ಅಸ್ಸಾಂ ಗಲಭೆ, ವಲಸೆ ಹಿಂದೆ ಪಾಕಿ ಐಎಸ್ ಐ ಕೈವಾಡ
ಅಸ್ಸಾಂ ಗಲಭೆ ಹಾಗೂ ಭಾರತದ ಆತರಿಂಕ ಭದ್ರತೆ ಕೆಡಿಸಲು ಪಾಕಿಸ್ತಾನದ ಐಎಸ್ ಐ ಸಂಘಟನೆ ಕಾರಣ ಎಂದು ಗುಪ್ತಚರ ಇಲಾಖೆ ದೃಢಪಡಿಸಿದೆ. ಐಎಸ್ ಐ ಪ್ರೇರಿತ ಸಮಾಜಘಾತುಕ ಶಕ್ತಿಗಳು ಬೆದರಿಕೆ ಕರೆ ಹಾಗೂ ಆತಂಕ ಸೃಷ್ಟಿಸುತ್ತಿದ್ದಾರೆ.
ಆಸ್ಸಾಂನಲ್ಲಿ ಕಳೆದ 15 ದಿನಗಳ ಹಿಂದೆ ಬೋಡೋ ಹಾಗೂ ಮುಸ್ಲಿಂ ಸಮುದಾಯದ ನಡುವೆ ತೀರ್ವ ಘರ್ಷಣೆ ಏರ್ಪಟ್ಟಿತ್ತು. ಇದರಲ್ಲಿ ನೂರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಲಕ್ಷಾಂತರ ಜನರು ನಿರಾಶ್ರಿತರಾದರು.
ಬಾಂಗ್ಲಾದೇಶದಿಂದ ಬಂದ ನಿರಾಶ್ರಿತರು ಹಾಗೂ ಸ್ಥಳೀಯ ಬೋಡೋ ಗಳ ನಡುವೆ ನಡೆದ ಜನಾಂಗೀಯ ಘರ್ಷಣೆಯ ಲಾಭವನ್ನು ಪಾಕಿಸ್ತಾನ ಪಡೆದಿದೆ. ಮುಸ್ಲಿಂ ಜನಾಂಗವನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡಲಾಗಿದೆ ಎಂದು ವದಂತಿ ಹಬ್ಬಿಸಲಾಗಿದೆ. ಇದರಿಂದ ಐಎಸ್ ಐ ತನ್ನ ಕಾರ್ಯತಂತ್ರ ರೂಪಿಸಲು ಸಾಧ್ಯವಾಯಿತು ಎಂದು ಗುಪ್ತಚರ ಇಲಾಖೆ ಹೇಳಿದೆ.
ಬೆಂಗಳೂರಿನ ಕೋರಮಂಗಲ, ಬಾಣಸವಾಡಿ, ಇಂದಿರಾನಗರ, ಬನಶಂಕರಿ, ಕೆಆರ್ ಪುರಂ, ನಾಗವಾರ, ಶಾಂತಿನಗರ ಸೇರಿದಂತೆ ಹಲವೆಡೆ ಈಶಾನ್ಯ ಭಾಗದ ಜನರಿಗೆ ಬೆದರಿಕೆ ಒಡ್ಡಲಾಗಿದೆ. ಜೀವ ಭಯದಿಂದ ಪೂರ್ವಾಂಚಲ ರಾಜ್ಯದ ಕಡೆಗೆ ಎಲ್ಲರೂ ತೆರಳುವಂತೆ ಮಾಡಲಾಗಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಕೈ ಜೋಡಿಸಿ ಪಾಕ್ ತಂತ್ರವನ್ನು ನಿಷ್ಫಲಗೊಳಿಸಿರುವುದು ಐಎಸ್ ಐಗೆ ಭಾರಿ ಹಿನ್ನೆಡೆಯಾಗಿದೆ ಎನ್ನಲಾಗಿದೆ.
ಒಟ್ಟಾರೆ, ಸುಳ್ಳು ಸುದ್ದಿಯನ್ನು ಪಾಕಿಸ್ತಾನದವರು ಹಬ್ಬಿಸಿದರೋ, ಅಥವಾ ಸುಳ್ಳು ವದಂತಿಯ ಲಾಭ ಪಡೆದರೋ ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕದಲ್ಲಿ ಮಾತ್ರ ಉಗ್ರರ ಅಟ್ಟಹಾಸ, ಕುತಂತ್ರಕ್ಕೆ ಬ್ರೇಕ್ ಬಿದ್ದಿದೆ. [ಗ್ಯಾಲರಿ]
ಅಸ್ಸಾಂ ನಿರಾಶ್ರಿತರ ಸಂಖ್ಯೆ : ಅತ್ತ ಅಸ್ಸಾಂನಲ್ಲೂ ಪರಿಸ್ಥಿತಿ ಚೆನ್ನಾಗಿಲ್ಲ. ಅಲ್ಲಿನ ಹಿಂಸಾಪೀಡಿತ ಜಿಲ್ಲೆಗಳ ನಿರಾಶ್ರಿತರ ಶಿಬಿರಗಳಿಂದ 10,000 ಮಂದಿ ತಮ್ಮ ಸ್ವಗ್ರಾಮಗಳಿಗೆ ವಾಪಸಾಗಿದ್ದಾರೆ. ರಾಜ್ಯದ ವಿವಿಧೆಡೆಯ ಶಿಬಿರಗಳಲ್ಲಿನ ಒಟ್ಟು ನಿರಾಶ್ರಿತರ ಸಂಖ್ಯೆ 2,92,852ಕ್ಕೆ ಇಳಿದಿದೆ.
ಕೊಕ್ರಝಾರ್, ಚಿರಂಗ್, ಧುಬ್ರಿ ಮತ್ತು ಬೊಂಗೈಗಾಂವ್ ಜಿಲ್ಲೆಗಳ 175 ಮುಸ್ಲಿಂ ಶಿಬಿರಗಳಲ್ಲಿ 2,31,308 ಮಂದಿ ಹಾಗೂ 51 ಬೋಡೋ ಶಿಬಿರಗಳಲ್ಲಿ 64,439 ಮಂದಿ ಮತ್ತು ಇತರ ಸಮುದಾಯಗಳಿಗೆ ಸೇರಿದ 1 ಶಿಬಿರದಲ್ಲಿ 105 ಮಂದಿ ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ.
ಧುಬ್ರಿ ಜಿಲ್ಲೆಯಲ್ಲಿ ಮುಸ್ಲಿಮರಿಗಾಗಿ 133 ಶಿಬಿರಗಳನ್ನು ನಿರ್ಮಿಸಲಾಗಿದ್ದು, 1,55,314 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಈ ಜಿಲ್ಲೆಯಲ್ಲಿ ಬೋಡೋಗಳಿಗೆ ಯಾವುದೇ ಶಿಬಿರವಿಲ್ಲ. ಹಲವು ದಿನಗಳ ಕಾಲ ನಡೆದ ಹಿಂಸಾಚಾರಗಳಲ್ಲಿ ನಿರಾಶ್ರಿತರಾದವರ ಸಂಖ್ಯೆ 4,85,921 ಕ್ಕೇರಿದೆ.