ಓದಿಗೆ ಹೆದರಿದ ವಿದ್ಯಾರ್ಥಿನಿ ನೇಣಿಗೆ ಶರಣು
ಬೆಂಗಳೂರಿನ ಮಾರೇನಹಳ್ಳಿಯಲ್ಲಿ ವಿದ್ಯಾರ್ಥಿಯೊಬ್ಬ ತಾಯಿಗೆ ಬೈಗುಳಕ್ಕೆ ನೊಂದು ಸಾವನ್ನಪ್ಪಿದ್ದ. ಈ ಘಟನೆಗಳು ಕಣ್ಮುಂದೆ ಇರುವಂತೆಯೇ ಇನ್ನೆರಡು ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರಿನ ಸರಸ್ವತಿಪುರಂ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. 17 ವರ್ಷ ವಯಸ್ಸಿನ ಮಂಜು ಎಂಬ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜನತಾ ನಗರ ನಿವಾಸಿ ಮಂಜು ಜೆಎಸ್ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಹೆಚ್ಚಿನ ಅಂಕಗಳಿಸಲು ಸಾಧ್ಯವಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಬಂಟ್ವಾಳದಲ್ಲಿ ವಿದ್ಯಾರ್ಥಿನಿ ಸಾವು: ಶಾಲಾ ವಿದ್ಯಾರ್ಥಿಯೋರ್ವಳು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಣೆಮಂಗಳೂರು ಸಮೀಪದ ಗೂಡಿನ ಬಳಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ನೀರು ಪಾಲಾಗಿರುವ ವಿದ್ಯಾರ್ಥಿನಿಯ ಹೆಸರು ಹಾಗೂ ಗುರುತು ಇನ್ನೂ ಪತ್ತೆಯಾಗಿಲ್ಲ. ವಿದ್ಯಾರ್ಥಿನಿ ಪಾಣೆಮಂಗಳೂರು ಹಳೆ ಸೇತುವೆ ಮೇಲಿನಿಂದ ನದಿಗೆ ಧುಮುಕಿರುವುದನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ಮಾಹಿತಿಯಂತೆ ಬಂಟ್ವಾಳ ನಗರ ಪೊಲೀಸರು ತುಂಬೆ ವೆಂಟೆಡ್ ಡ್ಯಾಂ ಆಸುಪಾಸಿನಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಶಾಲಾ ಸಮವಸ್ತ್ರ, ಗುರುತಿನ ಚೀಟಿ, ಶಾಲಾ ಬ್ಯಾಗ್ನೊಂದಿಗೆ ಗೂಡಿನ ಬಳಿಯ ಸೇತುವೆ ಹತ್ತಿರ ನಿಂತಿದ್ದ ಈಕೆ ಅಳುತ್ತಿದ್ದುದನ್ನು ಕಂಡ ಸ್ಥಳೀಯ ಶಾಲಾ ವಿದ್ಯಾರ್ಥಿಯೋರ್ವ ಆಕೆಯನ್ನು ವಿಚಾರಿಸಿದ್ದು, ತಾನು ಬಸ್ಸಿಗೆ ಕಾಯುತ್ತಿರುವುದಾಗಿ ಆತನೊಂದಿಗೆ ಹೇಳಿಕೊಂಡಿರುವುದಾಗಿ ತಿಳಿದು ಬಂದಿದೆ. ಲಭ್ಯ ಮಾಹಿತಿ ಪ್ರಕಾರ ಆಕೆ ಪುತ್ತೂರಿನ ಮೂಲದವಳು ಎನ್ನಲಾಗಿದೆ.
ಇದಾದ ಕೆಲವೇ ಹೊತ್ತಿನಲ್ಲಿ ಹಳೆ ಸೇತುವೆಯಲ್ಲಿ ಬಿ.ಸಿ.ರೋಡು ಕಡೆಗೆ ನಡೆದುಕೊಂಡು ಹೋದ ಈಕೆ ಸೇತುವೆ ಮಧ್ಯ ತಲುಪುತ್ತಿದ್ದಂತೆ ತನ್ನ ಬ್ಯಾಗನ್ನು ನದಿಗೆ ಎಸೆದು ಬಳಿಕ ಈಕೆ ನದಿಗೆ ಹಾರಿರುವುದನ್ನು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸವಾರರೊಬ್ಬರು ನೋಡಿದ್ದಾರೆ.
ವಿದ್ಯಾರ್ಥಿನಿಯು ನೀರಿಗೆ ಬಿದ್ದ ತಕ್ಷಣವೇ ಮಾಹಿತಿ ತಿಳಿದ ಸ್ಥಳೀಯ ಈಜುಗಾರರು ದೋಣಿ ಸಹಿತ ಆಕೆಯ ರಕ್ಷಣೆಗೆ ಮುಂದಾಗಿದ್ದು, ಭಾರೀ ದೂರದ ಅಂತರದ ವರೆಗೆ ಆಕೆಯನ್ನು ಹಿಂಬಾಲಿಸಿ ಕಣ್ಣಳತೆಯ ದೂರದಲ್ಲಿ ಆಕೆ ನೀರಿನಲ್ಲಿ ಮುಳುಗಿ ನಾಪತ್ತೆಯಾದಳು ಎಂದು ತಿಳಿದುಬಂದಿದೆ.