ಹರ್ಯಾಣಾ ಅತ್ಯಾಚಾರ ಪಟ್ಟಿಗೆ ಮತ್ತೆರಡು ಸೇರ್ಪಡೆ

ವಿಪರ್ಯಾಸದ ಸಂಗತಿಯೆಂದರೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನರ್ವಾಣಾಗೆ ಭೇಟಿ ನೀಡಿ, ಸಾಮೂಹಿಕ ಅತ್ಯಾಚಾರಕ್ಕೊಳಗಾದ ದಲಿತ ಯುವತಿಯ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿ, ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿರುವ ಸಂದರ್ಭದಲ್ಲಿಯೇ ಮತ್ತೆ ಎರಡು ಅತ್ಯಾಚಾರಗಳು ದಾಖಲಾಗಿವೆ.
ಒಂದು ಪ್ರಕರಣದಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಿಂದ ಇಲ್ಲಿಗೆ ವಲಸೆ ಬಂದಿರುವ ಕಾರ್ಮಿಕ ಕುಟುಂಬಕ್ಕೆ ಸೇರಿದ 12 ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪರ್ವೀನ್ ಎಂಬ ಯುವಕನನ್ನು ಬಂಧಿಸಲಾಗಿದೆ.
ಮೊದಲಿಗೆ, ಪರ್ವೀನ್ನನ್ನು ಬಾಲಕಿಯನ್ನು ಅಪಹರಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಆದರೆ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಆತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಸಂಗತಿ ದೃಢಪಟ್ಟಿದೆ. ಆ ಯುವಕ ಬಾಲಕಿಯನ್ನು ಅಕ್ಟೋಬರ್ 3ರಂದು ಅತ್ಯಾಚಾರ ಮಾಡಿದ ಎಂದು ಪೊಲೀಸರು ಹೇಳಿದ್ದಾರೆ.
ವಿಧವೆಯ ಬಲಾತ್ಕಾರ : ಇನ್ನೊಂದು ಪ್ರಕರಣದಲ್ಲಿ, ತನ್ನ ಮೇಲೆ ಗತಿಸಿದ ಗಂಡನ ಸ್ನೇಹಿತ ರಾಜಿಂದರ್ ಅತ್ಯಾಚಾರ ಎಸಗಿದ್ದಾನೆ ಎಂದು 30 ವರ್ಷದ ವಿಧವೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನಲ್ಲಿ, ಆತ ಆಕೆಯನ್ನು ಅಂಬಾಲಾಗೆ ನಿವೇಶನ ತೋರಿಸುವುದಾಗಿ ಕರೆದುಕೊಂಡು ಹೋಗಿ, ತಂಪು ಪಾನೀಯದಲ್ಲಿ ಮತ್ತು ಬರಿಸುವ ವಸ್ತು ಸೇರಿಸಿ, ಪ್ರಜ್ಞೆ ತಪ್ಪಿದ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿದ್ದಾಳೆ.
ರಾಜಿಂದರ್ ಈ ಘಟನೆಯನ್ನು ವಿಡಿಯೋ ಚಿತ್ರೀಕರಣ ಮಾಡಿದ್ದು, ಪೊಲೀಸರಿಗೆ ದೂರು ನೀಡಿದರೆ ವಿಡಿಯೋ ಎಲ್ಲ ಕಡೆ ಹಂಚುವುದಾಗಿ ಬೆದರಿಸಿದ್ದಾನೆ ಎಂದು ಆಕೆ ದೂರುದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ರಾಜಿಂದರ್ನನ್ನು ಹುಡುಕುತ್ತಿದ್ದಾರೆ.
ಕಳೆದ ಒಂದು ತಿಂಗಳಲ್ಲಿ, ರೋಹ್ತಕ್, ಹಿಸಾರ್, ಜಿಂದ್, ಭಿವಾನಿ, ಯಮುನಾನಗರ, ಪಾಣಿಪತ್, ಸೋನಿಪತ್, ಅಂಬಾಲಾ, ಕರ್ನಲ್ ಮತ್ತು ಫರೀದಾಬಾದ್ ಪೊಲೀಸ್ ಠಾಣೆಗಳಲ್ಲಿ ಬಲಾತ್ಕಾರ ಮತ್ತು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣಗಳು ದಾಖಲಾಗಿವೆ. ಸೋನಿಯಾ ಗಾಂಧಿ ನ್ಯಾಯ ದೊರಕಿಸಿಕೊಡುವ ಹೊತ್ತಿಗೆ ಇನ್ನೆಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಲಿವೆಯೋ ಎಂದು ಜನರು ಆತಂಕಭರಿತ ವಿಷಾದ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications