ಆನೆ ಅಂಬಾರಿಯ ಮೈಸೂರು ದಸರಾ ವೈಭವ ಇನ್ನಿಲ್ಲ?
ಮೈಸೂರು, ಸೆ. 13: ವಿಶ್ವವಿಖ್ಯಾತ ದಸರಾದಲ್ಲಿ ಜಂಬೂ ಸವಾರಿ ವೇಳೆ ಗಜಗಾಂಭೀರ್ಯದ ಅಂಬಾರಿ ಮೆರವಣಿಗೆಯನ್ನು ನೋಡಲೆರಡು ಕಣ್ಣುಗಳು ಸಾಲದಪ್ಪಾ ಎನ್ನುವಂತಿರುತ್ತದೆ. ಆದರೆ ಈ ಬಾರಿ ದಸರಾದಲ್ಲಿ ಮೈಸೂರು ಅರಮನೆಯ ಆವರಣದಲ್ಲಿ ಶತಶತಮಾನಗಳ ಸಂಪ್ರದಾಯದಂತೆ ಆನೆಯೊಂದು ಅಂಬಾರಿಯನ್ನು ಹೊರುವ ಸಾಧ್ಯತೆಗಳು ಕ್ಷೀಣವಾಗಿವೆ.
ಅಂಬಾರಿ ಹೊರುವ ಗೌರವ ಪಡೆದಿರುವ 54 ವರ್ಷದ ಬಲರಾಮನ ದೈಹಿಕ ಸಾಮರ್ಥ್ಯ ಕ್ಷೀಣಿಸಿರುವುದು ಇದಕ್ಕೆ ಕಾರಣವಲ್ಲ. ಬದಲಿಗೆ, ಆನೆಗಳನ್ನು ಹೀಗೆ ಅಮಾನವೀಯವಾಗಿನಡೆಸಿಕೊಳ್ಳುವುದಕ್ಕೆ ರಾಜ್ಯ ಹೈಕೋರ್ಟ್ ಕೊಕ್ ಕೊಡುವ ಸಾಧ್ಯತೆಗಳು ಹೆಚ್ಚಾಗಿವೆ.
ಇಂತಹ ಬೆಳವಣಿಗೆಗೆ ಕಾರಣವಾಗಿರುವುದು ರಾಜ್ಯ ಹೈಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿ ನೀಡಿರುವ ವರದಿ. ಮಾನವ ಮತ್ತು ಆನೆಗಳ ನಡುವಣ ತಿಕ್ಕಾಟದ ಸಂಬಂಧ ಈ ಸಮಿತಿಯು ಸಿದ್ಧಪಡಿಸಿರುವ ವರದಿಯ ಪ್ರಕಾರ ಮೈಸೂರು ದಸರಾದಲ್ಲಿ ಆನೆಯೊಂದು 750 ಕೆಜಿ ತೂಕದ ಅಂಬಾರಿಯನ್ನು ಹೊರುವಂತಿಲ್ಲ. ಅಕ್ಟೋಬರ್ 1ರಂದು ಸಮಿತಿಯು ಕೋರ್ಟಿಗೆ ಈ ವರದಿಯನ್ನು ಅಧಿಕೃತವಾಗಿ ಸಲ್ಲಿಸಲಿದೆ.
ಇಂತಹ ಸಲಹೆಯಿಂದ ಅನಾದಿ ಕಾಲದ ಸಂಪ್ರದಾಯಕ್ಕೆ ಚ್ಯುತಿ ಬರುವುದನ್ನು ಮನಗಂಡಿರುವ ತಜ್ಞರು, ಇದಕ್ಕೆ ಪರಿಹಾರೋಪಾಯವನ್ನೂ ಸೂಚಿಸಿದ್ದಾರೆ. ಏನಪ್ಪಾ ಅಂದರೆ ಆನೆ (ಬಲರಾಮ) ಅಂಬಾರಿಯನ್ನು ತನ್ನ ಬೆನ್ನ ಮೇಲೆ ಹೊರುವ ಬದಲು ಅದನ್ನು ರಥದ ಮಾದರಿಯಲ್ಲಿ ಎಳೆದುಕೊಂಡು ಹೋಗಬಹುದು ಎಂಬ ಉಚಿತ ಸಲಹೆಯೊಂದನ್ನು ನೀಡಿದೆ. 2010ರ ಜನವರಿಯಲ್ಲಿ ಡಾ. ರಮಣ ಸುಕುಮಾರನ್ ನೇತೃತ್ವದ ಸಮಿತಿಯೊಂದನ್ನು ಹೈಕೋರ್ಟ್ ರಚಿಸಿತ್ತು.
ಸಂಪ್ರದಾಯವಾದಿಗಳು ಏನನ್ನುತ್ತಾರೋ?: ಪ್ರಾಣಿ ಹಿಂಸೆಯನ್ನು ವಿರೋಧಿಸಬೇಕಾದ ನಾವು ಅಂಬಾರಿ ಹೊರುವುದಕ್ಕೆ ಬ್ರೇಕ್ ಹಾಕುವ ಮೂಲಕ ಪ್ರಾಣಿ ದಯೆ ಸಂದೇಶವನ್ನು ಸಾರುವುದಕ್ಕೆ ಇದೊಂದು ಒಳ್ಳೆಯ ಅವಕಾಶ ಎಂಬುದು ಸಮಿತಿಯ ಅಭಿಪ್ರಾಯವಾಗಿದೆ. ಆದರೆ ಸಂಪ್ರದಾಯವಾದಿಗಳು ಏನನ್ನುತ್ತಾರೋ?
ಇಂತಹ ಸಲಹೆ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ 2007ರಲ್ಲಿಯೂ ಇಂತಹುದೇ ಸಮಿತಿಯೊಂದು ಹಬ್ಬದ ವೇಳೆ ಆನೆಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಸಲಹೆ ನೀಡಿತ್ತು. ಇದನ್ನು ಮನ್ನಿಸಿದ ದಸರಾ ಸಂಘಟನಾ ಸಮಿತಿಯು ಆನೆ ಅಂಬಾರಿ ಹೊರುವ ಕಾಲಾವಧಿಯನ್ನು ಕಡಿಮೆ ಮಾಡಿತ್ತು.
ಆ ಬಳಿಕ, 2010ರಲ್ಲಿ ಕೇಂದ್ರ ಅರಣ್ಯ ಸಚಿವ ಜೈರಾಮ್ ರಮೇಶ್ ರಚಿಸಿದ್ದ ಕಾರ್ಯ ಪಡೆಯೊಂದು ಮೆರವಣಿಗೆಗಳಲ್ಲಿ ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ಆನೆಗಳ ಬಳಕೆಗೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಸಲಹೆ ನೀಡಿತ್ತು.