ಕಾವೇರಿ ಹೋರಾಟಕ್ಕೆ ಧುಮುಕಿದ ಯಡಿಯೂರಪ್ಪ
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಉಂಟಾಗಿರುವ ಗೊಂದಲಕ್ಕೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮನ ಮೋಹನ್ ಸಿಂಗ್ ಅವರೇ ನೇರ ಹೊಣೆ. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಂಡ್ಯ ಮತ್ತು ಮೈಸೂರು ಭಾಗದ ರೈತಾಪಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರು ಹಾಗೂ ಮೈಸೂರು ನಗರವಾಸಿಗಳು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಶುಕ್ರವಾರ(ಅ.5) ರಂದು ಬೆಂಗಳೂರಿನ ಎಂಜಿ ರಸ್ತೆಯಲ್ಲಿನ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಲ್ಲೇಶ್ವರಂನ ಜನಸಂಪರ್ಕ ಕಚೇರಿಯಲ್ಲಿ ಗುರುವಾರ(ಅ.4) ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ನಾಳೆ ಬೆಳಗ್ಗೆ 10.30 ರಿಂದ ಧರಣಿ ಕೂರಲು ನಿರ್ಧರಿಸಲಾಗಿದೆ. ಅ.6ರ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ನೀಡಬೇಕಿದೆ ಎಂದರು.
ಕಾವೇರಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ 5 ರಿಂದ ಅರಂಭಿಸಬೇಕಿದ್ದ ಬರ ಅಧ್ಯಯನ ಪ್ರವಾಸವನ್ನು ಯಡಿಯೂರಪ್ಪ ಅವರು ರದ್ದುಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಧರಣಿ ಕೂರಲಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಧನಂಜಯ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಮ್ತಾಜ್ ಅಲಿಖಾನ್, ಎಂಎಲ್ಸಿ ಎಂ.ಡಿ. ಲಕ್ಷ್ಮಿ ನಾರಾಯಣ ಉಪಸ್ಥಿತರಿದ್ದರು.
ಕಾವೇರಿ ವಿವಾದ ಸೂಕ್ಷ್ಮ ವಿಚಾರವಾಗಿದ್ದು,ಈಗ ಕಾನೂನಿನ ಮೂಲಕ ಮಾತ್ರ ಪರಿಹಾರ ಸಾಧ್ಯ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಗೆ ಹಲವಾರು ಸಂಘಟನೆ ಮುಖಂಡರು ಒತ್ತಾಯಿಸುತ್ತಿದ್ದಾರೆ. ಅದರೆ, ರಾಜೀನಾಮೆ ಇದಕ್ಕೆ ಪರಿಹಾರವಲ್ಲ. ರಾಜೀನಾಮೆಯಿಂದ ಪರಿಹಾರ ಸಿಗುವುದಾದರೆ ಎಲ್ಲರೂ ರಾಜೀನಾಮೆ ನೀಡಲು ಸಿದ್ಧ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಕಾವೇರಿ ಪರ ಯಡಿಯೂರಪ್ಪ ಅವರ ಹೋರಾಟದ ಸ್ವರೂಪದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮಾಹಿತಿ ನಿರೀಕ್ಷಿಸಲಾಗಿದೆ.