ಹೈಕೋರ್ಟಿನಲ್ಲಿ ಕನ್ನಡ ಭಾಷೆಗೆ ಸ್ಥಾನವೇ ಇಲ್ಲ
ಈ ಸಂಬಂಧ ತುಮಕೂರಿನ ಮಹಾಸ್ವಾಮಿ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಮತ್ತು ನ್ಯಾ. ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠ ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೆ ತರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ ಎಂದು ತೀರ್ಪಿತ್ತಿದ್ದಾರೆ.
'ದೇಶದ ಎಲ್ಲ ಹೈಕೋರ್ಟುಗಳಲ್ಲೂ ಆಂಗ್ಲ ಭಾಷೆಯೇ ವ್ಯಾವಹಾರಿಕ ಭಾಷೆಯಾಗಿದೆ. ಸ್ಥಳೀಯ ಭಾಷೆಗೂ ಅವಕಾಶವಿದೆಯಾದರೂ ಅನಿವಾರ್ಯವಾಗಿದ್ದರೆ ಮಾತ್ರ ಸ್ಥಳೀಯ ಭಾಷೆಯನ್ನು ಬಳಸಬಹುದಾಗಿದೆಯಷ್ಟೇ. ಕಟಕಟೆಯಲ್ಲಿ ಪ್ರಮಾಣ ತೆಗೆದುಕೊಳ್ಳುವುದು ಆಯಾ ವ್ಯಕ್ತಿಯ ಇಚ್ಛೆಗೆ ಅನುಸಾರವಾಗಿ ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ತೆಗೆದುಕೊಳ್ಳಬಹುದು.
ಆದರೆ ಕನ್ನಡವೇ ಕೋರ್ಟ್ ಭಾಷೆಯಾಗಬೇಕು ಎಂಬುದು ಸಂವಿಧಾನದ 348ನೆಯ ಪರಿಚ್ಚೇದಕ್ಕೆ ವಿರುದ್ಧವಾಗುತ್ತದೆ' ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಮತ್ತು ನ್ಯಾ. ಅರವಿಂದ್ ಕುಮಾರ್ ಅವರ ನ್ಯಾಯಪೀಠ ಸ್ಪಷ್ಟಪಡಿಸಿದೆ.
'ಹಿಂದಿ ಮಾತನಾಡುವ ಪ್ರಾಂತ್ಯದಲ್ಲಿಯೂ ಇಂತಹ ಬೇಡಿಕೆ ಬಂದಿತ್ತು. ಆದರೆ ಅದಕ್ಕೆ ಮನ್ನಣೆ ದೊರಕಲಿಲ್ಲ. ಕೋರ್ಟುಗಳಲ್ಲಿ ಒಂದೇ ಭಾಷೆಯನ್ನು ಕಡ್ಡಾಯಗೊಳಿಸಿರುವುದು ಸಂವಿಧಾನದ ದೃಷ್ಟಿಯಿಂದಲಷ್ಟೇ ಸಮಂಜಸವಾಗಿದೆ ಎಂದು ಹೇಳುವುದಲ್ಲ.
ಬದಲಿಗೆ ವಕೀಲರು ಸಹ ದೇಶದ ಯಾವುದೇ ಕೋರ್ಟಿನಲ್ಲಿ ಬೇಕಾದರೂ ಇಂಗ್ಲೀಷಿನಲ್ಲಿ ವಕಾಲತ್ತು ವಹಿಸಬಹುದು. ಇದು ಒಳ್ಳೆಯದೇ ಅಲ್ಲವೇ' ಎಂದು ನ್ಯಾಯಪೀಠ ಹೇಳಿದೆ.
ಗಮನಿಸಿ: 2003ರ ಮಾರ್ಚ್ 29ರಂದು ಹೈಕೋರ್ಟ್ ಹೊರಡಿಸಿರುವ ಆದೇಶದ ಪ್ರಕಾರ ತನ್ನೆಲ್ಲ ಅಧೀನ ನ್ಯಾಯಾಲಯಗಳಲ್ಲಿ ಅಂದರೆ ಕೌಟುಂಬಿಕ ನ್ಯಾಯಾಲಯಗಳು, ಕಾರ್ಮಿಕ ನ್ಯಾಯಾಲಯಗಳು ಮತ್ತು ಔದ್ಯಮಿಕ ನ್ಯಾಯಾಧಿಕರಣಗಳಲ್ಲಿ ವಾದ-ಪ್ರತಿವಾದ, ಸಾಕ್ಷ್ಯ ಹೇಳಿಕೆಗಳನ್ನು ಕನ್ನಡದಲ್ಲಿ ಪಡೆಯಬಹುದು ಎಂದು ಸ್ಪಷ್ಟಪಡಿಸಿದೆ.
ಇದಕ್ಕೆ ಪೂರಕವಾಗಿ, ಸೆಷನ್ಸ್ ಕೋರ್ಟುಗಳು ಮತ್ತು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟುಗಳೂ ಸಹ ಇಂಗ್ಲಿಷ್ ಜತೆಜತೆಗೆ ಕನ್ನಡವನ್ನು ಕೋರ್ಟ್ ಭಾಷೆಯಾಗಿ ಅಳವಡಿಸಿಕೊಳ್ಲಬಹುದು ಎಂದು ಸರಕಾರ ಸಹ ಅಧಿಸೂಚನೆ ಹೊರಡಿಸಿದೆ.
ಆದರೆ ಕನ್ನಡ ಮೀಡಿಯಂಗಳಲ್ಲಿ ಲಾ ಓದಿದ ಕಾನೂನು ವಿದ್ಯಾರ್ಥಿಗಳಿಗೆ ಹೈಕೋರ್ಟಿನಲ್ಲಿ ಆಂಗ್ಲ ಭಾಷೆಯಲ್ಲಿ ವಕಾಲತ್ತು ವಹಿಸುವುದು ಕಬ್ಬಿಣದ ಕಡಲೆಯತಾಗಿದೆ ಎಂಬುದು ಅರ್ಜಿದಾರ ಮಹಾಸ್ವಾಮಿಯವರ ಅಳಲಾಗಿದೆ.