ಮಲತಾಯಿ ಕಾಟ: 2ಲಕ್ಷ ಚಿನ್ನ ಕದ್ದು 700ರೂ.ಗೆ ಮಾರಿದ
ಅಷ್ಟಕ್ಕೂ ಅದನ್ನವನು ಮಾರಿದ್ದು ಪಕ್ಕದ್ಮನೆಯ ಹೆಂಗಸರಿಬ್ಬರಿಗೆ. ಒಬ್ಬ ಮಹಿಳೆಗೆ 500 ರೂ. ಗೆ ಒಂದಷ್ಟು ಒಡವೆ ಕೊಟ್ಟ, ಉಳಿದ ಒಡವೆಯನ್ನು ಮತ್ತೊಬ್ಬ ಆಂಟಿಗೆ ಕೇವಲ 200 ರೂ.ಗೆ ಮಾರಿಬಿಟ್ಟ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಲಕನ್ನು ಬಾಲಾಪರಾಧ ಮಂದಿರಕ್ಕೆ ಮತ್ತು ಕಳ್ಳತನಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಪಕ್ಕದ್ಮನೆಯ ಆ ಇಬ್ಬರು ಆಂಟಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಮಲಾಡ್ (ಪೂರ್ವ) ಕುರಾರ್ ನಲ್ಲಿರುವ ಆನಂದ ನಗರದಲ್ಲಿ ಮಾಧವ ಪಾಟೀಲ್ ಎಂಬುವವರು ತಮ್ಮ ಎರಡನೆಯ ಪತ್ನಿ ಸೀತಾ ಜತೆ ವಾಸವಾಗಿದ್ದಾರೆ. ಮೊದಲ ಪತ್ನಿ 5 ವರ್ಷದ ಹಿಂದೆ ತೀರಿಕೊಂಡಿದ್ದಾರೆ. ಇಂತಿಪ್ಪ ಮಾಧವ ಮೊದಲ ಪತ್ನಿಯ ಮಗನನ್ನೂ ಜತೆಗಿಟ್ಟುಕೊಂಡಿದ್ದಾರೆ.
ನನ್ನ ಮಲತಾಯಿ ಸೀತಾಮಾತೆ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಸರಿಯಾಗಿ ಊಟ ಹಾಕುತ್ತಿರಲಿಲ್ಲ. ನನ್ನ ಬಗ್ಗೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಳು ಎಂದು ಬಾಲಕ ಪೊಲೀಸರ ಮುಂದೆ ತನ್ನ ದುಃಖ ತೋಡಿಕೊಂಡಿದ್ದಾನೆ.
ಮೊನ್ನೆ ಗಣೇಶನ ಹಬ್ಬದ ವೇಳೆ ಏನಾಯಿತೆಂದರೆ ಸದರಿ ಸೀತಾ ಮಾತೆ ಬೆಲೆಬಾಳುವ ತನ್ನ ಒಡವೆಗಳನ್ನು ತಿಜೋರಿಯಿಂದ ತೆಗೆದು ಧರಿಸಿದ್ದಾಳೆ. ಹಬ್ಬ ಮುಗಿಯುತ್ತಿದ್ದಂತೆ ಅದನ್ನು ವಾಪಸ್ ತಿಜೋರಿಯಲ್ಲಿಟ್ಟುಬಿಟ್ಟಿದ್ದಾಳೆ. ಬಾಲಕ ಇದಿಷ್ಟನ್ನೂ ಗಮನಿಸಿದ್ದಾನೆ. ಯಾವದೋ ಮಾಯದಲ್ಲಿ ಒಂದಷ್ಟು ಚಿನ್ನಾಭರಣವನ್ನು ಎಗರಿಸಿದ್ದಾನೆ.
ಮುಂದೆ ಅದು ಮಲತಾಯಿ ಸೀತಾ ಗಮನಕ್ಕೆ ಬಂದು ಆಕೆ ರಂಪಾರಾಮಾಯಣ ಮಾಡಿದ್ದಾಳೆ. ಆ ವೇಳೆ ಮಲ ಮಗ ತೊದಲಿದ್ದು, ತಾನೇ ಅದನ್ನು ಕದ್ದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಗಂಡನ ವಿರೋಧದ ನಡುವೆಯೂ ಮಲಮಗನನ್ನು ಮಲತಾಯಿ ಸೀತಾ ಸೀದಾ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾಳೆ. ಅಪ್ಪ-ಮಲತಾಯಿ ಇಲ್ಲದಿದ್ದಾಗ ತಾನೇ ಕದ್ದಿದ್ದು, ಅವುಗಳನ್ನು ಪಕ್ಕದ್ಮನೆಯವರಿಗೆ ಮಾರಿಬಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ.