ನಂಬಿ, ಬಿಎಸ್ವೈ ಬಿಜೆಪಿ ಬಿಡೋಲ್ಲ ನ.19ಕ್ಕೆ ಗ್ರ್ಯಾಂಡ್ ಷೋ

ಹೌದು, ದಾವಣಗೆರೆಯ ಸಂಸದ, ಯಡಿಯೂರಪ್ಪನೋರ ನಿಕಟಮಿತ್ರ ಜಿ.ಎಂ. ಸಿದ್ದೇಶ್ವರ ಅವರನ್ನು ನಂಬೋದಾದ್ರೆ ಯಡಿಯೂರಪ್ಪ ಖಂಡಿತಾ ಪಕ್ಷ ಬಿಡೋರಲ್ಲ. ಸುಮ್ನೇ ಹಾಗೇ ಮೈಕ್ ಟೆಸ್ಟಿಂಗ್ 1, 2, 3 ಅಷ್ಟೇ.
ಬಿಜೆಪಿ ಭಿನ್ನಮತವನ್ನು ಪಕ್ಷದ ನಾಯಕರು ಶೀಘ್ರ ಶಮನಗೊಳಿಸಲಿದ್ದಾರೆ ಎಂದು ದಾವಣಗೆರೆಯಲ್ಲಿ ನಿನ್ನೆ ಅಖಂಡ ವಿಶ್ವಾಸ ವ್ಯಕ್ತಪಡಿಸಿರುವ ಸಿದ್ದೇಶ್ವರ ಅವರು ಡಿಸೆಂಬರ್ವರೆಗೆ ಕಾಯಿರಿ ಎಂದು ಯಡಿಯೂರಪ್ಪ ಹೇಳಿರುವುದು ಬಿಜೆಪಿ ಹೈಕಮಾಂಡಿಗಲ್ಲ, ಅದು ಪ್ರತಿ ಪಕ್ಷದವರಿಗೆ.
ಡಿಸೆಂಬರ್ ನಂತರ ಬಿಜೆಪಿ ಮತ್ತೆ ಒಗ್ಗಟ್ಟಿನಿಂದ ಸಾಗಿ ಮುಂದಿನ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತದೆ ಎಂಬುದಾಗಿ ಯಡಿಯೂರಪ್ಪ ಹೇಳಿದ್ದಾರೆಯೇ ಹೊರತು ಪಕ್ಷ ತೊರೆಯುವುದಾಗಿ ಹೇಳಿಲ್ಲ. ಅವರ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಜಿ.ಎಂ. ಹೇಳಿರುವುದು ಕುತೂಹಲ ಮೂಡಿಸಿದೆ.
ಇದೇ ವೇಳೆ, ಅಬಕಾರಿ ಸಚಿವ ರೇಣುಕಾಚಾರ್ಯ ಮತ್ತು ವಸತಿ ಸಚಿವ ಸೋಮಣ್ಣ ಅವರು ಎಂದಿನಂತೆ ಯಡಿಯೂರಪ್ಪ ಪರ ವಕಾಲತ್ತು ವಹಿಸಿ, ಮಾತನಾಡಿದ್ದಾರೆ. ಯಡಿಯೂರಪ್ನೊರು ಬಿಜೆಪಿಯ ದೊಡ್ಡ ಆಸ್ತಿ. ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವಂತಾಗಲು ಪಕ್ಷದ ವರಿಷ್ಠ ಮಂಡಳಿಯನ್ನು ಭೇಟಿಯಾಗಿ ಯಡಿಯೂರಪ್ಪ ಅವರ ಮನವೊಲಿಸಲಾಗುವುದು ಎಂದು ಇಬ್ಬರೂ ತಿಳಿಸಿದ್ದಾರೆ.
ನ. 19ರಂದು ದಾವಣಗೆರೆಯಲ್ಲಿ ಗ್ರ್ಯಾಂಡ್ ಷೋ
ಪಕ್ಷ ತೊರೆಯುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗರು ಮುಂದಿನ ತಿಂಗಳು (ನ.19) ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಉದ್ದೇಶಿಸಿದ್ದಾರೆ. ಜಿ.ಎಂ. ಸಿದ್ದೇಶ್ವರ ಅವರು ಇದರ ಉಸ್ತುವಾರಿ ವಹಿಸಲಿದ್ದಾರೆ ಎನ್ನಲಾಗಿದೆ.
ಈ ಸಮಾವೇಶವನ್ನು ಸಂಪೂರ್ಣವಾಗಿ ಬಿಜೆಪಿಯನ್ನು ಹೊರಗಿಟ್ಟು ಮಾಡಲು ನಿರ್ಧರಿಸಲಾಗಿದ್ದು, ಯಡಿಯೂರಪ್ಪ ಬೆಂಬಲಿಗ ಸಚಿವರು, ಸಂಸದರು ಹಾಗೂ ಶಾಸಕರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಉಳಿದಂತೆ ಬಿಜೆಪಿಯ ನಾಯಕರಿಗೆ ಇಲ್ಲಿ ಆಹ್ವಾನವಿಲ್ಲ. ದಾವಣಗೆರೆ ರಾಜ್ಯದ ಕೇಂದ್ರ ಬಿಂದುವಾಗಿರುವುದರಿಂದ ಹಲವಾರು ಮಹತ್ವದ ರಾಜಕೀಯ ಸಮಾವೇಶಗಳು ಆ ನೆಲದಲ್ಲಿ ನಡೆದಿವೆ. ಹೀಗಾಗಿ ಯಡಿಯೂರಪ್ಪ ಬೆಂಬಲಿಗರ ಉದ್ದೇಶಿತ ದಾವಣಗೆರೆ ಸಮಾವೇಶ ಸಹಜವಾಗಿಯೇ ಮಹತ್ವ ಪಡೆದುಕೊಂಡಿದೆ.
ಈಗಾಗಲೇ ಪಕ್ಷ ತೊರೆಯುವ ಬಗ್ಗೆ ಹಲವಾರು ಬಾರಿ ಹೇಳಿಕೆಗಳನ್ನು ನೀಡುತ್ತಿರುವ ಯಡಿಯೂರಪ್ಪ ಅವರು ದಾವಣಗೆರೆಯ ಈ ಸಮಾವೇಶದಲ್ಲಿ ಮತ್ತೂಮ್ಮೆ ಅದನ್ನು ದೃಢ ಸಂಕಲ್ಪದೊಂದಿಗೆ ಹೇಳುವ ನಿರೀಕ್ಷೆಯಿದೆ.
ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರು ಡಿಸೆಂಬರ್ವರೆಗೆ ಬಿಜೆಪಿಯಲ್ಲೇ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ನವೆಂಬರ್ವರೆಗೆ ಪಕ್ಷದಲ್ಲಿನ ಬೆಳವಣಿಗೆಗಳನ್ನು ಆಧರಿಸಿ, ಅಗತ್ಯ ಬಿದ್ದರೆ ಯಡಿಯೂರಪ್ಪ ಅವರು ಸಮಾವೇಶದ ದಿನವೇ ಬಿಜೆಪಿಗೆ ರಾಜಿನಾಮೆ ನೀಡುವ ಘೋಷಣೆ ಹೊರಬೀಳುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಯಡಿಯೂರಪ್ಪ ರಾಜ್ಯ ಪ್ರವಾಸ ರದ್ದು
ಕಾವೇರಿ ಚಳವಳಿ ಹಿನ್ನೆಲೆಯೋ ಅಥವಾ ರಾಜಕೀಯ ಜಿಜ್ಞಾಸೆಯೋ ಅಂತೂ ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಮಹತ್ವಾಕಾಂಕ್ಷಿ ರಾಜ್ಯ ಪ್ರವಾಸವನ್ನು ರದ್ದು ಮಾಡಿದ್ದಾರೆ. ಚಿಕ್ಕಮಗಳೂರು ಮತ್ತು ತರೀಕೆರೆ ಕಾರ್ಯಕ್ರಮ ಮುಗಿಸಿಕೊಂಡು ಅವರು ಬುಧವಾರ ಶಿವಮೊಗ್ಗಕ್ಕೆ ತೆರಳಬೇಕಿತ್ತು. ಕಾರ್ಯಕ್ರಮ ದಿಢೀರನೆ ರದ್ದು ಮಾಡಿ, ಅವರು ಬೆಂಗಳೂರಿಗೆ ವಾಪಸಾಗಿದ್ದಾರೆ.
ಕಾವೇರಿ ಚಳವಳಿ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಸುತ್ತುವುದು ಸರಿಯಲ್ಲ ಎಂಬ ಕಾರಣಕ್ಕೆ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ. ಇದೇ 5 ರಿಂದ ಹಮ್ಮಿಕೊಂಡಿದ್ದ ರಾಜ್ಯ ಪ್ರವಾಸವನ್ನೂ ಅವರು ರದ್ದು ಮಾಡಿದ್ದಾರೆ ಎಂದು ಯಡಿಯೂರಪ್ಪ ಆಪ್ತರು ತಿಳಿಸಿದ್ದಾರೆ.












Click it and Unblock the Notifications