ಅಜ್ಮೀರ್ ದರ್ಗಾಕ್ಕೆ ನಜರಾನಾ ಅರ್ಪಿಸಿದ ಪಾಕ್ ಅಧ್ಯಕ್ಷ
ಅಜ್ಮೀರ್ (ಜೈಪುರ), ಆ. 20: ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ವಿಶಿಷ್ಟವಾಗಿ ಈದ್ ಮುಬಾರಕ್ ಹೇಳಿದ್ದಾರೆ. ಅವರು ಕೊಟ್ಟ ಮಾತಿನಂತೆ ಇಲ್ಲಿನ ಖ್ಯಾತ ಸಂತ ಸೂಫಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಅಭಿವೃದ್ಧಿಗಾಗಿ ರಂಜಾನ್ ಆಚರಣೆ ಮುನ್ನಾ ಕಾಲದಲ್ಲಿ 5 ಕೋಟಿ ರು. ಕಾಣಿಕೆ (ನಜರಾನಾ) ಸಲ್ಲಿಸಿದ್ದಾರೆ.

ಅದರಂತೆ ಪಾಕ್ ನಿಯೋಗವಂದು ಮೊನ್ನೆ ಶುಕ್ರವಾರ ಸಂಜೆ ದರ್ಗಾದ ಆಡಳಿತ ಮಂಡಳಿಗೆ ಮೂರು ಚೆಕ್ ಮೂಲಕ ಈ ಮೊತ್ತವನ್ನು ಸಂದಾಯ ಮಾಡಿದೆ. ಈ ಮೊತ್ತವನ್ನು ಪಾಕಿಸ್ತಾನ ರಾಯಭಾರ ಕಚೇರಿಯ ನಿಯೋಗವೊಂದು ಇಲ್ಲಿನ ಸರಕಾರಿ ಸರ್ಕೀಟ್ ಹೌಸ್ನಲ್ಲಿ ವಿತರಿಸಿತು ಎಂದು ಅಂಜುಮಾನ್ ಸಮಿತಿಯ ಉಪಾಧ್ಯಕ್ಷ ಸಯ್ಯದ್ ಖಲಿಮುದ್ದೀನ್ ಚಿಸ್ತಿ ಹೇಳಿದರು.
ಅಂಜುಮಾನ್ ಸಯ್ಯದ್ ಯಾದಗಾರ್ ಗೆ 3 ಕೋಟಿ, ಅಂಜುಮಾನ್ ಷೇಕ್ ಯಾದಗಾರ್ ಗೆ 1 ಕೋಟಿ ರೂ. ಮತ್ತು ದರ್ಗಾ ಸಮಿತಿಗೆ 2 ಕೋಟಿ ರೂಪಾಯಿಯ ಚೆಕ್ ವಿತರಣೆಯಾಯಿತು ಎಂದು ಅಜ್ಮೀರ್ ಜಿಲ್ಲಾಧಿಕಾರಿ ವೈಭವ್ ಗಲರಿಯಾ ತಿಳಿಸಿದರು.
ವಿವಾದದ ಹೊಗೆ: 56ರ ಹರೆಯದ ಜರ್ದಾರಿ ಜತೆಗೆ ಅವರ ಪುತ್ರ ಬಿಲಾವಲ್ ಕೂಡ ಆಗಮಿಸಿದ್ದರು. ಈ ದೇಣಿಗೆ ಇತ್ತೀಚಿನ ವರ್ಷಗಳಲ್ಲಿ ಸ್ವೀಕರಿಸಲಾದ ಬೃಹತ್ ಮೊತ್ತವಾಗಿದೆ. ದೇಣಿಗೆ ವಿತರಿಸುವುದಕ್ಕಾಗಿ ಪಾಕಿಸ್ತಾನ ರಾಯಭಾರ ಕಚೇರಿಯ ಆರು ಸದಸ್ಯರ ತಂಡವೊಂದು ಶುಕ್ರವಾರ ಬೆಳಗ್ಗೆ ಅಜ್ಮೀರ್ಗೆ ಆಗಮಿಸಿತ್ತು ಎಂದು ದರ್ಗಾದ ಅಂಜುಮಾನ್ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.
'ಈ ಹಣ ಸಂದಾಯದ ಬಗ್ಗೆ ಪಾರಂಪರಿಕವಾಗಿ ದರ್ಗಾದ ಪ್ರಾರ್ಥನೆ ಮಾಡುತ್ತಾ ಬಂದಿರುವವರು ಮತ್ತು ಸರಕಾರದ ಆಡಳಿತಾಧಿಕಾರಿ ನಡುವೆ ಸಣ್ಣ ಮಟ್ಟದ ಭಿನ್ನಾಭಿಪ್ರಾಯ, ವಾಗ್ವಾದ ಎದ್ದಿತ್ತು.
ಹಾಗಾಗಿ, ಪಾಕಿಸ್ತಾನಿ ನಿಯೋಗ ಮತ್ತು ಅಂಜುಮಾನ್ ಸಮಿತಿಯ ಸದಸ್ಯರ ನಡುವೆ ಮೂರು ಗಂಟೆಗಳ ಕಾಲ ಬಿಸಿಬಿಸಿ ಮಾತುಕತೆ ನಡೆಯಿತು. ಕೊನೆಗೂ ವಿವಾದಗಳನ್ನು ಬಗೆಹರಿಸಿ ಕೊಳ್ಳಲಾಯಿತು ಹಾಗೂ ಹಣವನ್ನು ಸಂಜೆ ದರ್ಗಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು' ಎಂದು ಮೂಲಗಳು ತಿಳಿಸಿವೆ.
ಖುಷಿ ಮೆಹಸೂಸ್ ಹುಯಿ: 'ಇಸ್ ಮುಕದ್ದಸ್ ಮುಕಾಮ್ ಪರ್ ಅಕರ್ ಮುಜೆ ಜೊ ರುಹಾನಿ ಖುಷಿ ಮೆಹಸೂಸ್ ಹುಯಿ ಹೈ ವೊ ನ ಕಭೀ ಎ ಬಯಾನ್ ಹೈ. ಅಲ್ಲಾ ತಲಾ ಸೆ ದುವಾ ಹೈ ಕಿ ವೊ ತಮಾಮ್ ಇನ್ಸಾನಿಯತ್ ಕೆ ಲಿಯೆ ಆಸಾನಿಯಾ ಪೈದಾ ಕರೇ. ಅಮೀನ್'
(ಈ ಪವಿತ್ರ ಸ್ಥಳಕ್ಕೆ ಬಂದ ಬಳಿಕ ನನಗೆ ಆಧ್ಯಾತ್ಮಿಕ ಪರಮಾನಂದದ ಅನುಭಾವವಾಗುತ್ತಿದೆ. ಇದನ್ನು ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಮನುಕುಲದ ಒಳಿತಿಗೆ ತಕ್ಕ ವಾತಾವರಣ ನಿರ್ಮಿಸುವಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಮೀನ್) ಎಂದು ಸಂದರ್ಶಕರ ಪುಸ್ತಕದಲ್ಲಿ ಜರ್ದಾರಿ ಅಂದು ಬರೆದಿದ್ದರು.












Click it and Unblock the Notifications