ಭಯೋತ್ಪಾದನೆ: ಗಣೇಶನ ಹಬ್ಬಕ್ಕೆ ಮಹೂರ್ತ ನಿಗದಿ
ಬೆಂಗಳೂರು, ಸೆಪ್ಟೆಂಬರ್1: ಈ ತಿಂಗಳು ನೀವು ಗಣೇಶ ಚೌತಿಗೆ, ಮಂಗಳ ಗೌರಿ ವ್ರತಕ್ಕೆ ಕುಳಿತುಕೊಳ್ಳುವ ಮುನ್ನ ವಿಘ್ನ ನಿವಾರಕ ಗಣೇಶನಿಗೆ ನಮಸ್ಕಾರ ಹಾಕುವ ಮುನ್ನ ನಮ್ಮ ಮಧ್ಯೆಯೇ ಇರುವ ರಾಜಧಾನಿಯ ಸಿಸಿಬಿ ಪೊಲೀಸರಿಗೆ ವಿಶೇಷ ನಮಸ್ಕಾರ ಹಾಕಿ ಪೂಜೆಯನ್ನು ಸಾಂಗೋಪಾಂಗವಾಗಿ ನೆರವೇರಿಸಿಕೊಳ್ಳಿ.

ಏಕೆಂದರೆ ಈ ಸಿಸಿಬಿ ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ಎಚ್ಚರ ತಪ್ಪಿದ್ದರೆ ಈ ಭಾರಿಯ ಗೌರಿ-ಗಣೇಶ ಹಬ್ಬ ರಕ್ತಸಿಕ್ತವಾಗುತ್ತಿತ್ತು. ಮೊನ್ನೆ ಒಂದಲ್ಲ ಹನ್ನೊಂದು ಮಂದಿ ಉಗ್ರರನ್ನು ನಮ್ಮ ಪೊಲೀಸರು ಬಂಧಿಸಿದ ಬಳಿಕ ಆರೋಪಿ ಉಗ್ರರೇ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಇನ್ನಾರು ಉಗ್ರರ ಬಂಧನ: ಭಟ್ಕಳ, ಚಿಕ್ಕಮಗಳೂರು (ತಲಾ ಒಬ್ಬೊಬ್ಬರನ್ನು) ಹಾಗೂ ಹುಬ್ಬಳ್ಳಿಯಲ್ಲಿ (ಮೂವರನ್ನು) ಐವರು ಶಂಕಿತ ಉಗ್ರರನ್ನು ಪೊಲೀಸರು ನಿನ್ನೆ ಶುಕ್ರವಾರ ಬಂಧಿಸಿದ್ದಾರೆ. ಜತೆಗೆ ಹೈದರಾಬಾದಿನಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಬೆಂಗಳೂರು ಸಿಸಿಬಿ ಪೊಲೀಸರು ಉಬೇದುಲ್ಲಾ ರೆಹಮಾನ್ ಎಂಬ ಎಂಬಿಎ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಎಲ್ಲರನ್ನೂ ಬೆಂಗಳೂರುಗೆ ಕರೆತಂದು ತೀವ್ರ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ.
ಈ ಮಧ್ಯೆ, ಕನ್ನಡಿಗರನ್ನು ಬೆಚ್ಚಿಬೀಳಿಸಿರುವ ಭಯೋತ್ಪಾಕರ ಬಂಧನ ಸುದ್ದಿಯ ಬಗ್ಗೆ ಬಗೆ ಬಗೆಯ ಸುದ್ದಿಗಳು ಪುಂಖಾನುಪುಂಖವಾಗಿ ಹರಿದುಬರುತ್ತಿದೆ. ಆದರೆ ಯಾವೊಬ್ಬ ಜನನಾಯಕ/ಬುದ್ಧಿಜೀವಿಯೂ ಉಗ್ರರ ಬಂಧನದ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲ ದಿವ್ಯ ಮೌನಕ್ಕೆ ಶರಣಾಗಿದ್ದಾರೆ.
ಮಂಗಳೂರು ಹೋಂಸ್ಟೇ ಮತ್ತಿತರ 'ಅವಘಡಗಳು' ನಡೆದಾಗ ಬೊಬ್ಬಿಟ್ಟಿದ್ದ ಬಭ್ರುವಾಹನರು ಮೌನವಾಗಿರುವುದು ಏಕೆ ಎಂದು 'ಒನ್ ಇಂಡಿಯಾ ಕನ್ನಡ' ಓದುಗರು ಒಂದೇ ಸಮನೆ ಕೇಳತೊಡಗಿದ್ದಾರೆ. ಇನ್ನು ಮಂಗಳೂರು 'ಅವಘಡಗಳು' liveನಲ್ಲಿ ಬಿತ್ತಸಿದ್ದ ರಾಷ್ಟ್ರೀಯ ಚಾನೆಲ್ ಗಳೂ ಸಹ ಮೌನಕ್ಕೆ ಶರಣಾಗಿವೆ.
ಚಿನ್ನದ ಮಳಿಗೆ ದರೋಡೆ ಪ್ಲಾನ್ : ಈ ವಿದ್ವಂಸಕ ಕೃತ್ಯಕ್ಕೆ ಹಣ ಹೊಂದಿಸಲು ಚಿನ್ನದ ಮಳಿಗೆಯೊಂದನ್ನು ದರೋಡೆ ಮಾಡುವ ಪ್ಲಾನ್ ಸಹ ಇವರದಾಗಿತ್ತು. ತದನಂತರ ಗಣೇಶೋತ್ಸವ ಸಂದರ್ಭದಲ್ಲಿ ಗಲಭೆ ಅಥವಾ ಬಾಂಬ್ ಸ್ಫೋಟ ನಡೆಸಲು ಶಂಕಿತ ಉಗ್ರರು ಯೋಜಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಸಿಸಿಬಿ ಅಂಗಳದಿಂದ ಕೇಳಿ ಬಂದಿದೆ.
'ಹೆಂಗಿದ್ದ ಹುಬ್ಬಳ್ಳಿ ಹೆಂಗಾಗಿದೆ' ಎಂದು ಕಣ್ಣೀರಿಟ್ಟ ಪತ್ರಿಕೋದ್ಯಮಿ ವಿಜಯ ಸಂಕೇಶ್ವರ ಅವರ ಮಾತಿಗೆ ದನಿ ತುಂಬುವಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯು ದೇಶದ್ರೋಹಿಗಳಿಂದಾಗಿ terrorist capital ಆಗುವ ಸಾಧ್ಯತೆಯಿತ್ತು ಎಂದು 11+6 ಉಗ್ರರ ಬಂಧನದಿಂದ ತಿಳಿದುಬಂದಿದೆ.
ವಿಶೇಷವಾಗಿ ಹುಬ್ಬಳ್ಳಿಯಲ್ಲಿ ಹಿಂದೂ ಪರ ಸಂಘಟನೆಗಳು ಗಣೇಶೋತ್ಸವನ್ನು 11 ದಿನಗಳ ಕಾಲ ಅದ್ದೂರಿಯಾಗಿ ಆಚರಣೆ ಮಾಡುತ್ತವೆ. ಹೀಗಾಗಿ ಈ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ದುಷ್ಕೃತ್ಯಕ್ಕೆ ಉಗ್ರರು ತಯಾರಿಸಿ ನಡೆಸಿದ್ದರು. ಈ ಗಣೇಶೋತ್ಸವ ನಿಮಿತ್ತ ಹಿಂದೂ ಪರ ಸಂಘಟನೆಗಳ ದೊಡ್ಡ ಮಟ್ಟದಲ್ಲಿ ಮೆರವಣಿಗೆ ನಡೆಸುತ್ತವೆ. ಗಣೇಶ ವಿರ್ಸಜನೆ ವೇಳೆ ಗಲಭೆ ಹುಟ್ಟುಹಾಕಿ ರಕ್ತಪಾತ ನಡೆಸುವುದು ಈ ಮತಾಂಧರ ಗುರಿಯಾಗಿತ್ತು.
ತಮ್ಮ ಈ ಚಟುವಟಿಕೆಗಳಿಗೆ ಬೇಕಾಗುವ ಹಣಕ್ಕಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿಯ ಪ್ರಮುಖ ಚಿನ್ನ ಮಾರಾಟ ಮಳಿಗೆಗಳಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.












Click it and Unblock the Notifications