ಜೈಲಿನಿಂದ ಹೊರಬಿದ್ದ ಗಾಲಿ ಜನಾರ್ದನ ರೆಡ್ಡಿ
ಮಾರ್ಚ್ 3 ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ ಗಾಲಿ ರೆಡ್ಡಿ ಅವರನ್ನು ವಿಚಾರಣೆಗಾಗಿ ಸಂಡೂರಿನ ಕೋರ್ಟಿಗೆ ಕರೆಸಿಕೊಳ್ಳಲಾಗಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಭಾಗದ ನಕ್ಷೆ ವಿರೂಪ ಗೊಳಿಸಿದ ಹಾಗೂ ಗಡಿ ನಿಯಮ ಉಲ್ಲಂಘಿಸಿದ ಆರೋಪ ಹೊತ್ತಿರುವ ಗಾಲಿ ರೆಡ್ಡಿ ವಿರುದ್ಧ ವಾರೆಂಟ್ ಜಾರಿಯಾಗಿತ್ತು.
ಟಿ ನಾರಾಯಣ ರೆಡ್ಡಿ ಎಂಬುವರು ದಾಖಲಿಸಿದ ದೂರನ್ನು ಪರಿಗಣಿಸಿದ ಸಂಡೂರಿನ ನ್ಯಾಯಾಲಯ ಆರೋಪಿ ಜನಾರ್ದನ ರೆಡ್ಡಿ ಅವರಿಗೆ ಸುಮಾರು 9 ಬಾರಿ ಸಮನ್ಸ್ ಜಾರಿ ಮಾಡಿತ್ತು.
ಸಂಡೂರಿನ ಕೋರ್ಟ್ ವಿಚಾರಣೆಗೆ ಗಾಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ತಂಡ ಸುರಕ್ಷಿತವಾಗಿ ಬೆಂಗಳೂರಿನಿಂದ ಕರೆದೊಯ್ಯುತ್ತಿದೆ. ಗುರುವಾರ ರಾತ್ರಿ ಸಂಡೂರಿನಲ್ಲೇ ಜನಾರ್ದನ ರೆಡ್ಡಿ ಅವರನ್ನು ನಿಗೂಢ ಸ್ಥಳದಲ್ಲಿ ಇರುಸುವ ಸಾಧ್ಯತೆಯಿದ್ದು, ಶುಕ್ರವಾರ(ಆ.17) ಬೆಳಗ್ಗೆ ಕೋರ್ಟಿಗೆ ಹಾಜರು ಪಡಿಸಲಾಗುತ್ತದೆಎಂದು ತಿಳಿದು ಬಂದಿದೆ.
2006ರಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತು ಆಂಧ್ರದ ಹಾಲಿ ಶಾಸಕ ಕಾಪು ರಾಮಚಂದ್ರಾರೆಡ್ಡಿ ಸೇರಿ ನಾಲ್ಕು ಜನರ ವಿರುದ್ಧ ಗಡಿ ಒತ್ತುವರಿ ಮತ್ತು ಪ್ರಾಣ ಬೆದರಿಕೆ ಒಡ್ಡಿದ ಆರೋಪ ಹೊರೆಸಿ ಟಿ ನಾರಾಯಣ ರೆಡ್ಡಿ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ, ಸಂಡೂರು ಕೋರ್ಟಿಗೆ ವರದಿ ಸಲ್ಲಿಸಿದ್ದರು.
ಸಂಡೂರು ನ್ಯಾಯಾಲಯ ಆರೋಪಿ ಗಾಲಿ ರೆಡ್ಡಿ ಅವರಿಗೆ ಹಲವು ಬಾರಿ ಕೋರ್ಟಿಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಗೆ ರೆಡ್ಡಿ ಬೆಲೆ ಕೊಡದಿದ್ದಾಗ ವಾರೆಂಟ್ ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಡೂರಿನ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿ ಸಿಬಿಐ, ಕಾರಾಗೃಹದ ಅಧಿಕಾರಿಗಳಿಗೆ ಪ್ರಕರಣದ ಬಗ್ಗೆ ವಿವರಿಸಿ ಗಾಲಿ ರೆಡ್ಡಿಯನ್ನು ಕರೆದೊಯ್ಯಲು ಅನುಮತಿ ಕೋರಿದರು. ಅದಂತೆ ಗಾಲಿ ರೆಡ್ಡಿಯನ್ನು ಸಂಡೂರಿಗೆ ಕರೆದೊಯ್ಯಲಾಗುತ್ತಿದೆ.
ಎಸಿಬಿ ವಶಕ್ಕೆ ರೆಡ್ಡಿ?: ಓಬುಳಾಪುರಂ ಸಂಸ್ಥೆ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಅವರನ್ನು ಆಂಧ್ರಪ್ರದೇಶದ ಎಸಿಬಿ ತನ್ನ ವಶಕ್ಕೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ. ಬೇಲ್ ಗಾಗಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ಸೋದರ ಸೋಮಶೇಖರ ರೆಡ್ಡಿ ಹಾಗೂ ಆಪ್ತ ಸುರೇಶ್ ಬಾಬು ಅವರನ್ನು ಎಸಿಬಿ ಬಂಧಿಸಿ ಚೆರ್ಲಪಲ್ಲಿ ಜೈಲಿಗೆ ಕಳಿಸಿದೆ.
ಈಗ Prisoner Transit (PT) ವಾರೆಂಟ್ ಮೂಲಕ ಜನಾರ್ದನ ರೆಡ್ಡಿ ಅವರನ್ನು ತನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲು ಎಸಿಬಿ ಸಿದ್ಧವಾಗಿದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಎಸಿಬಿ ಹಲವು ದಿನಗಳಿಂದ ಸಂಡೂರು, ಬಳ್ಳಾರಿ ಗಣಿ ಧೂಳಿನಲ್ಲಿ ಸಂಚರಿಸುತ್ತಿದ್ದು, ಗಾಲಿ ರೆಡ್ಡಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದೆ. ಸುರೇಶ್ ಬಾಬು ಭದ್ರತಾ ಸಿಬ್ಬಂದಿ ಹಾಗೂ ಗನ್ ಮ್ಯಾನ್ ಗಳ ವಿಚಾರಣೆ ವಿಚಾರಣೆ ಮುಗಿಸಿರುವ ಎಸಿಬಿ ನಂತರ ರೆಡ್ಡಿ ಕುಟುಂಬದತ್ತ ಕಣ್ಣು ಹಾಕಿದೆ.