿಂಗ್ ಫಿಷರ್ ಏರ್ ಲೈನ್ಸ್ ವಿಮಾನ ಪ್ರಯಾಣಕ್ಕೆ ಪ್ರಯಾಣಿಕರಿಂದ ಬುಕ್ಕಿಂಗ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಯಾಣಿಕರು ಯಾವ ಖಾತ್ರಿ ಮೇಲೆ ಕಿಂಗ್ ಫಿಷರ್ ಏರ್ ಲೈನ್ಸ್ ವಿಮಾನ ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೋ ತಿಳಿಯದಾಗಿದೆ ಎಂದು DGCA ಉನ್ನತಾಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
ಆದರೆ www.flykingfisher.com ಯಾವುದಕ್ಕೇ ಆಗಲಿ ಎಂದು All flights are subject to regulatory approval ಎಂದು ತನ್ನ ಗ್ರಾಹಕರಿಗೆ ಎಚ್ಚರಿಸಿ, ಕೈತೊಳೆದುಕೊಂಡಿದೆ.
ಇನ್ನು, ಟ್ರಾವೆಲ್ ಏಜೆಂಟರೂ ಕಿಂಗ್ ಫಿಷರ್ ಏರ್ ಲೈನ್ಸ್ ಸಹವಾಸ ಸಾಕು ಎನ್ನುತ್ತಿದ್ದಾರೆ. ಪುಣ್ಯಾತ್ಮ ಮಲ್ಯ ಸಾಹೇಬರು ಅವರಿಗೂ ಆರೇಳು ತಿಂಗಳಿಂದ ಕಮಿಷನ್ ಅನ್ನೇ ನೀಡಿಲ್ಲ. 'ಆ ಕಡೆ ರೀಫಂಡೂ ಇರುವುದಿಲ್ಲ; ಈ ಕಡೆ ವಿಮಾನ ಯಾನವೂ ಇರುವುದಿಲ್ಲ. ತ್ರಿಶಂಕು ಸ್ಥಿತಿ ಎದುರಾಗಬಹುದು ಎಚ್ಚರಾ' ಎಂದು ಟ್ರಾವೆಲ್ ಏಜೆಂಟರು ತಮ್ಮ ಗ್ರಾಹರಿಕೆ ಸಂದೇಶ ರವಾನಿಸುತ್ತಿದ್ದಾರೆ.
ಮಲ್ಯ ಸಂಕಷ್ಟಗಳು ಇನ್ನೂ ಏನೇನು:
ಕಿಂಗ್ ಫಿಷರ್ ಸಂಸ್ಥೆ ಒಡೆಯ ವಿಜಯ್ ಮಲ್ಯ ಅವರ ವಿರುದ್ಧ ಹೈದರಾಬಾದಿನ ಕೋರ್ಟ್ ನಿನ್ನೆ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಹೈದರಾಬಾದಿನ ಜಿಎಂಅರ್ ಸಮೂಹದ GHIAL ಸಂಸ್ಥೆ ಕಿಂಗ್ ಫಿಷರ್ ಸಂಸ್ಥೆ ವಿರುದ್ಧ 10.3 ಕೋಟಿ ಮೊತ್ತದ ಚೆಕ್ ಹಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
ಅದಕ್ಕೂ ಮುನ್ನ ತೀವ್ರ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಿಂಗ್ ಫಿಷರ್ ಉದ್ಯೋಗಿ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಸ್ಥೆ ಒಡೆಯ ಮಲ್ಯರಿಗೆ ಕುತ್ತುಂಟು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆ ಒಡೆಯ ವಿಜಯ್ ಮಲ್ಯ ಅವರ ವಿರುದ್ಧ ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೋಮವಾರ(ಅ.8) ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications