'ನಮ್ಮ ರೆಡ್ಡಿ ಸೋದರರಿಂದ ಕಾಂಗ್ರೆಸ್ಸಿಗೂ ಗಣಿಗಂಟು'

ಹಾಗೆ ನೋಡಿದರೆ ರೆಡ್ಡಿ ಸೋದರರಿಂದ ಬಾಯ್ತುಂಬ 'ಅಮ್ಮಾ' ಎಂದು ಕರೆಸಿಕೊಳ್ಳುತ್ತಿದ್ದ ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು ಗಣಿ ಹಣ ತಿಂದಿದ್ದಾರೆ ಎಂಬ ಮಾತು ತುಂಬಾ ಹಳೆಯದಾಯಿತು.
ಆದರೆ ತಾಜಾ ಆಗಿ ಈ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಏನನ್ನೋ ಕಂಡುಹಿಡಿದವರಂತೆ ಸಂಸತ್ ಭವನದ ಹೊರಗೆ ಸುದ್ದಿಗಾರರ ಜತೆ ಮಂಗಳವಾರ ಮಾತನಾಡುತ್ತಾ 'ರೆಡ್ಡಿ ಸಹೋದರರು ಬಿಜೆಪಿ ನಾಯಕರಿಗೆ 'ಮೋಟಾ ಮಾಲ್' (mota maal- ಭಾರಿ ಮೊತ್ತ) ನೀಡಿರುವುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ತನಿಖೆ ನಡೆಸಲು ಸಂಸದೀಯ ಸಮಿತಿಯೊಂದನ್ನು ರಚಿಸಬೇಕು' ಎಂದು ಆಗ್ರಹಿಸಿದ್ದರು.
ಈ ಆರೋಪ ಕೇಳಿಬಂದಾಕ್ಷಣ ಹೆಗಲುಮುಟ್ಟಿ ನೋಡಿಕೊಂಡ ಅಮ್ಮಾ ಸುಷ್ಮಾ 'ರೆಡ್ಡಿ ಸೋದರರಿಂದ ಬೃಹತ್ ಮೊತ್ತದ ಹಣ ಯಾರಿಗೆ ಹೋಗಿದೆ ಎಂಬುದು ಲಾಲು ಅವರಿಗೆ ಗೊತ್ತಾಗಬೇಕು. ಕಾಂಗ್ರೆಸ್ ಪಕ್ಷಕ್ಕೂ ರೆಡ್ಡಿಗಳಿಂದ ಹಣ ಹೋಗಿದೆ ಎಂಬುದನ್ನು ನಾನು ಲಾಲು ಅವರಿಗೆ ತಿಳಿಯಪಡಿಸಲು ಬಯಸುತ್ತೇನೆ' ಎಂದು ಟ್ವಿಟ್ಟರ್ನಲ್ಲಿ ಗೀಚಿದ್ದಾರೆ.
'ಕಾಂಗ್ರೆಸ್ ಸರಕಾರಗಳು ಹಾಗೂ ಕಾಂಗ್ರೆಸ್ ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಬಳ್ಳಾರಿ ರೆಡ್ಡಿಗಳು ತಮ್ಮ ಎಲ್ಲ ಗಣಿಗಳನ್ನೂ ಮಂಜೂರು ಮಾಡಿಸಿಕೊಂಡಿದ್ದಾರೆ' ಎಂಬುದು ಸುಷ್ಮಾರ ಟ್ವಿಟ್ಟರ್ ತಿರುಳು.
ಸುಷ್ಮಾಗೆ ಲೀಗಲ್ ನೋಟಿಸ್?:: ಅಕ್ರಮ ಗಣಿ ಹಂಚಿಕೆಗಾಗಿ ಕಾಂಗ್ರೆಸ್ ಭಾರೀ ಲಂಚ ಪಡೆದುಕೊಂಡಿದೆ ಎಂದು ಸುಷ್ಮಾ ಸೋಮವಾರ ಮಾಡಿದ್ದ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಅವರ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಕಾನೂನು ನೋಟಿಸ್ ನೀಡಲಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications