ಕಸ ವಿಲೇವಾರಿ ಚಕಮಕಿಗೆ ಒಬ್ಬ ವ್ಯಕ್ತಿ ಬಲಿ

ಮೃತಪಟ್ಟ ವ್ಯಕ್ತಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಮೂಲ ಸೌಕರ್ಯದಿಂದ ವಂಚಿತವಾಗಿರುವ ಆದರೆ, ಬೆಂಗಳೂರಿಗೆ ಬೃಹತ್ ಕಸದ ತೊಟ್ಟಿಯಾಗಿರುವ ಮಾವಳ್ಳಿಪುರದ ನಿವಾಸಿಗಳು ಕಸ ನಿರ್ವಹಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ನಗರದ ಹೊರವಲಯದಲ್ಲಿರುವ ಮಾವಳ್ಳಿಪುರ, ದೊಡ್ಡಬಳ್ಳಾಪುರ ರಸ್ತೆಯ ಟೆಟ್ರಾ ಫಾರ್ಮಾ ಬಯೋಟೆಕ್ನಾಲಜೆಸ್ ತ್ಯಾಜ್ಯ ಘಟಕದಲ್ಲಿ ಬಿಬಿಎಂಪಿ ಹಾಕಿರುವ ಕಸ ವಿಲೇವಾರಿಯಾಗದೆ ಉಳಿದಿದೆ. ಅಪಾಯಕಾರಿ ತ್ಯಾಜ್ಯಗಳು ವಿಲೇವಾರಿ ಮಾಡುವುದನ್ನು ಸ್ಥಳೀಯರು, ರೈತರು ಹಾಗೂ ವಿವಿಧ ಸಂಘಟನೆಗಳು ತೀವ್ರವಾಗಿ ವಿರೋಧಿಸಿ, ಎಚ್ಚರಿಕೆ ನೀಡಿದ್ದವು.
ಆದರೆ, ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರ ಆದೇಶದಂತೆ ರಾಜ್ಯ ಪರಿಸರ ಇಲಾಖೆಯ ಅನುಮತಿ ಸೂಚನೆ ಪಡೆದು ಕಸ ವಿಲೇವಾರಿ ಆರಂಭಿಸಲಾಗಿತ್ತು. ಮಾವಳ್ಳಿಪುರದ ಘಟಕದಲ್ಲಿ ಈಗಾಗಲೇ 40 ಲಕ್ಷ ಟನ್ ತ್ಯಾಜ್ಯ ಸಂಗ್ರಹವಾಗಿದೆ. ಇನ್ನಷ್ಟು ತ್ಯಾಜ್ಯ ಸೇರ್ಪಡೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಗುರುವಾರ ಇದೇ ವಿಷಯಕ್ಕೆ ನಡೆದ ಮಾತಿನ ಚಕಮಕಿ ಸಂದರ್ಭದಲ್ಲಿ ಉದ್ವೇಗಕ್ಕೆ ಒಳಗಾದ ವ್ಯಕ್ತಿಯೊಬ್ಬರು ಪ್ರಜ್ಞಾಶೂನ್ಯರಾಗಿ ಬಿದ್ದರು. ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಯಿತಾದರೂ ಫಲಕಾರಿಯಾಗದೆ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.
ಅಶೋಕ ಸಂಧಾನ ಸೂತ್ರ: ಕಸ ವಿಲೇವಾರಿ ಸಮಸ್ಯೆಯಿಂದ ತತ್ತರಿಸಿರುವ ಬೆಂಗಳೂರಿನ ಸಮಸ್ಯೆಗೆ ಮೂರು ದಿನಗಳಲ್ಲಿ ಪರಿಹಾರ ಸಿಗಲಿದೆ ಎಂದು ಉಪಮುಖ್ಯಮಂತ್ರಿ ಆರ್ ಅಶೋಕ್ ಹೇಳಿದ್ದಾರೆ. ದಿನವೊಂದಕ್ಕೆ 5 ಟನ್ ಕಸ ಉತ್ಪತ್ತಿ ಮಾಡುವ ಬೆಂಗಳೂರಿನ ಸಮಸ್ಯೆ ಪರಿಹಾರಕ್ಕೆ 5 ಕೋಟಿ ಬಿಡುಗಡೆಗೊಳಿಸುವಂತೆ ಸೂಚಿಸಲಾಗಿದೆ.
ಮಾವಳ್ಳಿಪುರ ಪ್ರದೇಶಾಭಿವೃದ್ಧಿಗೆ 8 ಕೋಟಿ ರು ನೀಡಲು ಆದೇಶಿಸಲಾಗಿದೆ. ಕಸ ನಿರ್ವಹಣೆಗೆ ಪ್ರತ್ಯೇಕ ಆಧಿಕಾರಿ ನೇಮಿಸಲಾಗುತ್ತದೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ನಿರ್ದೇಶನ ನೀಡುತ್ತಿದ್ದಾರೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಹೊಸಕೋಟೆಯ ಮಂಡೂರಿಗೆ ಸಾಗಿಸಬೇಕು ಎಂದು ಅಶೋಕ್ ಹೇಳಿದ್ದಾರೆ.
ಆದರೆ, ಮಾವಳ್ಳಿಪುರದಲ್ಲಿ ಸಂಗ್ರಹವಾದ ಟನ್ ಗಟ್ಟಲೆ ಕಸವನ್ನು ತುಂಬಿಕೊಂಡು ಬಂದ ಲಾರಿಗಳು ಕಸ ವಿಲೇವಾರಿ ಮಾಡದೆ ನಿಂತಿದೆ. ಕೆಲವು ಲಾರಿಗಳು ಹೊಸಕೋಟೆ ಬಳಿಯ ಮಂಡೂರು ಹಾಗೂ ರಾಜರಾಜೇಶ್ವರಿ ನಗರ ಬಳಿ ಸಾಲುಗಟ್ಟಿ ನಿಂತಿದೆ. ಕಸ ವಿಲೇವಾರಿ ಮಾಡಲು ಸರ್ಕಾರಕ್ಕೆ ಸೂಕ್ತ ಜಾಗ ಸಿಗದೆ ಪರಿಸ್ಥಿತಿ ಕೈತಪ್ಪುತ್ತಿದೆ.
ಕಳೆದ ಮೂರು ದಿನಗಳಿಂದ ಸುಮಾರು 15 ಸಾವಿರ ಟನ್ ನಷ್ಟು ಕಸ ಕೊಳೆಯುತ್ತಿದೆ. ನಗರದಲ್ಲಿ ಈಗಾಗಲೇ ಡೆಂಘಿ ಜ್ವರದ ಭೀತಿ ಆವರಿಸಿದ್ದು, ಇಲಿಜ್ವರ, ಮಲೇರಿಯಾ, ಟೈಫಾಯ್ಡ್, ಜಾಂಡೀಸ್ ಮುಂತಾದ ಸಾಂಕ್ರಾಮಿಕ ರೋಗಗಳ ಭಯ ಆವರಿಸಿದೆ.
ಪ್ರಾಣಿಗಳ ಮಲಮೂತ್ರಗಳಿರುವ ಜಾಗದಲ್ಲಿ ಓಡಾಡುವಾಗ ಪಾದರಕ್ಷೆ ಹಾಗೂ ಕೈಚೀಲ ಉಪಯೋಗಿಸಬೇಕು, ಕುಡಿಯುವ ನೀರಿನ ಮೂಲದೊಂದಿಗೆ ಇಲಿ ಮತ್ತು ಇತರೆ ಪ್ರಾಣಿಗಳ ಮಲಮೂತ್ರ ವಿಶ್ರಣವಾಗದಂತೆ ಎಚ್ಚರವಹಿಸಬೇಕು, ಇಲಿಗಳ ನಿಯಂತ್ರಣ ಮಾಡಬೇಕು. ಶುದ್ಧ ನೀರು ಹಾಗೂ ಆಹಾರ ಸೇವಿಸಬೇಕು. ಕಸ ಹಾಗೂ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.












Click it and Unblock the Notifications