ಪುತ್ರನ ಮಾತನಾಡಿಸಿ ಸಂಡೂರಿನತ್ತ ಹೊರಟ ರೆಡ್ಡಿ
ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ, ಅವರ ಪುತ್ರ 5ನೇ ತರಗತಿಯಲ್ಲಿ ಓದುತ್ತಿರುವ ಕಿರೀಟಿ ಮತ್ತು 10ನೆಯ ತರಗತಿಯಲ್ಲಿ ಓದುತ್ತಿರುವ ಪುತ್ರಿ ಬ್ರಹ್ಮಿಣಿ ಜೈಲಿನಲ್ಲಿ ರೆಡ್ಡಿಯನ್ನು ಇಂದು ಬೆಳಗ್ಗೆ ಭೇಟಿ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿ: ಜನಾರ್ದನ ರೆಡ್ಡಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಲಾಗಿದೆ.
2006ರಲ್ಲಿ ಗಡಿ ಒತ್ತುವರಿ ಹಾಗೂ ಕೊಲೆ ಬೆದರಿಕೆ ಆರೋಪದ ವಿಚಾರಣೆಗಾಗಿ ರೆಡ್ಡಿಯನ್ನು ಸಂಡೂರು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಬಳ್ಳಾರಿ ಜೈಲಿಗೆ ಪೊಲೀಸರು ನಿನ್ನೆ ರಾತ್ರಿ 8.30ಕ್ಕೆ ಕರೆತಂದಿದ್ದರು.
ಗಮನಾರ್ಹವೆಂದರೆ ತೋರಣಗಲ್ ಠಾಣೆಯಲ್ಲಿ ದೂರು ದಾಖಲಿಸಿದ್ದ ದೂರುದಾರ ತುಮಟಿ ಮೈನ್ಸ್ ಕಂಪನಿಯ ಮಾಲೀಕ ಟಪಾಲ್ ನಾರಾಯಣ ರೆಡ್ಡಿ ಅವರು 2011ರ ಏಪ್ರಿಲ್ 1ರಂದು ಮೃತಪಟ್ಟಿದ್ದಾರೆ. ನಾರಾಯಣ ರೆಡ್ಡಿ ದೂರನ್ನು ಪರಿಗಣಿಸಿದ ಸಂಡೂರಿನ ನ್ಯಾಯಾಲಯ ಆರೋಪಿ ಜನಾರ್ದನ ರೆಡ್ಡಿಗೆ 10ನೇ ಬಾರಿ ಸಮನ್ಸ್ ಜಾರಿ ಮಾಡಿತ್ತು.
2006ರಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತು ಆಂಧ್ರದ ರಾಯದುರ್ಗದ ಹಾಲಿ ಶಾಸಕ, ಜನಾರ್ದನ ರೆಡ್ಡಿಯ ಸಂಬಂಧಿ ಕಾಪು ರಾಮಚಂದ್ರಾ ರೆಡ್ಡಿ, ಓಎಂಸಿ ಗಣಿ ವ್ಯಸವ್ಥಾಪಕ ಲಕ್ಷ್ಮಿಪ್ರಸಾದ್ ಸೇರಿ ಒಟ್ಟು ನಾಲ್ಕು ಮಂದಿಯ ವಿರುದ್ಧ ಗಡಿ ಒತ್ತುವರಿ ಮತ್ತು ಪ್ರಾಣ ಬೆದರಿಕೆ ಒಡ್ಡಿದ ಆರೋಪ ಹೊರೆಸಿ ಟಿ ನಾರಾಯಣ ರೆಡ್ಡಿ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ, ಸಂಡೂರು ಕೋರ್ಟಿಗೆ ವರದಿ ಸಲ್ಲಿಸಿದ್ದರು.
ಈ ಮಧ್ಯೆ, ರೆಡ್ಡಿ ಹೊರತುಪಡಿಸಿ ಉಳಿದ ಆರೋಪಿಗಳು ಕೋರ್ಟಿಗೆ ಹಾಜರಾಗಿ, ಹೇಳಿಕೆ ನೀಡಿ ಜಾಮೀನು ಪಡೆದುಕೊಂಡಿದ್ದರು. ಇದೇ ವೇಳೆ, ರೆಡ್ಡಿ ಮೇಲಿನ ವಿಚಾರಣೆಯನ್ನು ಕೈಬಿಡುವಂತೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ದೋಷಾರೋಪ ಪಟ್ಟಿ ಪರಿಗಣಿಸಿದ್ದ ಹೈಕೋರ್ಟ್, ಆರೋಪಗಳ ಕುರಿತು ಮೇಲ್ನೋಟಕ್ಕೆ ಕಂಡುಬರುವ ಅಂಶಗಳ ಬಗ್ಗೆ ಹೊಸದಾಗಿ ವಿಚಾರಣೆ ನಡೆಸುವಂತೆ ಆದೇಶಿಸಿದ್ದರಿಂದ ಸಂಡೂರಿನ JMFC ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.