ವಿದ್ಯುತ್ ಕಡಿತ ಕನ್ನಡ ಜಿಲ್ಲೆಗಳಿಗೂ ವಿನಾಯತಿ ಇಲ್ಲ
ಶನಿವಾರ(ಆ.25) ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದ ಶೋಭಾ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪಶ್ಚಿಮ ಘಟ್ಟ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಜಲವಿದ್ಯುತ್ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಅಡ್ಡಗಾಲು ಹಾಕುತ್ತಾ ಬಂದಿದೆ.
ಈಗ ಮಂಜೂರಾದ ಸ್ಥಳಗಳಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಪರಿಸರವಾದಿಗಳ ಹಾಗೂ ಸ್ಥಳೀಯರ ವಿರೋಧ ಕಂಡು ಬಂದರೆ ಮತ್ತೊಮ್ಮೆ ಯೋಜನೆ ಕುಂಠಿತವಾಗುತ್ತದೆ ಎಂದರು.
ಸದ್ಯ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುಚ್ಛಕ್ತಿ ಏನೇನೂ ಸಾಲುತ್ತಿಲ್ಲ. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದ್ದು, 750 ಮೆ.ವಾ. ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ.
ಪ್ರತಿನಿತ್ಯ 8500 ಮೆ.ವ್ಯಾ.ವಿದ್ಯುತ್ ಬೇಡಿಕೆ ಇದ್ದು, ಪ್ರಸ್ತುತ 7500 ಮೆ.ವ್ಯಾ. ವಿದ್ಯುತ್ ಒದಗಿಸಲಾಗುತ್ತಿದೆ. 1 ಸಾವಿರ ಮೆ.ವ್ಯಾ.ವಿದ್ಯುತ್ ಕೊರತೆ ಇದೆ. ಪ್ರತಿನಿತ್ಯ 1200 ಮೆ.ವ್ಯಾ.ವಿದ್ಯುತ್ ಖರೀದಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ ಮತ್ತು ರಾತ್ರಿ 2 ಗಂಟೆ ತ್ರಿ ಫೇಸ್ ಹಾಗೂ ಸಂಜೆ 6 ರಿಂದ ಬೆಳಗ್ಗೆ 6 ರ ವರೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುತ್ತಿದೆ ಎಂದರು.
ರಾಜ್ಯ ದಲ್ಲೆ ತೀವ್ರ ಬರದ ಸ್ಥಿತಿ ನಿರ್ಮಾಣವಾಗಿದ್ದು, ಮಳೆಯ ಮಳೆಯಿಲ್ಲದೆ ಪ್ರಮುಖ ಜಲಾಶಯ ಗಳ ನೀರಿನ ಪ್ರಮಾಣ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದಲ್ಲಿ ಮಾತ್ರ ವಿದ್ಯುತ್ ಕೊರತೆ ನೀಗಬಹುದಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮಾನ ಪ್ರಮಾಣವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು ಯಾವುದೇ ಜಿಲ್ಲೆಗೆ ಕಡಿತದಿಂದ ವಿನಾಯತಿ ನೀಡಲಾಗದು ಎಂದು ಶೋಭಾ ಹೇಳಿದರು.
ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ ಹಾಗೂ ಸೂಪಾ ಡ್ಯಾಮ್ ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಶೇಖರಣೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.
ರಾಜ್ಯದಲ್ಲಿ 25ಮೆ.ವ್ಯಾ.ಗಿಂತ ಕಡಿಮೆ ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ಖಾಸಗಿಯವರಿಗೆ ನೀಡುವ ಕುರಿತು ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ತಿಳಿಸಿದ ಅವರು, ಪಶ್ಚಿಮ ಘಟ್ಟಗಳ ಜಿಲ್ಲೆಗಳಾದ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳಲ್ಲಿ ಅರಣ್ಯ ನಾಶ ತಡೆಯುವ ನಿಟ್ಟಿನಲ್ಲಿ ಇಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಕಿರು ಜಲ ವಿದ್ಯುತ್ ಯೋಜನೆಗಳನ್ನೂ ಕೈಬಿಡಲು ಸರಕಾರ ಚಿಂತನೆ ನಡೆಸಿದೆ ಎಂದು ಶೋಭಾ ಹೇಳಿದರು.