Rx, ವೈದ್ಯ 'ಮಹಾ'ಶಯರೇ ನಿಮ್ಮ ಕೈಬರಹ ತಿದ್ದಿಕೊಳ್ಳಿ!

ಆದರೂ ಈ ಅಂದವಾದ ಬರಹಕ್ಕೆ ಒತ್ತುಕೊಡದೆ ಶಿಕ್ಷಣ ಮುಗಿಸಿ ವೃತ್ತಿ ಬದುಕಿಗೆ ಅಂಟಿಕೊಂಡ ಮೇಲೂ ಅನೇಕರು ಸುಧಾರಿಸಿಕೊಳ್ಳುವುದಿಲ್ಲ. ಮತ್ತು ಅಂತಹವರಿಗೆ ಖುದ್ದು ಮಂತ್ರಿ ಮಹೋದಯರೇ ಬುದ್ಧಿವಾದ ಹೇಳುವ ಪ್ರಸಂಗ ಎದುರಾಗುತ್ತದೆ.
ವೈದ್ಯ'ಬ್ರಹ್ಮ ಲಿಪಿ': ಇಲ್ಲಿ ಮಾತನಾಡುತ್ತಿರುವುದು ಅಶ್ವಿನಿ ಕುಮಾರರ ಬಗ್ಗೆ ಅಂದರೆ ವೈದ್ಯರ ಬಗ್ಗೆ. ಹೌದು ಈ ವೈದ್ಯರೇ ಹಾಗೆ. ಅವರೋ, ಅವರ ಬರಹವೋ ಆ ಪರಮಾತ್ಮನೇ ಬಲ್ಲ ಎಂದು ರೋಗಿಗಳು ಹಾಗಿರಲಿ ಅವರು ನೀಡುವ prescription (Rx) ನೋಡಿ ಔಷಧ ಅಂಗಡಿಗಳವರೇ ತಲೆ ಮೇಲೆ ಕೈಹೊತ್ತುಕೊಳ್ಳುತ್ತಾರೆ.
ಕೊನೆಗೆ ಯಾವುದೋ ಒಂದು ಔಷಧ ನೀಡಿ ರೋಗಿಯನ್ನು ಸಾಗಹಾಕುತ್ತಾರೆ. ಮತ್ತು ಅಪಾಯ ಎದುರಾಗುವುದೇ ಅಲ್ಲಿ. ಇದನ್ನು ಮನಗಂಡಿರುವ ಮಹಾರಾಷ್ಟ್ರದ ಆರೋಗ್ಯ ಸಚಿವ ಸುರೇಶ್ ಶೆಟ್ಟಿ ಅವರು 'ಸ್ವಾಮೀ ವೈದ್ಯ ಮಹಾಶಯರುಗಳೇ, ಮೊದಲು ನಿಮ್ಮ ಕೈಬರಹ ತಿದ್ದಿಕೊಳ್ಳಿ!' ಎಂದು ತಾಕೀತು ಮಾಡಿದ್ದಾರೆ.
ವೈದ್ಯರು ಅಸ್ಪಷ್ಟವಾದ ಕೈಬರಹದಲ್ಲಿ ಬರೆದುಕೊಡುವ ಔಷಧಿಗಳಿಂದಾಗುತ್ತಿರುವ ಲೋಪಗಳನ್ನು ತಡೆಯಲು ಕೈಬರಹ ಸುಧಾರಿಸಿಕೊಳ್ಳುವುದಕ್ಕೆ ಮೊದಲ ಆದ್ಯತೆಯನ್ನು ನೀಡುವಂತೆ ಸಚಿವ ಸುರೇಶ್ ಶೆಟ್ಟಿ ಸೂಚಿಸಿದ್ದಾರೆ.
ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಜನರಿಗೆ ವೈದ್ಯ'ಬ್ರಹ್ಮ ಲಿಪಿ'ಯನ್ನು ಓದುವುದು ಕಷ್ಟಸಾಧ್ಯವಾಗಿ, ಅವುಗಳನ್ನು ತಪ್ಪಾಗಿ ಓದಿ ಬೇರೆ ಬೇರೆ ಔಷಧಿಗಳನ್ನು ನೀಡುತ್ತಿರುವುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ ಎಂಬುದು ಸಚಿವ ಸುರೇಶ್ ಶೆಟ್ಟಿ ಅವರೊಬ್ಬರ ಕೊರಗು ಅಲ್ಲ; ಬದಲಿಗೆ ಬಹುತೇಕ ಎಲ್ಲರದ್ದೂ.
ಸಮಾಧಾನಕರ ಸಂಗತಿಯೆಂದರೆ, ಸಚಿವರ ಕಳಕಳಿಯನ್ನು ಅರ್ಥ ಮಾಡಿಕೊಂಡಿರುವ ರಾಜ್ಯದ ಹಿರಿಯ ವೈದ್ಯರು ದೊಡ್ಡ ಅಕ್ಷರಗಳಲ್ಲಿ ಔಷಧಿಗಳ ಚೀಟಿಯನ್ನು ನೀಡುವ ಸಂಪ್ರದಾಯಕ್ಕೆ ಈಗಾಗಲೇ ಚಾಲನೆ ನೀಡಿದ್ದಾರೆ. ನಿಜಕ್ಕೂ ಇದೊಂದು ಉತ್ತಮ ಬೆಳವಣಿಗೆ. ನಮ್ಮ ವೈದ್ಯಬ್ರಹ್ಮರೂ ಇದನ್ನು ಪಾಲಿಸುತ್ತಾರಾ?












Click it and Unblock the Notifications