ಖಾಕಿ ಚಡ್ಡಿಗಳೇ ದೇಶದ ಮೊದಲ ಭಯೋತ್ಪಾದಕರು
ಬೆಂಗಳೂರು, ಆ 21: ಖಾಕಿ ಚಡ್ಡಿ ಹಾಕಿಕೊಂಡು ತಲೆ ಮೇಲೆ ಕಪ್ಪು ಟೋಪಿ ಹೇರಿಕೊಂಡವರು ಅಲ್ಲದೇ ನಾಥೂರಾಮ್ ಘೋಡ್ಸೆಅಂಥವರು ಈ ಭಾರತ ದೇಶದ ಮೊದಲ ಭಯೋತ್ಪಾದಕರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಬಿಜೆಪಿ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು ಕನ್ನಡಿಗರ ದುರದೃಷ್ಟ. ನಮ್ಮ ಈ ಕರ್ನಾಟಕ ರಾಜ್ಯದಲ್ಲಿ ಮುಖಮಂತ್ರಿ ಎನ್ನುವ ಘನ ಹುದ್ದೆಗೆ ಬೆಲೆ ಅನ್ನೋದೇ ಇಲ್ಲ. ಈ ರಾಜ್ಯದ ಅಧಿಕಾರದ ಸೂತ್ರವಿರುವುದೇ ಕೇಶವಕೃಪದಲ್ಲಿ ಎಂದು ಹರಿಪ್ರಸಾದ್ ಟಿವಿ9 ವಾಹಿನಿ ನಡೆಸುವ ಚಕ್ರವ್ಯೂಹ (ಭಾನುವಾರ ಆಗಸ್ಟ್ 19) ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕಾರ್ಯಕ್ರಮದ ಉದ್ದಕ್ಕೂ ಬಿಜೆಪಿ ಮತ್ತು ಸಂಘಪರಿವಾರವನ್ನು ಅಕ್ಷರಸಃ ತರಾಟೆಗೆ ತೆಗೆದುಕೊಂಡ ಹರಿಪ್ರಸಾದ್, ಬಿಜೆಪಿಗೆ ಗೊತ್ತಿರುವುದು ಮೂರೇ ಮೂರು ಕಾಮನ್ ಸಿವಿಲ್ ಕೋಡ್, ಆರ್ಟಿಕಲ್ 371 ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ. ಮಂದಿರ ನಿರ್ಮಾಣಕ್ಕಾಗಿ ಬಂದ ಇಟ್ಟಿಗೆಗಳ ಗತಿ ಏನಾಯಿತೋ?
ಖಾಕಿ ಚಡ್ಡಿ, ಕಪ್ಪು ಟೋಪಿ, ಕೈಯಲ್ಲೊಂದು ಕೋಲು ಹಿಡಿದುಕೊಂಡರೆ ತಾವೇ ದೇಶಭಕ್ತರು, ತಮ್ಮನ್ನು ಬಿಟ್ಟರೆ ದೇಶವನ್ನು ಕಾಯುವವರು ಯಾರೂ ಇಲ್ಲ ಎನ್ನುವ ಭಾವನೆ ಖಾಕಿ ಚಡ್ಡಿ ಮುಖಂಡರಿಗೆ ಇದೆ. ಜನರ ಧಾರ್ಮಿಕ ಭಾವನೆಗಳ ಜೊತೆ ಆಟವಾಡುವ ಇವರೇ ದೇಶದ ಮೊದಲ ಉಗ್ರರು ಎಂದು ಹರಿಪ್ರಸಾದ್ RSS ಸಂಘಟನೆಯ ವಿರುದ್ದ ಕಿಡಿಕಾರಿದ್ದಾರೆ.
ಈಶಾನ್ಯ ಭಾಗದ ಜನರು ಗುಳೇ ಹೊರಟಿದ್ದಕ್ಕೆ ಸಂಘಪರಿವಾರಗಳೇ ಕಾರಣ. ಚುನಾವಣೆ ಸಮೀಪಿಸುತ್ತಿರುವ ಈ ಸಮಯದಲ್ಲಿ ಕೇಸರಿ ಪಡೆಗಳು ನಿರ್ದೇಶಿಸುತ್ತಿರುವ ಈ ಬೃಹನ್ ನಾಟಕಕ್ಕೆ ಬಿಜೆಪಿ ತಾಳ ಹಾಕುತ್ತಿದೆ. ಒಂದು ಕೋಮಿನ ವಿರುದ್ದ ನಡೆಸಲಾಗುತ್ತಿರುವ ವ್ಯವಸ್ಥಿತ ಸಂಚಿದು. ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಪರಮೇಶ್ವರ್ ಕೂಡಾ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
RSS ಎಂದರೆ ನನ್ನ ಮಟ್ಟಿಗೆ Romour Spreading Sangha. ಅಸ್ಸಾಂ ಭಾಗದ ಜನರು ರಾಜ್ಯ ಬಿಟ್ಟು ಹೋಗುವುದು, ಗಣೇಶ ಹಾಲು ಹೀರುವುದು, ಸಾಯಿ ಬಾಬ ಕಣ್ಣಿನಲ್ಲಿ ನೀರು ಬರುವುದು, ಮಂಗಳೂರು ಪಬ್ ಮೇಲೆ ದಾಳಿ ಈ ಎಲ್ಲದರ ಹಿಂದೆ ಖಾಕಿ ಚಡ್ಡಿಗಳ ನೇರ ಕೈವಾಡವಿದೆ. ಮಹಿಳೆಯರನ್ನು ಗೌರವಿಸುವ ಈ ನಾಡಿನಲ್ಲಿ ಮಹಿಳೆಯರ ಮೇಲೆ ದಾಳಿ ಮಾಡುವ ಅಥವಾ ಮಾಡಿಸುವದು ಇದೇ ಕೇಸರಿ ಪಡೆಗಳು.
ಭಿನ್ನಮತ ಎನ್ನುವುದು ರಾಜಕೀಯದ ಇನ್ನೊಂದು ಅಂಗವಾಗಿ ಹೋಗಿದೆ. ಅದಕ್ಕೆ ಕಾಂಗ್ರೆಸ್ ಪಕ್ಷ ಕೂಡಾ ಹೊರತಾಗಿಲ್ಲ ರಾಜ್ಯಾಧ್ಯಕ್ಷರಾದವರು ಮುಖ್ಯಮಂತ್ರಿ ಆಗಬೇಕೆಂದೇನೂ ಇಲ್ಲ. ಎಲ್ಲಾ ಒಟ್ಟಿಗೆ ಸೇರಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತಂದು ಸಂಘಪರಿವಾರವನ್ನು ಮಟ್ಟ ಹಾಕುವದು ನಮ್ಮ ಮೂಲ ಉದ್ದೇಶವೆಂದು ಹರಿಪ್ರಸಾದ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಶಾಮನೂರು ಶಿವಶಂಕರಪ್ಪನವರು ತನ್ನ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕೆ ಮುಡಿಪಾಗಿಟ್ಟಿದ್ದಾರೆ. ಅವರು ಯಾವುದೇ ಹುದ್ದೆಯನ್ನು ಬಯಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕಾದವರು ಹೈಕಮಾಂಡ್.
ನಮ್ಮ ಪಕ್ಷದಲ್ಲಿ ಹೈಕಮಾಂಡ್ ಎನ್ನುವ ಪದಕ್ಕೆ ಬೆಲೆಯಿದೆ. ಪಕ್ಷದ ಹೋಬಳಿ ಮಟ್ಟದ ಕಾರ್ಯಕರ್ತನಿಂದ ಹಿಡಿದು ಕ್ಯಾಬಿನೆಟ್ ಸಚಿವರ ತನಕ ಹೈಕಮಾಂಡ್ ಆದೇಶ ಪಾಲಿಸುತ್ತಾರೆ. ಬಿಜೆಪಿ ಪಕ್ಷದ ಮಾಜಿ ಮುಖ್ಯಮಂತ್ರಿಗಳು ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಈ ಬಗ್ಗೆ ಪಾಠ ಕಲಿಯಲಿ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
RSS ಸಂಘಟನೆಯನ್ನು ಉಗ್ರರಿಗೆ ಹೋಲಿಸಿದ ಹರಿಪ್ರಸಾದ್ ಅವರ ಈ ಗಂಭೀರ ಮತ್ತು ಚರ್ಚಾಸ್ಪದ ಹೇಳಿಕೆಗೆ ಓದುಗರೇ ನಿಮ್ಮ ಸಹಮತವಿದೆಯೇ? ವಿರೋಧವಿದೆಯೇ?