ಭೀಕರ ಅಪಘಾತ 5 ಸಾವು, ಚಾಲಕ ಪರಾರಿ

ಸ್ಕಾರ್ಪಿಯೋ ಹಾಗೂ ಅಲ್ಟೋ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಪರಿಣಾಮ ಐವರು ದುರ್ಮರಣಕ್ಕೀಡಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4ರ ನಂದಿಹಳ್ಳಿ ಸಮೀಪ ನಡೆದಿದೆ.
ಸ್ಕಾರ್ಪಿಯೋ ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ.
ಮಾರುತಿ ಆಲ್ಟೋ ಕಾರಿನಲ್ಲಿದ್ದವರೆಲ್ಲ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಬಸವರಾಜಪ್ಪ, ಮಹೇಶ್ವರಪ್ಪ, ನಾಗರಾಜ್, ಧರ್ಮರಾಜ್ ಹಾಗೂ ಲೀಲಾವತಿ ಎಂದು ಗುರುತಿಸಲಾಗಿದೆ.
ಈ ಸಂಬಂಧ ಕ್ಯಾತ್ಸಂದ್ರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಸ್ಕಾರ್ಪಿಯೋ ಕಾರು ನಾಗರಾಜ್ ಎಂಬುವವರಿಗೆ ಸೇರಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಸ್ಕಾರ್ಪಿಯೋ ಚಾಲಕನನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಪಡೆದ ನಂತರ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.
ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಆಲ್ಟೋ ಕಾರು ಸಾಮಾನ್ಯವೇಗದಲ್ಲೇ ಸಂಚರಿಸುತ್ತಿತ್ತು. ಎದುರುಗಡೆಯಿಂದ ಸ್ಕಾರ್ಪಿಯೋ ವಾಹನ ಅತಿ ವೇಗದಲ್ಲಿ ಬರುತ್ತಿತ್ತು. ನಂದಿಹಳ್ಳಿ ಸಮೀಪ ಬಂದಾಗ ಸ್ಕಾರ್ಪಿಯೋ ವಾಹನ ಚಾಲಕ ಡಿವೈಡರ್ ಮೇಲಿಂದ ಕಾರನ್ನು ಸಿನಿಮಾ ದೃಶ್ಯ ಮಾದರಿಯಲ್ಲಿ ಹಾರಿಸಿ ಎದುರಿಗೆ ಬರುತ್ತಿದ್ದ ಆಲ್ಟೋ ಕಾರಿಗೆ ಗುದ್ದಿದ್ದಾನೆ.
ಹಠಾತ್ ಹೊಡೆತಕ್ಕೆ ಸಿಕ್ಕಿದ ಆಲ್ಟೋ ಕಾರು ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕಾರ್ಪಿಯೋ ವಾಹನದ ಪಾರ್ಶ್ವಭಾಗ ಜಜ್ಜಿಹೋಗಿದೆ. ನಿದ್ದೆ ಗಣ್ಣಿನಲ್ಲಿ ವಾಹನ ಚಲಾಯಿಸಿದ್ದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ದುರಂತ ಸಾವು: ಮೃತರ ಪೈಕಿ ಲೀಲಾವತಿ ಅವರ ಮದುವೆ ಮಾತುಕತೆ ನಡೆಸಲು ದಾವಣಗೆರೆಗೆ ಚಿತ್ರದುರ್ಗ ಮೂಲದ ಕುಟುಂಬ ತೆರಳಿತ್ತು. ಬೆಂಗಳೂರಿನಲ್ಲಿ ವರನನ್ನು ನೋಡಿಕೊಂಡು ದಾವಣಗೆರೆಗೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ ಗುಬ್ಬಿ ಕಡೆಯಿಂದ ಹೊರಟ್ಟಿದ್ದ ಸ್ಕಾರ್ಪಿಯೋ ವಾಹನ ತನ್ನ ಮುಂದಿದ್ದ ಲಾರಿಯನ್ನು ಓವರ್ ಟೇಕ್ ಮಾಡುವ ಯತ್ನದಲ್ಲಿ ಡಿವೈಡರ್ ನಿಂದ ಹಾರಿದೆ. ಎದುರುಗಡೆ ಬರುತ್ತಿದ್ದ ಆಲ್ಟೋ ಕಾರಿಗೆ ರಭಸವನ್ನು ಗುದ್ದಿದ ನಂತರ ಪಕ್ಕಕ್ಕೆ ಹೊರಳಿದೆ.
ಸ್ಕಾರ್ಪಿಯೋ ಹೊಡೆದ ರಭಸಕ್ಕೆ ಆಲ್ಟೋದಲ್ಲಿದ್ದವರು ನುಜ್ಜುಗುಜ್ಜಾದರೆ, ಸ್ಕಾರ್ಪಿಯೋದಲ್ಲಿದ್ದ 3 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಅಧಿಕವಾಗಿ ಸಂಚಾರ ಸ್ಥಗಿತವಾಗಿತ್ತು. ಕ್ಯಾತ್ಸಂದ್ರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications