ಶೆಟ್ಟರ್ ರಿಂದ ತುಂಗಭದ್ರಾ ಸೇತುವೆ ಲೋಕಾರ್ಪಣೆ
ರಾಯಚೂರು, ಸೆ.10: ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ಸಂಪರ್ಕ ಒದಗಿಸುವ ತುಂಗಭದ್ರಾ ಸೇತುವೆಯನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸೋಮವಾರ(ಸೆ.10) ಲೋಕಾರ್ಪಣೆ ಮಾಡಿದರು. 2009ರ ಅಕ್ಟೋಬರ್ ನ ಜಲಪ್ರಳಯಕ್ಕೆ ಈ ಸೇತುವೆ ಬಲಿಯಾಗಿತ್ತು.

ಜರ್ಮನ್ ತಂತ್ರಜ್ಞಾನ ಬಳಸಿ Karnataka Road Development Corporation Limited ನಿರ್ಮಿಸಿರುವ ಈ ಸೇತುವೆ 600 ಮೀ ಉದ್ದ, 12 ಮೀ ಅಗಲವಿದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಈ ಸೇತುವೆ ಆಧಾರವಾಗಿದೆ.
ನೆರೆ ಪರಿಹಾರ ಸಿಕ್ಕಿಲ್ಲ: ರಾಜ್ಯದಲ್ಲಿಯೇ ಪ್ರಥಮವಾದ ತುಂಗಭದ್ರಾ ಸ್ಟೀಲ್ ಸೇತುವೆ ನಿರ್ಮಾಣದಿಂದ ವ್ಯಾಪಾರ ವಹಿವಾಟು, ಧಾರ್ಮಿಕ ಕ್ಷೇತ್ರಕ್ಕೆ ಹೋಗಿ ಬರುವ ಭಕ್ತರಿಗೆ ಅನುಕೂಲವಾಗುತ್ತಿದೆ ನಿಜ,
ಆದರೆ, ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದ ಗ್ರಾಮಸ್ಥರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎನ್ನುವುದು ದುರಂತ ಸತ್ಯ. ಸಿಎಂ ಶೆಟ್ಟರ್ ಅವರನ್ನು ಪರಿಹಾರಕ್ಕಾಗಿ ಕೇಳಲು ಬಂದ ಗ್ರಾಮಸ್ಥರನ್ನು ಪೊಲೀಸರು ತಡೆದಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಈ ಮಾತಿನ ಚಕಮಕಿ ಸಂದರ್ಭದಲ್ಲಿ ಪೊಲೀಸ್ ವಾಹನ ಕೂಡಾ ಜಖಂಗೊಂಡ ಘಟನೆ ಸೋಮವಾರ(ಸೆ.10) ನಡೆದಿದೆ.
ಸಮಸ್ಯೆ ಆಲಿಸದೇ ಹಾಗೇ ತೆರಳಿದ ಮುಖ್ಯಮಂತ್ರಿ ಶೆಟ್ಟರ್ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು ರಾಜ್ಯ ಹೆದ್ದಾರಿ ತಡೆದು ಮುಷ್ಕರಕ್ಕಿಳಿದರು. ಈ ವೇಳೆ, ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ನೂರಕ್ಕೂ ಹೆಚ್ಚು ಜನ ಗ್ರಾಮಸ್ಥರು ಗಾಯಗೊಂಡ ಘಟನೆ ಜರುಗಿದೆ.
ಮಂತ್ರಾಲಯಕ್ಕೆ ಸಿಎಂ ಭೇಟಿ: ತುಂಗ ಭದ್ರಾ ಸೇತುವೆ, ರಾಯಚೂರಿನಲ್ಲಿ ಪತ್ರಿಕಾ ಭವನ ಉದ್ಘಾಟನೆ ಕಾರ್ಯಕ್ರಮ ಪೂರೈಸಿದ ನಂತರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕರ್ನಾಟಕ ಚೌಲ್ಟ್ರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಂತ್ರಾಲಯ ರಾಘವೇಂದ್ರ ಸ್ವಾಮೀಜಿಗಳ ಮಠಕ್ಕೆ ತೆರಳಿದ ಮುಖ್ಯಮಂತ್ರಿಗಳು ಸ್ವಾಮೀಜಿಗಳ ಆಶೀರ್ವಾದ ಪಡೆದರು. ಸಿಎಂ ಅವರ ಜೊತೆಗೆ ಬಸವರಾಜ ಬೊಮ್ಮಾಯಿ, ಸಿಎಂ ಉದಾಸಿ ಮತ್ತಿತ್ತರು ಉಪಸ್ಥಿತರಿದ್ದರು.












Click it and Unblock the Notifications