ಬರ ಪ್ರವಾಸ ನಡುವೆ ರುದ್ರಯಾಗದಲ್ಲಿ ಬಿಎಸ್ ವೈ
ಲೋಕಕಲ್ಯಾಣಕ್ಕಾಗಿ ಯಜ್ಞ, ಯಾಗ ಕಾರ್ಯ ಮಾಡುವುದು ಮಾಮೂಲಿಯಾದರೂ ಬರ ಪೀಡಿತ ಪ್ರದೇಶಗಳಿಗೆ ಅಧ್ಯಯನ ನಡೆಸುತ್ತಿರುವ ಯಡಿಯೂರಪ್ಪ ಅವರು ತಮ್ಮ ಬರ ಪ್ರವಾಸದ ನಡುವೆಯೇ ಯಾಗದಲ್ಲಿ ಪಾಲ್ಗೊಳ್ಳುತ್ತಿರುವುದು ಕುತೂಹಲ ಕೆರಳಿಸಿದೆ. ಆದರೆ, ಈ ಯಾಗದ ಕರ್ತೃವಾಗಿ ಯಡಿಯೂರಪ್ಪ ಅವರು ಪಾಲ್ಗೊಳ್ಳುತ್ತಿಲ್ಲ. ಎಲ್ಲಾ ಸಾರ್ವಜನಿಕ ಭಕ್ತಾಧಿಗಳಂತೆ ಪಾಲ್ಗೊಂಡಿದ್ದಾರೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರು ಹೇಳಿದ್ದಾರೆ.
ಅತಿರುದ್ರ ಮಹಾಯಾಗ, ಲೋಕಕಲ್ಯಾಣ, ಶತ್ರುಬಾಧೆ ನಿವಾರಣೆ ಮುಂತಾದ ಪರಿಹಾರಕ್ಕಾಗಿ ಯಾಗ ನಡೆಸಲಾಗುತ್ತಿದೆ. ಮಲ್ಲೇಶ್ವರಂನ ಮೈದಾನದಲ್ಲಿ ಕಳೆದ 10 ದಿನಗಳಿಂದಲೂ ಈ ಯಾಗಕ್ಕೆ ಕೈಗೊಳ್ಳಲಾಗಿದೆ. 11ನೇ ದಿನಗಳ ಕಾಲ ನಡೆಯುವ ಈ ಯಾಗದ ಪೂರ್ಣಾಹುತಿ ವೇಳೆಗೆ ಯಡಿಯೂರಪ್ಪ ಅವರು ಆಗಮಿಸಿ ವಿಘ್ನ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮೊದಲ ಹಂತದ ಬರ ಅಧ್ಯಯನ ಪ್ರವಾಸ ಮುಗಿಸಿಕೊಂಡು ಬಂದ ಯಡಿಯೂರಪ್ಪ ಅವರು ಬುಧವಾರ ಬೆಳಗ್ಗೆ ಜನಾರ್ದನ ಹೋಟೆಲ್ ನಲ್ಲಿ ಉಪಾಹಾರ ಸೇವಿಸಿ, ನಂತರ ಮಲ್ಲೇಶ್ವರಂ ಮೈದಾನಕ್ಕೆ ತೆರಳಿ ಯಾಗದಲ್ಲಿ ಭಾಗವಹಿಸಿದ್ದಾರೆ.
ಹೋಟೆಲ್ ನಿಂದ ಹೊರ ಬಂದ ನಂತರ ಸುದ್ದಿಗಾರರೊಡನೆ ಮಾತನಾಡಿದ ಯಡಿಯೂರಪ್ಪ ಅವರು, ಉತ್ತರ ಕರ್ನಾಟಕದ ನನ್ನ ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ಸಮಸ್ಯೆಯನ್ನು ಆಲಿಸಿದ್ದೇನೆ. ಜನರ ಕಷ್ಟ ಸುಖದಲ್ಲಿ ಭಾಗಿಯಾಗಲು ಈ ಪ್ರವಾಸ ಕೈಗೊಂಡಿದ್ದೇನೆ.
ಮೈಸೂರು ಭಾಗದಲ್ಲೂ ನಮ್ಮ ತಂಡ ಸಂಚಾರ ಹೊರಡಲಿದೆ. ಜನರ ನೋವು ನಲಿವಿಗೆ ಸ್ಪಂದಿಸುವ ಹಿತದೃಷ್ಟಿಯಿಂದ ಬಿಜೆಪಿ ಕೈಗೊಂಡಿರುವ ಬರ ಪ್ರವಾಸಕ್ಕೆ ವಿಪಕ್ಷಗಳು ಟೀಕೆಗಳ ಸುರಿಮಳೆಗೈಯುತ್ತಿರುವುದಕ್ಕೆ ಯಡಿಯೂರಪ್ಪ ಬೇಸರ ವ್ಯಕಪಡಿಸಿದರು.
ಟೀಕೆಗಳು ಪೂರಕವಾಗಿದ್ದರೆ ಸ್ವೀಕರಿಸಬಹುದು. ಆದರೆ, ವೃಥಾ ಆರೋಪ ಮಾಡಿದರೆ ಸಹಿಸಲು ಕಷ್ಟ. ವಿಪಕ್ಷಗಳ ಟೀಕೆಗಳು ಹೆಚ್ಚು ಕಾಲ ಜನರ ಮನಸ್ಸಿನಲ್ಲಿ ಉಳಿಯುವುದಿಲ್ಲ. ರಾಜ್ಯ ಕಲ್ಯಾಣ, ಸಮೃದ್ಧವಾಗಿ ಮಳೆ ಬೆಳೆ, ಜನರ ಯೋಗ ಕ್ಷೇಮಕ್ಕಾಗಿ ಪ್ರಾರ್ಥಿಸಲು ನಾನು ಈ ಯಾಗದಲ್ಲಿ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.