Get Updates
Get notified of breaking news, exclusive insights, and must-see stories!

ಸದಾನಂದ ವಿರುದ್ಧ ಮತ್ತೊಂದು ಲೋಕಾ ದೂರು ದಾಖಲು

land-scam-case-against-sadananda-gowda-lokayukta-court
ಬೆಂಗಳೂರು, ಅ.4: ಮರೆ ಮಾಚಿ ಆಸ್ತಿ ಮಾಡಿರುವ ಸಂಬಂಧ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ- ಡಾಟಿ ದಂಪತಿಗೆ ಈಗಾಗಲೇ ಲೋಕಾಯುಕ್ತ ಕಾಟವೊಂದು ಶುರುವಾಗಿದೆ. ಈ ನಡುವೆ ಮುಖ್ಯಮಂತ್ರಿಯಾಗಿದ್ದ ವೇಳೆ ಅಧಿಕಾರ ದುರುಪಯೋಗ ಮಾಡಿಕೊಂಡು, ಸರಕಾರಿ ಆಸ್ತಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಪರಭಾರೆ ಮಾಡಿದ್ದಾರೆ ಎಂದು ಆರೋಪಿಸಿ ಸದಾನಂದರ ವಿರುದ್ಧ ಲೋಕಾಯುಕ್ತದಲ್ಲಿ ಮತ್ತೊಂದು ದೂರು ದಾಖಲಿಸಲಾಗಿದೆ.

ವಿಷಯ ಏನಪಾ ಅಂದರೆ ದೇಶದ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಒಟ್ಟು 3 ಕೋರ್ಟುಗಳು ನೀಡಿದ್ದ ಆದೇಶಕ್ಕೆ ವಿರುದ್ಧವಾಗಿ, ತಮ್ಮ ಅಧ್ಯಕ್ಷತೆ ಸಚಿವ ಸಂಪುಟ ಸಭೆಯಲ್ಲಿ ಬಡವರ ನಿವೇಶನಕ್ಕೆ ಮೀಸಲಿಟ್ಟ ಜಾಗವನ್ನು ಕಾನೂನು ಬಾಹಿರವಾಗಿ ಖಾಸಗಿ ಸಂಸ್ಥೆಗೆ ಹಂಚಿಕೆ ಮಾಡುವ ನಿರ್ಣಯ ಕೈಗೊಂಡಿದ್ದಾರೆ ಎಂಬುದು ಅಂದಿನ ಸಿಎಂ ಸದಾನಂದರ ವಿರುದ್ಧದ ಆರೋಪ.

ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರೇ ಮೊದಲ ಆರೋಪಿ. ಮುಖ್ಯ ಕಾರ್ಯದರ್ಶಿ ಎಸ್‌.ವಿ. ರಂಗನಾಥ್‌, ಬೆಂಗಳೂರು ಜಿಲ್ಲಾಧಿಕಾರಿ ಎಂ.ಕೆ. ಅಯ್ಯಪ್ಪ ಸೇರಿದಂತೆ ಇನ್ನೂ ಹಲವು ಅಧಿಕಾರಿಗಳು ಸಹ ಆರೋಪಿಗಳು. ಬುದ್ಧ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ಚಂದ್ರಶೇಖರ್‌ ಇತರೆ ಆರೋಪಿ.

ಬೆಂಗಳೂರು ಹೊರ ವಲಯದ ವಿಶ್ವೇಶ್ವರಯ್ಯ ಲೇಔಟ್‌ ಸಮೀಪದ ಗಿಡದ ಕೊನೇಹಳ್ಳಿಯಲ್ಲಿ ಒಟ್ಟು 6 ಎಕರೆ ಜಮೀನನ್ನು ಬುದ್ಧ ಶಿಕ್ಷಣ ಸಂಸ್ಥೆಗೆ ಸರ್ಕಾರ ಕಾನೂನು ಬಾಹಿರವಾಗಿ ಮಂಜೂರು ಮಾಡಿರುವುದಾಗಿ ಆರೋಪಿಸಿ ಸ್ಥಳೀಯರಾದ ಸಿ.ಆರ್‌. ನಾಗರಾಜ್‌ ಎಂಬವರು ನ್ಯಾಯಾಲಯಕ್ಕೆ ಬುಧವಾರ ದೂರು ನೀಡಿದ್ದಾರೆ.

ದೂರು ಪರಿಶೀಲನೆ ನಡೆಸಿದ ನ್ಯಾಯಾಧೀಶ ಎನ್ ಕೆ ಸುಧೀಂದ್ರ ರಾವ್‌ ಅವರು ಇದೇ 17ರಂದು ಆದೇಶ ನೀಡುವುದಾಗಿ ಹೇಳಿದರು. ದೂರುದಾರರ ಪರವಾಗಿ ವಕೀಲ ಪ್ರೇಮ್ ಕುಮಾರ್ ವಾದ ಮಂಡನೆ ಮಾಡಿದರು.

ಏನಿದು ಪ್ರಕರಣ: ಕೇಂದ್ರ ಸರ್ಕಾರದ ಬಡವರಿಗೆ ನಿವೇಶನ ಹಂಚುವ ಯೋಜನೆಯಡಿ 1972ರಲ್ಲಿ ಗಿಡದ ಕೊನೇಹಳ್ಳಿಯಲ್ಲಿ ಸರ್ಕಾರ 46 ಎಕರೆ ಜಮೀನು ಮಂಜೂರು ಮಾಡಿತ್ತು. ಈ ಜಮೀನನ್ನು ನಿವೇಶನಗಳನ್ನಾಗಿ ಮಾಡಿ ಫ‌ಲಾನುಭವಿಗಳಿಗೆ ಹಂಚಿಕೆ ಮಾಡಲಾಗಿತ್ತು.

ಆದರೆ, 2003ರಲ್ಲಿ ಬಿಡಿಎ ವಿಶ್ವೇಶ್ವರಯ್ಯ ಬಡಾವಣೆ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಿತು. ಆ ಬಳಿಕ ಈ ಜಮೀನಿನಲ್ಲಿ 4 ಎಕರೆ ಜಾಗವನ್ನು ಬಸವೇಶ್ವರ ಲಿಟ್ಲ್ ಫ್ಲವರ್‌ ಎಜ್ಯುಕೇಷನಲ್‌ ಸಂಸ್ಥೆ ಹಾಗೂ 6 ಎಕರೆಯನ್ನು ಬುದ್ಧ ಶಿಕ್ಷಣ ಸಂಸ್ಥೆಗೆ ಮಂಜೂರಾಯಿತು.

ಇದನ್ನು ಪ್ರಶ್ನಿಸಿ ಫ‌ಲಾನುಭವಿಗಳು ಹೈಕೋರ್ಟ್‌ ಮೊರೆ ಹೋದರು. ನ್ಯಾಯಾಲಯವು ಖಾಸಗಿ ಶಿಕ್ಷಣ ಸಂಸ್ಥೆಗೆ ಜಮೀನು ಮಂಜೂರು ಮಾಡಿದ್ದು ಸರಿಯಾದ ಕ್ರಮ ಅಲ್ಲ ಎಂದು ತೀರ್ಪು ನೀಡಿತು. ಅದನ್ನು ಪ್ರಶ್ನಿಸಿ ಮತ್ತೆ ಸುಪ್ರೀಂಕೋರ್ಟ್‌ ಮೊರೆ ಹೋದಾಗಲೂ ಅದೇ ಆದೇಶ ಹೊರಬಿತ್ತು.

ಇದರ ಫಲವಾಗಿ ಎರಡೂ ಶಿಕ್ಷಣ ಸಂಸ್ಥೆಗಳಿಗೆ ಅನ್ಯಾಯ ಮಾಡಲು ಬಯಸದ ರಾಜ್ಯ ಸರ್ಕಾರ ಬೇರೆಡೆ ಆ ಸಂಸ್ಥೆಗಳಿಗೆ ಜಮೀನು ಮಂಜೂರು ಮಾಡಿತು. ಆದರೆ, 2009ರಲ್ಲಿ ಬುದ್ಧ ಶಿಕ್ಷಣ ಸಂಸ್ಥೆಯು ತಮಗೆ ಗಿಡದ ಕೊನೇಹಳ್ಳಿಯಲ್ಲೇ ಜಾಗ ನೀಡುವಂತೆ ಸರ್ಕಾರಕ್ಕೆ ಮತ್ತೆ ಅರ್ಜಿ ಸಲ್ಲಿಸಿತು. ಆ ಅರ್ಜಿ ಪರಿಗಣಿಸಿ ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಗಳು ನ್ಯಾಯಾಲಯಗಳು ನೀಡಿರುವ ಆದೇಶಗಳನ್ನು ತಿಳಿಸದೆ ಸರ್ಕಾರಕ್ಕೆ ಈ ಸಂಬಂಧ ವರದಿ ಸಲ್ಲಿಸಿದರು.

ಆ ವರದಿ ಆಧರಿಸಿ 2012ರಲ್ಲಿ ಸಚಿವ ಸಂಪುಟವು ಈ ಹಿಂದೆ ಗಿಡದ ಕೊನೇಹಳ್ಳಿಯಲ್ಲಿ ನೀಡಿದ್ದ 6 ಎಕರೆ ಜಾಗವನ್ನೇ ಮಂಜೂರು ಮಾಡುವುದಕ್ಕೆ ಒಪ್ಪಿಗೆ ನೀಡಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+