ಪರಮೇಶ್ವರ್ ಸ್ಥಾನ ಸುಭದ್ರ; ಲಿಂಗಾಯತರು ಗರಂ
ಹೈಕಾಂಡಿನ ಈ ನಿರ್ಧಾರದಿಂದ ರಾಜ್ಯ ಕಾಂಗ್ರೆಸ್ಸಿನ ಸಮೀಕರಣ ಒಂದಷ್ಟು ಏರುಪೇರಾಗಿದೆ. ಡಾ. ಪರಮೇಶ್ವರಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದ ಮತ್ತು ಪರೋಕ್ಷವಾಗಿ ಲಿಂಗಾಯತರಿಗೆ ಅಭಯ ಹಸ್ತ ನೀಡುತ್ತಿದ್ದ ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ.
ಇನ್ನು, ಲಿಂಗಾಯತರಿಗೂ ಸಾಕಷ್ಟು ಹಿನ್ನಡೆಯಾಗಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ, ಜೆಡಿಎಸ್ ಜತೆಗೆ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದೆ. ಹಾಗೆಯೇ, ಪಕ್ಷದ ಸಂಪ್ರದಾಯದಂತೆ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸದಿರಲು ಪಕ್ಷ ತೀರ್ಮಾನಿಸಿದೆ.
ವೀರಶೈವ ನಾಯಕರೊಬ್ಬರಿಗೆ (ಶಾಮನೂರು ಶಿವಶಂಕರಪ್ಪ) ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದ ಆ ಸಮಾಜದ ಮುಖಂಡರಿಗೆ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿರುವುದರಿಂದ ಕೆಂಡಾಮಂಡಲವಾಗಿರುವ ವೀರಶೈವ ನಾಯಕರು ವಾರಾಂತ್ಯ ದೆಹಲಿಗೆ ದಂಡೆತ್ತಿ ಹೋಗಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.
ಹೈಕಮಾಂಡ್ ಮೊನ್ನೆ ಮತ್ತೂ ಒಂದು ಪ್ರಮುಖ ನಿರ್ಧಾರವನ್ನು ಪ್ರಕಟಿಸಿದೆ. ಏನಪಾ ಅಂದರೆ ವಿದೇಶಾಂಗ ಸಚಿವ, ಒಕ್ಕಲಿಗ ಸಮುದಾಯದ ಎಸ್.ಎಂ. ಕೃಷ್ಣ ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ ಎಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ, ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳುವುದು ಬೇಡ ಎಂದೂ ತೀರ್ಮಾನಿಸಿದೆ. ಈ ಎರಡೂ ತೀರ್ಮಾನಗಳು ಸಿದ್ದರಾಮಯ್ಯನವರಿಗೆ ಸ್ವಲ್ಪಮಟ್ಟಿಗೆ ಸಮಾಧಾನ ತಂದಿರಬಹುದು.
ಜತೆಗೆ, ಮುಂದಿನ ವಿಧಾನಸಭಾ ಚುನಾವಣೆಗೆ ಈಗಾಗಲೇ ತಯಾರಿ ನಡೆಸಿರುವ ಕಾಂಗ್ರೆಸ್, ಪರಮೇಶ್ವರ್, ಸಿದ್ದರಾಮಯ್ಯ ಸೇರಿದಂತೆ ಸಾಮೂಹಿಕ ನಾಯಕತ್ವದಲ್ಲಿ ಒಗ್ಗೂಡಿ ಚುನಾವಣೆ ಎದುರಿಸಲು ನಿರ್ಧರಿಸಿದೆ.
ಸಂಸದ ಎಚ್ ವಿಶ್ವನಾಥ್ ಅವರು ಅನುಮಾನ ವ್ಯಕ್ತಪಡಿಸಿದಂತೆ ಎಸ್.ಎಂ. ಕೃಷ್ಣ ಮತ್ತು ಅವರ ಶಿಷ್ಯ ಡಿ.ಕೆ. ಶಿವಕುಮಾರ್ ಅವರುಗಳು ಜೆಡಿಎಸ್ ಬಗ್ಗೆ ಮೃದು ಧೋರಣೆ ತಳೆದಿದ್ದಾರೆ ಎನ್ನಲಾಗಿತ್ತು. ಇದರಿಂದಾಗಿ ಎಂಟು ಜಿಲ್ಲೆಗಳಲ್ಲಿ ಪ್ರಬಲವಾಗಿರುವ ಜಾತ್ಯತೀತ ದಳವೇ ಕಾಂಗ್ರೆಸ್ಗೆ ಪ್ರಮುಖ ಎದುರಾಳಿಯಾಗಲಿದೆ. ಅಂತಹುದರಲ್ಲಿ ಚುನಾವಣೆಯಲ್ಲಿ ಆ ಪಕ್ಷದ ಜತೆ ಹೊಂದಾಣಿಕೆ ಏರ್ಪಡುವುದೇ ಎಂಬ ಆತಂಕ ವಿಶ್ವನಾಥ್ ಅವರಲ್ಲಿ ಮನೆಮಾಡಿತ್ತು. ಆದರೆ ಈ ಅನುಮಾನವನ್ನೆಲ್ಲ ದೂರ ಮಾಡಿರುವ ಹೈಕಮಾಂಡ್, ಜೆಡಿಎಸ್ ನಿಂದ ದೂರವುಳಿಯಲು ನಿರ್ಧರಿಸಿದೆ.
ಆಡಳಿತಾರೂಡ ಬಿಜೆಪಿ ಮೂರು ತಂಡಗಳಲ್ಲಿ ಬರ ಪ್ರದೇಶಗಳತ್ತ ಗುಳೆ ಹೋಗಿರುವಾಗ ಕಾಂಗ್ರೆಸ್ ಸಹ ಅದರ ಹಿಂದೆಯೇ ಸೆಪ್ಟೆಂಬರ್ 2 ರಿಂದ ಬರ ಪ್ರವಾಸ ಮಾಡಲಿದೆ ಎಂದು ತಿಳಿದುಬಂದಿದೆ.