ರೆಡ್ಡಿ ಆಪ್ತರ ಮನೆ, ಕಚೇರಿ ಮೇಲೆ ಸಿಬಿಐ ಮಿಂಚಿನ ದಾಳಿ
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿಬಿಐ ದಾಳಿ ನಡೆಸಿದ್ದು, ರೆಡ್ಡಿ ಆಪ್ತರ ಐದು ಕಂಪೆನಿಗಳಿಗೆ ನೋಟೀಸ್ ಜಾರಿ ಮಾಡಿದೆ. ಬೇಲೆಕೆರಿ ಬಂದರಿನ ಮೂಲಕ ಸುಮಾರು 50 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಕಾನೂನು ಬಾಹಿರವಾಗಿ ರಫ್ತು ಮಾಡಿದ ಆರೋಪದ ಮೇಲೆ ಸರ್ವೋಚ್ಚ ನ್ಯಾಯಾಲಯ ಸಿಬಿಐಗೆ ತನಿಖೆ ನಡೆಸುವಂತೆ ಆದೇಶಿಸಿತ್ತು.
ಹತ್ತು ಜನರ ಸಿಬಿಐ ತಂಡ ಬೆಂಗಳೂರು, ಕಾರವಾರ, ಸಂಡೂರು, ಹೊಸಪೇಟೆ ಮತ್ತು ಗೋವಾದ 17 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ.
ಅಲ್ಲದೆ ಖಾರಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಮತ್ತು ಸೋಮಸೇಖರ್ ಅವರ ಮನೆ ಮತ್ತು ಕಚೇರಿಗೆ ದಾಳಿ ನಡೆಸಿ ಮಹತ್ವದ ದಾಖಲೆಯನ್ನು ವಶಪಡಿಸಿಕೊಂಡಿದೆ.
ಐಎಲ್ಸಿ ಇಂಡಸ್ಟ್ರೀಸ್, ಡ್ರೀಮ್ ಲಾಜಿಸ್ಟಿಕ್ಸ್, ಎಸ್ಬಿ ಲಾಜಿಸ್ಟಿಕ್ಸ್, ಮಲ್ಲಿಕಾರ್ಜುನ ಶಿಪ್ಪಿಂಗ್, ಗ್ರೀನ್ ಟೆಕ್ಸ್ ಇಂಡಸ್ಟ್ರೀಸ್ ಕಚೇರಿ ಮೇಲೆ ಕೊಡ ಸಿಬಿಐ ದಾಳಿ ನಡೆಸಿದೆ.
ಇಷ್ಟು ದೊಡ್ಡ ಮೊತ್ತದ ಅದಿರು ಕಾನೂನು ಬಾಹಿರವಾಗಿ ರಫ್ತಾಗುತ್ತಿದ್ದರೂ ಕರ್ನಾಟಕ ಸರಕಾರದ ಗಮನಕ್ಕೆ ಈ ಹಗರಣ ಯಾಕೆ ಬಂದಿಲ್ಲ ಎಂದು ಸುಪ್ರೀಂ ಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.