ದೇವೇಗೌಡರನ್ನು ಕರೆಯದ ಬಿಜೆಪಿಗೆ ಎಚ್ಡಿಕೆ ಹಿಡಿ ಶಾಪ

ಸುವರ್ಣ ವಿಧಾನಸೌಧದ ಮೂಲಕ ಉತ್ತರ ಕರ್ನಾಟಕ ಭಾಗದ ಜನರಿಗೆ ಭಾಗ್ಯದ ಬಾಗಿಲು ತೆರೆದಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಆದರೆ, ಈ ಭಾಗ್ಯದ ಬಾಗಿಲು ಎಷ್ಟು ದಿನ ತೆರೆದಿರುತ್ತದೋ ಗೊತ್ತಿಲ್ಲ.
ಸುವರ್ಣ ವಿಧಾನಸೌಧ ಜೆಡಿಎಸ್ ಚಿಂತನೆಯ ಫಲ. ಆದರೆ, ಸುವರ್ಣಸೌಧ ತನ್ನ ಕನಸಿನ ಕೂಸೆಂದು ಬಿಜೆಪಿ ಸರ್ಕಾರ ಬೊಗಳೆ ಬಿಡುವುದನ್ನು ನಿಲ್ಲಿಸಲಿ ಎಂದು ಕುಮಾರಸ್ವಾಮಿ ಆಕ್ಷೇಪಿಸಿದರು.
ನೂತನವಾಗಿ ಉದ್ಘಾಟನೆಗೊಂಡಿರುವ ಸುವರ್ಣ ವಿಧಾನಸೌಧದಲ್ಲಿ ವರ್ಷದ 365 ದಿನಗಳ ಕಾಲವೂ ಆಡಳಿತಾತ್ಮಕ ಚಟುವಟಿಕೆಗಳು ನಡೆಯಬೇಕು ಆಗ ಮಾತ್ರ ಈ ಸೌಧಕ್ಕೆ ಅರ್ಥ ಬರಲಿದೆ. ಉತ್ತರ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ಅದರೆ, ಇಲ್ಲಿ ಅಧಿವೇಶನ ನಡೆಸಲು ಇದನ್ನು ಮತ್ತೊಂದು ಶಕ್ತಿಸೌಧವನ್ನಾಗಿಸಲು ಬಿಜೆಪಿ ಸರ್ಕಾರವೇ ಉಳಿದಿರುವುದಿಲ್ಲ.
ರಾಜ್ಯದಲ್ಲಿನ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹುನ್ನಾರ ನಡೆಸಿದ್ದಾರೆ. ಬಿಜೆಪಿಯಲ್ಲಿದ್ದುಕೊಂಡೇ ಪಕ್ಷ ತೊರೆಯುವ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ಅವರ ಸರ್ಕಾರ ತೀವ್ರ ನಿಗಾ ಘಟಕದಲ್ಲಿದ್ದು, ಯಾವುದೇ ಕ್ಷಣದಲ್ಲಾದರೂ ಪತನಗೊಳ್ಳಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.
ಉತ್ತರ ಕರ್ನಾಟಕ ಮಂದಿಯ ಬಹುದಿನದ ಕನಸು ನನಸಾಗಿದೆ. ಕುಂದಾನಗರಿಯಲ್ಲಿ ಸುವರ್ಣ ವಿಧಾನ ಸೌಧವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗುರುವಾರ(ಅ.11) ಲೋಕಾರ್ಪಣೆ ಮಾಡಿದರು. ನಂತರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಧಿವೇಶನಕ್ಕೆ ಚಾಲನೆ ನೀಡಿ ಭಾಷಣ ಮಾಡಿದರು.
ರಾಜ್ಯಪಾಲ ಎಚ್ ಆರ್ ಭಾರಧ್ವಾಜ್, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಎಚ್ ಮುನಿಯಪ್ಪ, ಉಪ ಮುಖ್ಯಮಂತ್ರಿ ಆರ್ ಅಶೋಕ್, ಕೆಎಸ್ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಎನ್ ಧರಂಸಿಂಗ್ ಹಾಗೂ ಡಿವಿ ಸದಾನಂದ ಗೌಡ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications